ಬೆಳಗಾವಿ – ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ಬೆಳಗಾವಿಯ ವತಿಯಿಂದ ಒಂದು ದಿನದ ಪ್ರಬಂಧ ರಚನಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಧಾರವಾಡದ ಸಾಹಿತಿ ಡಾ. ಪ್ರಜ್ಞಾ ಮತ್ತಿಹಳ್ಳಿ ಕಾರ್ಯಾಗಾರವನ್ನು ಉದ್ಘಾಟಿಸಿ ಒಂದು ಕೇಂದ್ರ ಬಿಂದುವಿನಿಂದ ಪ್ರಬಂಧ ರಚನೆಯಲ್ಲಿ ತೊಡಗಿ, ಮೂಲ ವಿಷಯವನ್ನು ಸ್ಪರ್ಶಿಸುತ್ತಾ ಬರಹವನ್ನು ವಿಸ್ತಾರಗೊಳಿಸುತ್ತಾ ಸಾಗಬೇಕು.ಬರಹ ಓದುಗ ಮತ್ತು ರಚನಾಕಾರನ ನಡುವೆ ಸಾಮರಸ್ಯ ಬೆಸೆಯಬೇಕು.ವಿನೋದ ಪ್ರಬಂಧವನ್ನು ಲಾಲಿತ್ಯಪೂರ್ಣಗೊಳಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಡಾ. ಕೆ. ಆರ್. ಸಿದ್ದಗಂಗಮ್ಮ ಅಧ್ಯಕ್ಷರು,ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ಬೆಳಗಾವಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರವು ಕನ್ನಡತನವನ್ನು ಮೈಗೂಡಿಸಿಕೊಂಡು ವಿಫುಲವಾಗಿ ಬೆಳೆದಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ ಅವರ ಬರಹಗಳಲ್ಲಿ ಪ್ರಬಂಧಾತ್ಮಕ ನಿಲುವುಗಳನ್ನು ಕಾಣಬಹುದು. ಪ್ರಬಂಧ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಲೇಖಕಿಯರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಡಾ. ನಿರ್ಮಲಾ ಬಟ್ಟಲ ಸ್ವಾಗತಿಸಿದರು ಆಶಾ ಯಮಕನಮರಡಿ ಪ್ರಾರ್ಥಿಸಿದರು ಜ್ಯೋತಿ ಬದಾಮಿ ವಂದಿಸಿದರು ಡಾ. ನೀತಾ ರಾವ್ ನಿರೂಪಿಸಿದರು. ಕಾರ್ಯಾಗಾರದಲ್ಲಿ ರಂಜನಾ ನಾಯಕ, ರಂಜನಾ ಗೋದಿ, ದೀಪಿಕಾ ಚಾಟೆ, ಪದ್ಮಾ ಹೊಸಕೋಟೆ, ಪ್ರೇಮಾ ತಹಶಿಲ್ದಾರ, ವಿದ್ಯಾ ಹುಂಡೆಕರ,ಅನ್ನಪೂರ್ಣ ಅಗಡಿ,ಸುಮಾ ಕಾಟ್ಕರ,ಇಂದಿರಾ ಮೋಟೆಬೆನ್ನೂರ, ಅನ್ನಪೂರ್ಣ ಹಿರೆಮಠ ಮುಂತಾದವರು ಭಾಗವಹಿಸಿದ್ದರು.