ವಿಶ್ವಗುರು ಬಸವಣ್ಣ
ಸಮಾನತೆಯ ತತ್ವವ ಸಾರಿ
ಜಗದ ತುಂಬೆಲ್ಲಾ ಬೆಳಕು ಬೀರಿ
ಕಾಯಕದಲ್ಲೇ ದೇವರ ಕಾಣಿರೋ ಎಂದು ಸಾರಿ ಸಾರಿ ಹೇಳಿದ
ನುಡಿದಂತೆ ನಡೆದ ಕ್ರಾಂತಿಯೋಗಿ
ಮತ್ತೊಮ್ಮೆ ಕ್ರಾಂತಿ ಗೈಯಲು
ಭುವಿಯ ಬೆಳಕಾಗಿ ಬರುವಿರಾ ಅಣ್ಣಾ ಬಸವಣ್ಣ ?
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಅಂತರಂಗ ಬಹಿರಂಗ ಶುದ್ಧಿಗಳ ನಿಜ ಸ್ವರೂಪ ಅರುಹಿದ ನಾಡಿನಲ್ಲಿ ಧರ್ಮದ ಅಫೀಮು ತಲೆಗೇರಿಸಿಕೊಂಡವರ ಮನವ ತಿಳಿಗೊಳಿಸಲು ಮತ್ತೊಮ್ಮೆ ಹುಟ್ಟಿ ಬರುವಿರಾ ಅಣ್ಣಾ ಬಸವಣ್ಣ?
ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ನೀವು ಕಟ್ಟಿ ಬೆಳೆಸಿದ ನಾಡಿನೆಲ್ಲೆಡೆ ಇಂದು ನಾನೇ ದೊರೆ ಎಂದು ಮೆರೆಯುತ್ತಿರುವವರ ಮಟ್ಟ ಹಾಕಲು ಮತ್ತೊಮ್ಮೆ ಜಗಕೆ ಅವತರಿಸಿ ಬರುವಿರಾ ಅಣ್ಣಾ ಬಸವಣ್ಣ ?
ಇವನಾರವ ಇವನಾರವ ಇವನಾರನೆಂದಿನಸದೆ
ಇವ ನಮ್ಮವ ಇವ ನಮ್ಮವ ನೆಂದು
ಸಕಲ ಜೀವಾತ್ಮರಿಗೆ ಲೇಸ ಬಯಸಿದ ನೀವು ನಡೆದಾಡಿದ ನೆಲದಲ್ಲಿ ಧರ್ಮ ಸಂಘರ್ಷವ ಕೊನೆಗಾಣಿಸಿ ಭ್ರಾತೃ ತ್ವ ನೆಲೆಗೊಳಿಸಲು ಜಗದ ಬೆಳಕಾಗಿ ಭುವಿಗೆ ಬರುವಿರಾ ಅಣ್ಣಾ ಬಸವಣ್ಣ?
ಶಿವಕುಮಾರ ಕೋಡಿಹಾಳ, ಮೂಡಲಗಿ