ಭಾರತ ಸಂವಿಧಾನ ಶಿಲ್ಪಿಯಾದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಸ್ತ ಭಾರತದ ಸರ್ವ ಜನಾಂಗಗಳಿಗೂ ಸಮಾನ ಅವಕಾಶಗಳು ಹಾಗೂ ಸ್ಥಾನಮಾನಗಳು ದೊರೆಯುವಂತೆ ಮಾಡಿದ ಸರ್ವೋತ್ತಮ ರಾಷ್ಟ್ರನಾಯಕರು ಎಂದು ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ ಅವರು ಅಭಿಪ್ರಾಯಪಟ್ಟರು.
ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಗ್ರಾಮದಲ್ಲಿ ‘ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಬಳಗ’ದ ವತಿಯಿಂದ ಆಯೋಜಿಸಲಾಗಿದ್ದ ‘ವಿಶ್ವಜ್ಞಾನಿ, ಬೋಧಿಸತ್ವ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜಯಂತ್ಯುತ್ಸವ ಹಾಗೂ ಸಾಧಕರಿಗೆ “ಭೀಮರತ್ನ ಸಮ್ಮಾನ್” ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತವಾದ ನಾಯಕರಲ್ಲ. ಭಾರತದ ಎಲ್ಲಾ ಜಾತಿ ಜನರಿಗೂ ಸಂಬಂಧಪಟ್ಟವರು. ಸಾವಿರಾರು ವರ್ಷಗಳಿಂದ ಜಾರಿಯಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಉತ್ತಮವಾದ ರಾಷ್ಟ್ರವನ್ನು ನಿರ್ಮಾಣ ಮಾಡಲಿಕ್ಕಾಗಿ ಹಗಲುರಾತ್ರಿ ಶ್ರಮಿಸಿದರು. ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಎಲ್ಲರೂ ಘನತೆ ಹಾಗೂ ನೆಮ್ಮದಿಯಿಂದ ಬಾಳುವಂತೆ ಸಂವಿಧಾನವನ್ನು ರೂಪಿಸಿಕೊಟ್ಟಿದ್ದಾರೆ ಎಂದರು.
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಎಲ್ಲಾ ವರ್ಗದ ಮಹಿಳೆಯರ ಬದುಕುಗಳನ್ನು ಶೋಷಣೆಮುಕ್ತವಾಗಿ ಮಾಡಲು ರಾಷ್ಟ್ರಮಟ್ಟದಲ್ಲಿ ದನಿ ಎತ್ತಿದವರು ಅಂಬೇಡ್ಕರ್. ಅವರು ನೀಡಿದ ಹಕ್ಕುಗಳ ಕಾರಣದಿಂದಲೇ ಇಂದು ಪ್ರತೀ ಗ್ರಾಮಗಳಲ್ಲಿ ಹಾಗೂ ಪ್ರತೀ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಲು ಸಾಧ್ಯವಾಗಿದೆ. ಮಹಿಳೆಯರು ಪುರುಷರ ಸಮಾನವಾಗಿ ಸಾಧನೆ ಮಾಡಲು ಸಾಧ್ಯವಾಗಿದೆ. ಗ್ರಾಮಪಂಚಾಯಿತಿ ಮಟ್ಟದಿಂದ ಹಿಡಿದು ಲೋಕಸಭೆಯವರೆಗೂ ಮಹಿಳೆಯರು ತಮ್ಮದೇ ಆದ ಛಾಪನ್ನು ಮೂಡಿಸಲು ಸಾಧ್ಯವಾಗಿರುವುದು ಭಾರತ ಸಂವಿಧಾನದಿಂದ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಧಕರಿಗೆ “ಭೀಮರತ್ನ ಸಮ್ಮಾನ್” ಪುರಸ್ಕಾರ:
ಶೈಕ್ಷಣಿಕ ಹಾಗೂ ಸಾಹಿತ್ಯಕ ಕ್ಷೇತ್ರದಲ್ಲಿ ಗಣನೀಯವಾದ ಸಾಧನೆ ಮಾಡಿದ ಗ್ರಾಮದ ಸಾಧಕರಿಗೆ “ಭೀಮರತ್ನ ಸಮ್ಮಾನ್” ಪುರಸ್ಕಾರ ನೀಡುವ ಮೂಲಕ ಶಾಸಕರು ಗೌರವಿಸಿದರು.
ಪಿಎಚ್.ಡಿ ಸಾಧಕರಾದ ಡಾ.ನಾರಾಯಣಪ್ಪ ಕೆ.ಎಂ., ಡಾ.ರವಿಕುಮಾರ್.ಜೆ., ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಡಾ.ಹೇಮಲತ ಪಿ.ಎನ್., ಡಾ.ರಮ್ಯ ಕೆ.ಎನ್., ಎಂಬಿಬಿಎಸ್, ಸ್ನಾತಕೋತ್ತರ ಪದವಿ ಸಾಧಕರಾದ ರವಿ ಆರ್., ಶ್ರೀಮತಿ ಅನಿತ ಜೆ., ಶ್ರೀಮತಿ ದಾಕ್ಷಾಯಿಣಿ ಕೆ.ಎನ್., ಶ್ರೀಮತಿ ಜಾನಕಿ ಕೆ.ಎನ್., ಶ್ರೀಮತಿ ಶಾಂತಲಾ ರವಿ, ನಾಗೇಶ್ ಕೆ.ಎನ್., ಜಗದೀಶ್ ಕೆ.ಎನ್., ತ್ರಿಲೋಕ್ ಕೆ.ಎನ್., ಅಮರೇಶ ಎಂ., ಶಮಂತ್ ಸಿ., ಪದವೀಧರರಾದ ಸಂತೋಷಕುಮಾರ್ ಜೆ., ಮಂಜುನಾಥ ಎಂ., ಶ್ರೀಮತಿ ಶೈಲಜಾ ವಿ., ಕುಮಾರಿ ವಸಂತಕುಮಾರಿ ಕೆ.ವೈ. ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಸರ್ಕಾರದ ಅಭಿಯೋಗ ಇಲಾಖೆಯ ನಿವೃತ್ತ ಆಡಳಿತಾಧಿಕಾರಿಗಳು ಹಾಗೂ ಕುಪ್ಪನಹಳ್ಳಿ ಗ್ರಾಮದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಬಳಗದ ಗೌರವಾಧ್ಯಕ್ಷರಾದ ಜಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೇತಮಂಗಲದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಸಿದ್ಧ ಗಮಕಿಗಳಾದ ಆರ್.ವೆಂಕಟರವಣಪ್ಪ , ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಕಲಾವಿದರಾದ ಬಂಗಾರಪೇಟೆ ನಾರಾಯಣಪ್ಪ ಎಂ., ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ನಾರಾಯಣಪ್ಪ, ಗ್ರಾಮದ ಮುಖಂಡರಾದ ಮುನಿರಾಜು, ಮುನಿರೆಡ್ಡಿ, ಅಶ್ವತ್, ಕೃಷ್ಣಮೂರ್ತಿ, ಸುರೇಶ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಅವರು ನಿರ್ವಹಿಸಿದರು. ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.