ಬೆಂಗಳೂರು – ಇಂದಿನ ಮಕ್ಕಳಿಗೆ ಈ ಕಾಲಕ್ಕೆ ತಕ್ಕುದಾದ ಸಂಸ್ಕೃತಿ ಮತ್ತು ಸೌಂದರ್ಯವುಳ್ಳ ಹೊಸ ಪಠ್ಯಕ್ರಮಗಳನ್ನು ರೂಪಿಸುವುದು ಅತ್ಯಗತ್ಯ ಎಂದು ಚಿಂತಕ ಹಾಗೂ ನಾಟಕಕಾರರಾದ ಕೋಟಿಗಾನಹಳ್ಳಿ ರಾಮಯ್ಯ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಾಮಾಜಿಕ ಚಟುವಟಿಕೆಗಳ ಕೇಂದ್ರದ ವತಿಯಿಂದ ಆದಿಮದಲ್ಲಿ ಆಯೋಜಿಸಲಾಗಿರುವ “ಸೌಹಾರ್ದಗಿರಿ-ಗ್ರಾಮೀಣ ಶಿಬಿರ”ದ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಮುಂದೆ ಬರಲಿರುವ ಕಾಲವು ಅಷ್ಟೊಂದು ಸುಲಭವಾಗಿರದು. ಮುಂದೆ ಎದುರಾಗಲಿರುವ ಸವಾಲುಗಳಿಗೆ ನಮ್ಮ ಈ ಕಾಲದ ಮಕ್ಕಳನ್ನು ಸಿದ್ಧಗೊಳಿಸುವ ಜವಾಬ್ದಾರಿಯಿಂದ ಸಾಂಸ್ಕೃತಿಕ ಸೌಂದರ್ಯದ ಅರಿವು ಮೂಡಿಸುವ ಪಠ್ಯಕ್ರಮಗಳನ್ನು ಸಿದ್ಧಪಡಿಸುವಲ್ಲಿ ನಾನು ನಿರತನಾಗಿದ್ದೇನೆ. ಎ ಎಂದರೆ ಆಪಲ್, ಬಿ ಎಂದರೆ ಬಾಲ್ ಎಂಬ ಕಾಲ ಇದಲ್ಲ; ನಮ್ಮ ಅಳಿವು ಉಳಿವಿನ ಕಲಿಕೆಗೆ ಎ ಎಂದರೆ ಅಂಬೇಡ್ಕರ್ ಎಂಬಂತಹ ಪಠ್ಯಕ್ರಮಗಳನ್ನು ನಿರೂಪಿಸಬೇಕಿದೆ ಎಂದರು.
ಕೋಲಾರ ನೆಲದ ಈ ಬೆಟ್ಟಗಳಿಗೆ ಸಾಂಸ್ಕೃತಿಕವಾದ ಚುಂಬಕ ಶಕ್ತಿ ಇದೆ. ಒಂದು ಕಾಲದಲ್ಲಿ ವಿಶ್ವದ ಯಾವುದೋ ಮೂಲೆಯ ಸಂತಜನರು ಕೋಲಾರದ ಈ ಪರಿಸರದಲ್ಲಿ ತಾವು ನೆಲೆಸಬೇಕೆಂದು ಬಯಸಿದ್ದರು. ಅಷ್ಟೊಂದು ಮಹತ್ವವುಳ್ಳ ತಾಣವಿದು. ಇಲ್ಲಿರುವ ಒಂದೊಂದು ಹಳ್ಳಿಯೂ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಗುರುತುಗಳನ್ನು ಉಳಿಸಿಕೊಂಡಿವೆ. ಈ ನೆಲ, ಜಲ, ನಿಸರ್ಗದೊಂದಿಗೆ ಸಹಜವಾಗಿ ಬದುಕುತ್ತಿರುವ ಜನರಿಗೆ ಆಧುನಿಕರ ವಿಲಾಸೀ ಜೀವನಕ್ರಮದಿಂದ ತೀರಾ ತೊಂದರೆಯಾಗುತ್ತಿದೆ. ಇಲ್ಲಿಗೆ ಚಾರಣ ಮೊದಲಾದ ಕಾರಣಗಳಿಗಾಗಿ ಬರುವವರು ತಾವು ತಂದು ಬಳಸಿ ಬಿಸಾಡುವ ಬಾಟಲಿಗಳು ಒಡೆದು ಚೂರಾಗಿ ಸಹಜವಾಗಿ ನಡೆಯುವ ಜನರ ಕಾಲಿಗೆ ಚುಚ್ಚಿಕೊಳ್ಳುತ್ತವೆ. ಈ ಬಗ್ಗೆ ಆಧುನಿಕರು ಅರಿಯಬೇಕಾಗಿದೆ. ಈ ಬಗ್ಗೆ ನನ್ನ ಹೊಸ ನಾಟಕಗಳಲ್ಲಿ ಎರಡು ಹಾಡುಗಳನ್ನು ಬರೆದು ಪ್ರಸ್ತುತಪಡಿಸಲಾಗಿದೆ ಎಂದು ತಿಳಿಸಿದರು.
ಬುಡ್ಡೀದೀಪ ಸಾಂಸ್ಕೃತಿಕ ಕೇಂದ್ರದ ಕಲಾವಿದರಾದ ನಾರಾಯಣಸ್ವಾಮಿ ಅವರು ಚಾರಣಪ್ರಿಯರಿಗೆ ಸ್ವಾಗತ ಹಾಗೂ ಬೆಟ್ಟದ ಮೆಡಲಿನ ಹತ್ತೂರುಗಳ ಅರಿವಿನ ಕಥಾನಕವುಳ್ಳ ಹಾಡುಗಳನ್ನು ಪ್ರಸ್ತುತಪಡಿಸಿದರು.
ಕೋಟಿಗಾನಹಳ್ಳಿ ರಾಮಯ್ಯ ಅವರ ಅಂಬೇಡ್ಕರ್ ಲೈಬ್ರರಿ ಮೂವ್ಮೆಂಟಿನ ಭಾಗವಾಗಿ ನಿರ್ಮಿಸಲಾಗಿರುವ ಗ್ರಂಥಾಲಯಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿ, ಪುಸ್ತಕಗಳನ್ನು ಪರಾಮರ್ಶಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ಕಾಲೇಜಿನ ಸಾಮಾಜಿಕ ಚಟುವಟಿಕೆಗಳ ಕೇಂದ್ರದ ಸಂಯೋಜಕರಾದ ಪ್ರೊ.ಶಶಿಕುಮಾರ್ ಎಂ., ಗ್ರಾಮೀಣ ಶಿಬಿರದ ಸಂಯೋಜಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ,. ಕ್ರಿಸ್ತು ಜಯಂತಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಅಶ್ವಿತಾ, ಹರೀಶ್ ಕುಮಾರ್, ಡಾ.ಕಿರಣ್ ಕುಮಾರ್, ಸೋನಾ ಕೆ.ವಿ, ಶಿಲ್ಪ ಆರ್. ಮೊದಲಾದವರು ಉಪಸ್ಥಿತರಿದ್ದರು ಹಾಗೂ ಕಾಲೇಜಿನ ೮೦ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.