spot_img
spot_img

ಸಹಾಯ ಮಾಡುವ ಹೃದಯವೊಂದೇ ಜಗತ್ತನ್ನು ಗೆಲ್ಲಬಲ್ಲದು

Must Read

- Advertisement -

ನಾನೀಗ ಹೇಳ ಹೊರಟಿರುವ ಕಥೆ ಬಹಳ ಸ್ವಾರಸ್ಯಕರವಾದುದು. ಇದು ಕಟ್ಟು ಕಥೆಯಲ್ಲ ನ್ಯೂಯಾರ್ಕಿನಲ್ಲಿ ನಡೆದ ನೈಜ ಘಟನೆ. ವಿಯೆನ್ನಾದ ಡಾ ಅಡೋಲ್ಪ್ ಲಾರೆನ್ಸ್ ರಕ್ತಸ್ರಾವವಿಲ್ಲದೆ ಮಾಡುವ ಶಸ್ತ್ರಚಿಕತ್ಸೆಗೆ ಬಹಳ ಖ್ಯಾತರಾಗಿದ್ದರು. ಅವರು ತಮ್ಮ ಹೊಸ ಉಪಕರಣದಿಂದ ಆಗರ್ಭ ಶ್ರೀಮಂತ ವರ್ತಕನ ಮಗಳನ್ನು ವಾಸಿಮಾಡಿದ್ದರು.

ತಮ್ಮ ಹೊಸ ತಂತ್ರಗಳನ್ನು ವೈದ್ಯಕೀಯ ಲೋಕಕ್ಕೆ ಪರಿಚಯಿಸಲು ವಿವರಿಸಲು ಅವರು ಅಮೇರಿಕಾಕ್ಕೆ ಪ್ರಯಾಣ ಬೆಳೆಸಿದರು. ಡಾ: ಅಡೋಲ್ಫರಿಗೆ ನ್ಯೂಯಾರ್ಕಿನ ಭರ್ಜರಿ ಹೋಟೆಲಿನಲ್ಲಿ ಇಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಅಷ್ಟೇ ಅಲ್ಲ ಅವರ ಸುತ್ತಲೂ ಅಂಗರಕ್ಷಕರನ್ನು ಇಡಲಾಯಿತು. ಒಮ್ಮೆ ಮದ್ಯಾಹ್ನ ಏಕಾಂತವನ್ನು ಬಯಸಿದ ಅವರು ಹೋಟೆಲ್ಲಿನಿಂದ ಹೊರಗೆ ವಾಯುವಿಹಾರಕ್ಕೆಂದು ಹೋದರು.

ಅದೇ ಸಮಯದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಬಿರುಗಾಳಿ ಬೀಸ ತೊಡಗಿತು. ಜೋರಾಗಿ ಮಳೆಯೂ ಸುರಿಯಲಾರಂಭಿಸಿತು. ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವೈದ್ಯರು ಆಶ್ರಯಕ್ಕೆಂದು ಹತ್ತಿರದಲ್ಲಿದ್ದ ಮನೆಯ ಕಾಲಿಂಗ್ ಬೆಲ್ ಒತ್ತಿದರು. ತಾನು ಒಳಗೆ ಬರಬಹುದೇ? ಎಂದು ಕೇಳಿದರು. ಬಾಗಿಲು ತೆರೆದ ಮಹಿಳೆ ಬಹಳಷ್ಟು ಸಿಟ್ಟಿನಲ್ಲಿದ್ದಳು. ‘ಈಗಾಗಲೇ ಈ ಮನೆಯಲ್ಲಿ ಬಹಳ ತೊಂದರೆಯಿದೆ.

- Advertisement -

ನೀವು ಬೇರೆ ಕಡೆ ಹೋಗಿ’ ಎಂದು ಹೇಳಿ ರಪ್ಪನೆ ಬಾಗಿಲನ್ನು ಮುಚ್ಚಿದಳು. ಮಳೆಯಲ್ಲಿ ಸಂಪೂರ್ಣವಾಗಿ ನೆನೆದ ಡಾ: ಅಡೋಲ್ಫ್ ಅಂಗರಕ್ಷಕರ ಕಾರು ಅಲ್ಲಿಗೆ ಬಂದು ತಮ್ಮನ್ನು ಹೋಟೆಲಿಗೆ ಕರೆದೊಯ್ಯುವವರೆಗೆ ಆ ಮನೆಯ ಹೊರಗೆ ನಿಂತಿದ್ದರು.

