ಸಿಂದಗಿ: ಈ ರಾಷ್ಟ್ರದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಬಗ್ಗೆ ತಿಳಿವಳಿಕೆ ನೀಡಿದವರು ಕಡಿಮೆ. ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ರೀತಿಯ ಹೋರಾಟಗಾರರಲ್ಲಿ ಒಂದು ಮಂದಗಾಮಿ ಹೋರಾಟಗಾರರು ಇನ್ನೊಂದು ಉಗ್ರಗಾಮಿ ಹೋರಾಟಗಾರರನ್ನು ಕಾಣುತ್ತೇವೆ ಗಾಂಧೀಜಿಯವರು ಅಹಿಂಸಾತ್ಮಕ ಹೋರಾಟ ನಡೆಸಿದರೆ ಸುಭಾಶ್ಚಂದ್ರ ಬೋಸ್ ಅವರು ಉಗ್ರ ಹೋರಾಟದಿಂದ ನವಯುವಕರನ್ನು ಹುರಿದುಂಬಿಸಿ ಹೋರಾಟ ಪಡೆಯುವಲ್ಲಿ ಯಶಸ್ವಿಯಾದವರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.
ಪಟ್ಟಣದ ಹಳೇ ಚಾಂದಕವಟೆ ರಸ್ತೆಯಲ್ಲಿರುವ ನೇತಾಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ನೇತಾಜಿ ಸುಭಾಶ್ಚಂದ್ರ ಬೋಸ್ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಸಬೇಕು ಅದರಂತೆ ವಿದ್ಯಾರ್ಥಿಗಳಲ್ಲಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಅಂದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಅಧ್ಯಕ್ಷ ಪಂಡಿತ ಯಂಪೂರೆ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಾಪುರುಷರ ಜಯಂತಿಗಳು ಗೌಣವಾಗುತ್ತಿವೆ. ಸರಕಾರ ಹಲವಾರು ಮಹಾಪುರುಷರ ಜಯಂತಿಗಳನ್ನು ಆಚರಣೆ ಮಾಡುತ್ತಿದೆ. ಇಂತಹ ಮಹಾಪುರುಷರ ಜಯಂತಿ ಆಚರಣೆ ಮಾಡುವುದರಿಂದ ಅವರ ಜೀವನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಮಹಾದೇವಪ್ಪ ಮುಳವಾಡ, ವಿಠ್ಠಲ ಅರ್ಜುಣಗಿ, ಸಾಹೇಬಗೌಡ ಬಿರಾದಾರ, ಸದಾನಂದ ಧರಿಕಾರ, ಸಿದ್ಧರಾಮ ಹೊರಕೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಕ್ಕೆ ಉತ್ತರವಾಗಿ ವಿಠ್ಠಲ ಅರ್ಜುಣಗಿ, ಸಾಹೇಬಗೌಡ ಬಿರಾದಾರ ಮಾತನಾಡಿದರು.
ಶಿಕ್ಷಕ ಬಿ.ಕೆ.ಶ್ರೀಗೀರಿ, ಸಂಸ್ಥೆಯ ಅಧ್ಯಕ್ಷ ಸಿದ್ರಾಮಪ್ಪ ಗಡಂಚಿ ವೇದಿಕೆ ಮೇಲಿದ್ದರು.
ಪ್ರವೀಣ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ನೀಲಮ್ಮ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಮುಖ್ಯೋಪಾಧ್ಯಾಯ ಎಸ್.ಎಸ್.ಗಡಂಚಿ ಸ್ವಾಗತಿಸಿ ಪರಿಚಯಿಸಿದರು. ಪ್ರಕಾಶ ಸಂಗೋಗಿ ಅಲ್ತಾಫ ತಾಂಬೋಳಿ ನಿರೂಪಿಸಿದರು. ಶಿಕ್ಷಕಿ ರಶ್ಮಿ ದಿಕ್ಕಸಂಗಿ ವಂದಿಸಿದರು.