ಪುಸ್ತಕ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)
ಲೇಖಕರು: ಶ್ರೀ ಮಹಾಂತೇಶ ಮೆಣಸಿನಕಾಯಿ
ಆಂಜನೇಯ ನಗರ, ಬೆಳಗಾವಿ.
ಪ್ರಕಾಶಕರು: “ಹೊಂಬೆಳಕು” ಸಾಂಸ್ಕೃತಿಕ ಸಂಘ,
ರಾಮತೀರ್ಥ ನಗರ, ಬೆಳಗಾವಿ-15
ಅಕ್ಷರ ಜೋಡನೆ: ಸಂತೋಷ ನಾಯಿಕ ಹಾಗೂ ಮಂಜುನಾಥ ಶಿಲ್ಲೆದಾರ
ಮುಖಪುಟ ವಿನ್ಯಾಸ ಮತ್ತು ಮುದ್ರಣ ಸೇವೆ: ಇಂಪ್ರೇಶನ್ ಮುದ್ರಣಾಲಯ ಗೋದಳಿಗಲ್ಲಿ
ಬೆಳಗಾವಿ.
ಪುಟಗಳು: 144
ಬೆಲೆ: 150
ಆಧುನಿಕ ಜಗತ್ತಿನಲ್ಲಿ ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಆರ್ಥಿಕತೆಯಿಂದಾಗಲಿ, ವೈಜ್ಞಾನಿಕತೆಯಿಂದಾಗಲಿ, ಜನಸಂಖ್ಯೆಯಿಂದಾಗಲಿ, ನೈಸರ್ಗಿಕ ಸಂಪನ್ಮೂಲದಿಂದಾಗಲಿ ಹಾಗೂ ಕ್ಷೇತ್ರ ಮತ್ತು ವ್ಯಾಪ್ತಿಯಿಂದಾಗಲಿ ಅಳೆಯಲು ಸಾಧ್ಯವಿಲ್ಲ. ಬದಲಾಗಿ ಆ ದೇಶದ ಜನರ ಜೀವನದ ಸಂಸ್ಕೃತಿಯನ್ನು ಆಧರಿಸಿ ಅಭಿವೃದ್ಧಿ ಪಥವು ಸಾಗುತ್ತದೆ ಎನ್ನುವುದು ಸಾರ್ವಕಾಲಿಕ ಸತ್ಯವಾದ ಮಾತು. ಇದಕ್ಕೆ ಪೂರಕವಾಗಿ ಇಂದು ಭಾರತ ದೇಶವು ಪ್ರಪಂಚದ “ಸಾಂಸ್ಕೃತಿಕ ರಾಯಭಾರಿ” ದೇಶವೆಂದು ಹೆಸರುವಾಸಿಯಾಗಿದೆ ಎಂಬ ಸಂದೇಶವನ್ನು ಕೇಳುವಾಗ ಭಾರತೀಯರಾದ ನಾವೆಲ್ಲ ಹೆಮ್ಮೆಪಡುವ ವಿಷಯ ಎಂದೆನಿಸುತ್ತದೆ.
ಹಬ್ಬಗಳಲ್ಲಿ ಎರಡು ವಿಧ ಒಂದು ಧಾರ್ಮಿಕ, ಸಾಮಾಜಿಕ, “ರಾಷ್ಟ್ರೀಯ ಹಬ್ಬಗಳು” ಸಂಕಲನವೂ ರಾಷ್ಟ್ರ ಹಬ್ಬಗಳ ಜೊತೆಗೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರ ಚರಿತ್ರೆಯನ್ನು ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ದೇಶವು 75 ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಈ ಅಮೃತಗಳಿಗೆಯಲ್ಲಿ ನಮ್ಮ ರಾಷ್ಟ್ರೀಯ ಹಬ್ಬಗಳು ಕೃತಿ ಪ್ರಕಟಗೊಳ್ಳುತ್ತಿರುವುದು ರಾಷ್ಟ್ರಾಭಿಮಾನಕ್ಕೊಂದು ಕೊಡುಗೆಯಾಗಿದೆ.
ಮುನ್ನುಡಿಯನ್ನು ಬೆಳಗಾವಿ ಜಿಲ್ಲೆ ಕ.ಸಾ.ಪ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಅವರು ಬರೆದಿದ್ದಾರೆ. ಇಲ್ಲಿಯ ಲೇಖನಗಳು ಪಠ್ಯ ಪುಸ್ತಕದಲ್ಲಿ ಅಳವಡಿಸಲು ಯೋಗ್ಯವಾಗಿವೆ. ಎಲ್ಲ ಶಿಕ್ಷಕ/ಕಿಯರಿಗೆ ಡಿ.ಎಡ್.ಬಿ.ಎಡ್. ವಿದ್ಯಾರ್ಥಿಗಳಿಗೆ ಕೈಪಿಡಿಯಾಗಿದೆ.
ಬೆನ್ನುಡಿಯನ್ನು ಪೂಜ್ಯಶ್ರೀ ಶ್ರೀ.ಮ.ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ಬರೆದಿದ್ದು, ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಇಂದು ಮಕ್ಕಳು ಮೊಬೈಲ್, ಪೋನ್ಗಳ ದಾಸರಾಗಿ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ದೇಶದಲ್ಲಿ ಏನಾದರೂ ಕೊರತೆಯಾದರೆ ಬೇರೆ ಕಡೆಯಿಂದ ತರಬಹುದು ಆದರೆ ಒಳ್ಳೆಯ ಮಕ್ಕಳನ್ನು ತರುವುದು ಕಷ್ಟ. ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುತ್ತಲೇ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರೀಯ ಹಬ್ಬಗಳ ಪರಿಚಯ ಮಾಡಿಕೊಡುವ ಮೂಲಕ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದಿದ್ದಾರೆ.
ನಮ್ಮ ದೇಶದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಪ್ರತೀಕವಾಗಿ “ನಮ್ಮ ರಾಷ್ಟ್ರೀಯ ಹಬ್ಬಗಳು” ಎಂಬ ಮಹತ್ವದ ಕೃತಿಯನ್ನು ಲೇಖಕರು, ಸಾಹಿತಿಗಳು, ಗುರುಗಳೂ ಆದ ಎಂ.ವೈ. ಮೆಣಸಿನಕಾಯಿಯವರು ಅತ್ಯಂತ ವಿಶೇಷ ಮುತುವರ್ಜಿಯಿಂದ ಬರೆದಿದ್ದಾರೆ. ರಾಷ್ಟ್ರೀಯ ಹಬ್ಬಗಳಿಗೆ ಭಾರತ ದೇಶದಲ್ಲಿ ಯಾವ ಕೊರತೆಯೂ ಇಲ್ಲ ಬಿಡಿ ಆದರೆ ಅವುಗಳಲ್ಲಿ ಪ್ರಮುಖವಾದ 42 ಆಚರಣೆಗಳ ಕುರಿತಾಗಿ ಲೇಖಕರು ಅತ್ಯಂತ ಸುಂದರವಾಗಿ ಇಲ್ಲಿ ವಿವರಿಸಿದ್ದಾರೆ. ಭಾರತ ದೇಶದ ಮೊದಲ ಶಿಕ್ಷಕಿ, ಸಮಾಜ ಸೇವಕಿ, ಸತ್ಯಶೋಧಕಿಯಾದ ಸಾವಿತ್ರಿಬಾಯಿ ಫುಲೆಯವರ ಬಗ್ಗೆ ಮೊದಲ ಲೇಖನ ಪ್ರಾರಂಭವಾಗುತ್ತದೆ. ಅಂದಿನ ಕಾಲದಲ್ಲಿ ಸಮಾಜದಿಂದಾಗುವ ಅವಮಾನಗಳನ್ನು ಸಹಿಸಿಕೊಂಡು ತಮ್ಮ ಬೋಧನಾ ಕರ್ತವ್ಯದಲ್ಲಿ ಸಾರ್ಥಕತೆಯನ್ನು ಕಂಡರು. ಇದಲ್ಲದೆ. ಭಾರತದ ಮಹಿಳೆಯರ ಸಮಾನತೆಯ ಹಕ್ಕಿಗಾಗಿ ಹೋರಾಟ ಮಾಡಿದರು. ಈ ಧೀಮಂತ ಶಿಕ್ಷಕಿಯ ಹೋರಾಟದ ಜೀವನ ಇಂದಿನ ಕಾಲದಲ್ಲಿ ಎಲ್ಲರಿಗೂ ಮಾದರಿ ಎನ್ನುವುದು ಸರ್ವವಿದಿತ. ನಿಜ ಶರಣ ಅಂಬಿಗರ ಚೌಡಯ್ಯನವರ ಯಶೋಗಾಥೆಯ ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ ಗಣರಾಜ್ಯೋತ್ಸವದ ಮಹತ್ವ, ಸ್ವಾತಂತ್ರ್ಯ ದಿನಾಚರಣೆಯ ವಿವರಣೆ, ಭಾರತದ ದೇಶ ಸ್ವಾತಂತ್ರ್ಯ ಪಡೆಯಲು ದೇಶದ ಮುಖಂಡತ್ವವನ್ನು ವಹಿಸಿದ ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಸ ಚಂದ್ರ ಬೋಸ್, ಅಮರವೀರ ಭಗತಸಿಂಗ್, ಖುದಿರಾಮ ಬೋಸ್, ಚಂದ್ರಶೇಖರ ಆಝಾದ, ಸ್ವಾಭಿಮಾನಿ ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರ ಕುರಿತ ಲೇಖನಗಳು ಅದ್ಭುತವಾಗಿವೆ. ಭಾರತ ದೇಶದ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆಗೈದ ಸರ್ದಾರ ವಲ್ಲಭಬಾಯಿ ಪಟೇಲ, ಲಾಲ್ ಬಹದ್ದೂರ ಶಾಸ್ತ್ರೀ, ಪ್ರಿಯದರ್ಶಿನಿ ಇಂದಿರಾ ಗಾಂಧಿ, ಭಾರತ ರತ್ನ ಅಟಲಬಿಹಾರಿ ವಾಜಪೇಯಿ ಇನ್ನು ಅನೇಕ ಮಹನೀಯರ ತ್ಯಾಗ ಬಲಿದಾನದ ವಿವರಣೆಯನ್ನು ಮನ ಮುಟ್ಟುವ ಹಾಗೆ ಚಿತ್ರಿಸಿದ್ದಾರೆ. ಇದಲ್ಲದೆ ನಮ್ಮ ದೇಶ ಸಂಸ್ಕೃತಿಯ ರಾಷ್ಟ್ರವೆಂದು ಸಾರಿ ಹೇಳಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಪ್ರಥಮ ರಾಷ್ಟ್ರಕವಿ ಗೋವಿಂದ ಪೈ, ರವೀಂದ್ರನಾಥ ಠಾಗೋರ, ಮನುಕುಲದ ಸಾರ್ಥಕತೆ ಸಾರಿದ ವಿಶ್ವಗುರು ಬಸವಣ್ಣ, ಆದಿಕವಿ ಮಹರ್ಷಿ ವಾಲ್ಮೀಕಿ, ಸಂತ ಕನಕದಾಸರು, ರಾಷ್ಟ್ರಕವಿ ಕುವೆಂಪು ಮುಂತಾದ ದಾರ್ಶನಿಕ ಪುರುಷರ ಸಾಧನೆಯ ಬಗ್ಗೆ ತಿಳಿದುಕೊಂಡರೆ ಎಲ್ಲ ಭಾರತೀಯರಲ್ಲಿ ಧನ್ಯತಾ ಮನೋಭಾವ ಬರದೇ ಇರಲಾರದು. ಬ್ರೀಟಿಷರ ಆಡಳಿತ ಇದ್ದರೂ ಸಹ ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ಸನ್ನು ಕಂಡ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯಾ, ವಿಜ್ಞಾನಿಗಳ ಬೆಳಕು ಸರ್ ಸಿ.ವಿ. ರಾಮನ್, ನಾ.ಸು. ಹರ್ಡಿಕರ ಮುಂತಾದವರ ಜೀವನ ಚರಿತ್ರೆಗಳು ನಮ್ಮೆಲ್ಲರಿಗೂ ದಾರಿದೀಪ ವಾಗಿವೆ.
ಒಟ್ಟಿನಲ್ಲಿ ‘ನಮ್ಮ ರಾಷ್ಟ್ರೀಯ ಹಬ್ಬಗಳು’ ಈ ಕೃತಿಯು ತುಂಬಾ ಚೆನ್ನಾಗಿ ರಚಿತವಾಗಿದೆ ಎಂ.ವೈ. ಮೆಣಸಿನಕಾಯಿ ಗುರುಗಳು ಸದಾಕಾಲ ಒಂದಿಲ್ಲೊಂದು ಕಾರ್ಯದಲ್ಲಿದ್ದರೂ ಕೂಡ ಬರವಣೆಗೆಯ ಹವ್ಯಾಸವನ್ನು ಇಟ್ಟಿಕೊಂಡಿರುತ್ತಾರೆ. ಕನ್ನಡಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡು ತಾಯಿ ಭುವನೇಶ್ವರಿಯ ಸೇವೆಗೆ ಕಂಕಣಬದ್ಧರಾಗಿ ದುಡಿಯುತ್ತಿರುವ ಇವರಿಗೆ ರಾಜ ರಾಜೇಶ್ವರಿಯು ಆಯುಷ್ಯ ಮತ್ತು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎನ್ನುವುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ. ಸಾಹಿತ್ಯ ಕೃಷಿಯು ಇವರಿಂದ ಇನ್ನಷ್ಟು ಬೆಳೆಯಲಿ ಎನ್ನುವುದು ಎಲ್ಲ ಸಾಹಿತ್ಯಾಸಕ್ತರ ಮನದಾಳದ ಮಾತಾಗಿದೆ. ಅವರ ಚರವಾಣಿ 9742192615.
ವೀರಭದ್ರ ಮ. ಅಂಗಡಿ.
ಹವ್ಯಾಸಿ ಬರಹಗಾರರು
ಬೆಳಗಾವಿ.
ಮೊ: 9481738616