ಮರುದಿನ ಶ್ರೇಷ್ಠ ವೈದ್ಯರಾದ ಡಾ:ಅಡೋಲ್ಫ್ ರ ಬಗ್ಗೆ ದಿನಪತ್ರಿಕೆಯ ಮುಖಪುಟದಲ್ಲಿ ಅವರ ಚಿತ್ರದೊಂದಿಗೆ ಒಂದು ದೊಡ್ಡ ಲೇಖನ ಪ್ರಕಟವಾಯಿತು.ಅಸಹನೆ ತೋರಿಸಿದ್ದ ಆ ಮಹಿಳೆ ತನ್ನ ಮನೆಗೆ ಬರಮಾಡಕೊಳ್ಳದಿದ್ದ ಆ ವ್ಯಕ್ತಿ ಎಂದು ಅರಿತಳು. ಆಕೆಯ ಮಗಳು ವೈದ್ಯರು ವಾಸಿ ಮಾಡದ ಕಾಯಿಲೆಯಿಂದ ಬಳಲುತ್ತಿದ್ದಳು. ಆಕೆ ಡಾ:ಅಡೋಲ್ಫ್ ತನ್ನ ಮನೆಗೆ ಬಂದು ತನ್ನ ಮಗಳನ್ನು ವಾಸಿ ಮಾಡಬೇಕೆಂದು ಹೋಟೆಲಿಗೆ ಪತ್ರವನ್ನು ಬರೆದಿದ್ದಳು. ಅದೃಷ್ಟವಶಾತ್, ಭಗವಂತ ಅವರನ್ನು ಅವಳ ಮನೆ ಬಾಗಿಲಿಗೆ ಕರೆ ತಂದಾಗ ಅವರ ಮುಖದ ಮೇಲೆ ಬಾಗಿಲನ್ನು ಮುಚ್ಚಿದ್ದಳು.

ಪ್ರತಿದಿನ ದೇವರು ಇತರರಿಗೆ ಸಹಾಯ ಮಾಡಲು ಅನೇಕ ಅವಕಾಶಗಳನ್ನು ನೀಡುತ್ತಾನೆ. ವಿವಿಧ ರೀತಿಯ ಸಂದರ್ಭಗಳನ್ನು ಒದಗಿಸುತ್ತಾನೆ. ನಾವು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೇವೆಂಬುದನ್ನು ಪರಾಮರ್ಶೆ ಮಾಡಿಕೊಳ್ಳಲೇಬೇಕು. ನೋವು ಕಷ್ಟ ನಿರಾಸೆ ದುಃಖ ಯಾರಿಗಿಲ್ಲ ಹೇಳಿ ಜಗದಲ್ಲಿ? ಇವೆಲ್ಲವೂ ಎಲ್ಲರಿಗೂ ಇದ್ದದ್ದೆ. ಮಹಾನ ಪುರುಷರು ಸಹ ಇವೆಲ್ಲವುಗಳನ್ನು ನುಂಗಿಕೊಂಡೇ ಎತ್ತರೆತ್ತರಕ್ಕೆ ಬೆಳೆದಿರುವರು ಎಂಬುದಕ್ಕೆ ಉದಾಹರಣೆಗಳು ಇತಿಹಾಸದಲ್ಲಿ ಹೇರಳವಾಗಿ ಸಿಗುತ್ತವೆ. ನಮ್ಮ ಭಾವಗಳು ಸದ್ಭಾವಗಳಾದ್ದರೆ ಚಿಂತನೆಗಳು ಸಕಾರಾತ್ಮಕವಾಗಿದ್ದರೆ ಚೈತನ್ಯ ಮೂಡಿಸುತ್ತವೆ. ಎಷ್ಟು ಹೊತ್ತಿನವರೆಗೂ ಸತ್ ಚಿಂತನೆಗಳು ಇರುತ್ತವೆಯೋ ಅಷ್ಟು ಹೊತ್ತಿನವರೆಗೂ ನಾವು ಚೈತನ್ಯಭರಿತರಾಗಿರುತ್ತೇವೆ.

- Advertisement -

ಇಲ್ಲವಾದರೆ ಹತಾಶೆ ನಿರಾಸೆ ನಮ್ಮ ಬೆನ್ನು ಬೀಳುತ್ತವೆ. ಬೇರೆಯವರಿಗೆ ಕರುಣೆಯಿಂದ ಸಹಾಯ ಮಾಡುವ ಗುಣವನ್ನು ಕೆಲವರು ದೌರ್ಬಲ್ಯವೆಂದು ಪರಿಗಣಿಸುತ್ತಾರೆ. ನಿಜದಲ್ಲಿ ಕರುಣಾಮಯಿಯಾಗಿ ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಲು ದೊಡ್ಡ ತಾಳ್ಮೆಯ ಗುಣ ಮತ್ತು ಮನೋಬಲ ಬೇಕಾಗುತ್ತದೆ. ಎಂಬುದನ್ನು ತಿಳಿಯಬೇಕು. ಇತರರ ನೋವಿಗೆ ಹೆಗಲಾಗುವುದು ದೌರ್ಬಲ್ಯವಲ್ಲ. ವಾಸ್ತವದಲ್ಲಿ ಪರೋಪಕಾರಿ ಗುಣವುಳ್ಳವರು ಅನುಭವಿಸಿದಷ್ಟು ನೋವು ಯಾರೂ ಅನುಭವಿಸುವುದಿಲ್ಲ. ಆದರೆ ಆ ನೋವಿನಲ್ಲೂ ಬೇರೆಯವರ ಕಷ್ಟಕ್ಕೆ ಆದೆ ಎನ್ನುವ ಧನ್ಯತಾಭಾವ ಪರಮ ಸಂತೃಪ್ತಿ ನೀಡುತ್ತದೆಂಬುದಂತೂ ಸುಳ್ಳಲ್ಲ.

ಅಂದ ಹಾಗೆ ಬಂಧು ಬಾಂಧವರಿಗೆ ಸಂಬಂಧಿಕರಿಗೆ ಸಹಾಯ ಮಾಡುವ ದಿನಗಳಷ್ಟು ಮಾತ್ರ ಒಳ್ಳೆಯದಾಗಿ ಕಾಣುತ್ತೇವೆ. ಇದು ಜೀವನದ ಸತ್ಯವೂ ಹೌದು.ಹಾಗಂತ ಸಹಾಯ ಹಸ್ತ ಚಾಚುವುದನ್ನು ಬಿಡಬಾರದು. ನಾವು ಬೇರೆಯವರಿಗೆ ಏನೇ ಸಹಾಯ ಮಾಡಿದರೂ ಅದನ್ನು ಆನಂದಿಸಲು ಕಲಿಯಬೇಕು. ಸಹಾಯ ಪಡೆದವರು ಕೃತಜ್ಞತಾ ಭಾವ ವ್ಯಕ್ತ ಪಡಿಸಲಿಲ್ಲ ಧನ್ಯವಾದ ಹೇಳಲಿಲ್ಲವೆಂದು ನಿರಾಶರಾಗಬಾರದು. ಮರಳಿ ಏನನ್ನೂ ಬಯಸದೆ ಸಹಾಯ ಮಾಡುವುದು ಮಾತ್ರ ನಮ್ಮ ಕರ್ತವ್ಯ.

ಬೇರೆಯವರ ಕಷ್ಟಕ್ಕೆ ಆಗುವ ಅವಕಾಶವನ್ನು ದೇವರು ನಮಗೆ ದಯಪಾಲಿಸಿದ್ದಾನೆಂದು ನೆರವಿಗೆ ದಾವಿಸಬೇಕು. ನಮ್ಮಿಂದ ಸಣ್ಣಪುಟ್ಟ ತಪ್ಪಾದರೂ ಸಹ ಜನರು ನಾವು ಹಿಂದೆ ಮಾಡಿದ ದೊಡ್ಡ ದೊಡ್ಡ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂಬ ಭಯದಿಂದ ಸಹಾಯ ಹಸ್ತ ಚಾಚಲು ಹಿಂಜರಿಯುತ್ತೇವೆ. ಆದರೆ ಹಾಗೆ ವಿಚಾರ ಮಾಡದೆ ನಾವು ಮಾಡುವ ಸಹಾಯ ನಮಗೆ ಸಂತೃಪ್ತಿ ನೀಡುತ್ತದೆ ಮತ್ತು ನಾವು ಮಾಡುವ ಎಲ್ಲ ಕೆಲಸಗಳು ಜನರನ್ನು ಸಂತೃಪ್ತಗೊಳಿಸಲಾರವು ಎನ್ನುವ ಮನೋಭಾವದಿಂದ ನೆರವಿನ ದಾರಿಯಲ್ಲಿ ಮುಂದುವರೆಯುವುದು ಉತ್ತಮ.

ನಾವು ಏನನ್ನು ಮಾಡಿದರೂ ಜನರನ್ನು ಸಂಪೂರ್ಣವಾಗಿ ಖುಷಿ ಪಡಿಸಲಾಗುವುದಿಲ್ಲ. ಹಾಗಿದ್ದಾಗ ‘ಪರೋಪಕಾರಾರ್ಥಂ ಇದಂ ಶರೀರಂ.’ ಎನ್ನುವ ಅರ್ಥಪೂರ್ಣ ಸಂಸ್ಕøತ ವಾಣಿಯಂತೆ ಬದುಕಿದರೆ ನಮ್ಮ ಸುಖ ಸಂತೋಷ ನಮ್ಮ ಕೈಯಲ್ಲಿ. ಕೆಲವೊಂದಿಷ್ಟು ಸಂಕಷ್ಟದ ಸಂದರ್ಭದಲ್ಲಿ ಸಹಾಯ ಮಾಡದೇ ಇರಲು ಸಾಧ್ಯವೇ ಇಲ್ಲ.ಅಪಘಾತಕ್ಕೀಡಾದಾಗ ಆಘಾತಕ್ಕೊಳಗಾದಾಗ ಪ್ರಕೃತಿ ವಿಕೋಪಗಳು ಕಾಡಿದಾಗ ಜಾತಿ, ಧರ್ಮ ನೋಡುವ ಸಮಯವಲ್ಲ.

ಅದು ಸಹಾಯಕ್ಕೆ ದಾವಿಸುವ ಸಮಯ. ಮಾನವೀಯತೆ ಮೆರೆಯಲು ಇರುವ ಸುವರ್ಣಾವಕಾಶ. ಕಷ್ಟದ ಪರಿಸ್ಥಿತಿಯಲ್ಲಿ ಕಡುವಿರೋಧಿಗಳಾದ್ದರೂ ಶತ್ರುಗಳಾಗಿದ್ದರೂ ಅವರ ಕಣ್ಣೊರೆಸುವ ಬೆರಳುಗಳು ನಾವಾಗಲೇ ಬೇಕಾಗುತ್ತದೆ. ಅದೇ ಮಾನವೀಯತೆ. ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ. ಅಗ್ಗದ ಜನಪ್ರಿಯತೆಯನ್ನು ಬಯಸಿ ನಿರ್ಗತಿಕರಿಗೆ ನಿರಾಶ್ರಿತರಿಗೆ ಸಹಾಯ ಮಾಡಬಾರದು ಬುದ್ಧಿವಂತಿಕೆಯಿದ್ದು ಇತರರ ಕಷ್ಟಕ್ಕೆ ಆಗದ ಗುಣವಿರದಿದ್ದರೆ ಆ ಬುದ್ಧಿವಂತಿಕೆ ನಿಷ್ಪ್ರಯೋಜಕ.

ಸಹಾಯ ಮಾಡುವ ಹೃದಯವೊಂದೇ ಜಗತ್ತನ್ನು ಗೆಲ್ಲಬಲ್ಲದು ಬುದ್ಧಿವಂತಿಕೆಯಲ್ಲ.ಸತ್ಪಾತ್ರರಿಗೆ ಅನಾಥರಿಗೆ ಸಹಾಯ ಮಾಡಲು ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ. ಯಾರೋ ಕಷ್ಟದಲ್ಲಿದ್ದಾಗ ಮಾಡಿದ ಸಹಾಯದ ಖುಷಿ ಹಾಗೂ ಧನ್ಯತೆಯ ಭಾವ ಜೀವನ ಪರ್ಯಂತ ಸಂತಸದ ