ಸಿಂದಗಿ: ತಾಲೂಕಿನ ರಾಂಪೂರ ಪಿಎ ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಕಳೆದ 4 ದಿನಗಳಿಂದ ತಾಪಂ ಕಾರ್ಯಾಲಯದ ಮುಂದೆ ಧರಣಿ ನಡೆಸಿದ್ದರು. ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಸಿಂಧೆ ಅವರು ದೂರವಾಣಿ ಕರೆಯ ಮೂಲಕ ತನಿಖೆಗೆ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಧರಣಿ ಹಿಂಪಡೆಯಿರಿ ಎನ್ನುವ ನಿರ್ದೇಶನದ ಮೇರೆಗೆ ತಾಪಂ ಇಓ ಬಾಬು ರಾಠೋಡ ಅವರ ಸಮ್ಮುಖದಲ್ಲಿ ಇಂದು ಧರಣಿ ಸುಖಾಂತ್ಯ ಪಡೆದುಕೊಂಡಿದೆ.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಮಣಗಿರಿ ಮಾತನಾಡಿ, ರಾಂಪೂರ ಪಿಎ ಗ್ರಾಪಂನಲ್ಲಿ 15ನೇ ಹಣಕಾಸು ಅನುದಾನ, ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಹಾಗೂ ವಸತಿ ಯೋಜನೆಗಳಲ್ಲಿ ದುರುಪಯೋಗ ನಡೆದಿದೆ. ಮತ್ತು ಕಾಮಗಾರಿಗಳು ಕಳಪೆಯಾಗಿವೆ.
ನರೇಗಾ ಯೋಜನೆ ಅವ್ಯವಹಾರ, ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳಲ್ಲಿ ನಡೆದ ಅಕ್ರಮದ ತನಿಖೆಯನ್ನು ಅರ್ಜಿದಾರರ ಸಮ್ಮುಖದಲ್ಲಿಯೇ ನಡೆಸಬೇಕು. ಗ್ರಾಪಂ ವ್ಯಾಪ್ತಿಯ ಗಣಿಹಾರ, ರಾಂಪೂರ ಪಿಎ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು.
ಎಲ್ಲ ಹಳ್ಳಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ಹಲವು ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಾಪಂ ಇಓ ಬಾಬು ರಾಠೋಡ ಅವರಿಗೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಕಂಡಿದ್ದಿಲ್ಲ ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ತನಿಖೆ ನಡೆಸಿಲ್ಲ ಮತ್ತು ವಸತಿ ಯೋಜನೆಯ ನೋಡಲ್ ಅಧಿಕಾರಿ ಸಿಡಿಪಿಓ ಬಸವರಾಜ ಜಗಳೂರ ಹಾಗೂ ಪಿಡಿಓ ಕಲೇಶ ಜಾನಮಟ್ಟಿಯ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಧರಣಿ ಹಮ್ಮಿಕೊಳ್ಳಲಾಗಿತ್ತು ಅದನ್ನು ಜಿಲ್ಲಾ ಸಿಇಓ ಅವರು ಮನವರಿಕೆ ಮಾಡಿಕೊಂಡು ಪಶು ಸಂಗೋಪನಾಧಿಕಾರಿ ಎಂ.ಎಸ್.ಗಂಗನಳ್ಳಿ ಅವರನ್ನು ತನಿಖಾಧಿಕಾರಿ ನೇಮಕ ಮಾಡಲಾಗಿದೆ ಅವರಿಂದ ತಮಗೆ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಧರಣಿ ಹಿಂಪಡೆದುಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ದಸ್ತಗೀರ ನದಾಫ, ದತ್ತುಗೌಡ ಬಿರಾದಾರ, ಆಸೀಫ್ ಆಂದೋಲಿ, ಖಾದರ್ ಅರಳಗುಂಡಗಿ, ಸಂತೋಷ ನಾಯ್ಕೋಡಿ, ಸಚೀನ ಗುತ್ತರಗಿ, ಶಾರುಖ ಆಂದೇಲಿ, ಕಾಶೀನಾಥ ತಳವಾರ, ಮೋದಿನ ಪಟೇಲ ಜಮಾದಾರ, ಶರಣಯ್ಯ ಹಿರೇಮಠ, ಖಾಜೇಸಾಬ ಕಕ್ಕಳಮೇಲಿ, ಮೌಲಾಲಿ ನಧಾಪ ಸೇರಿದಂತೆ ಹಲವರು ಇದ್ದರು.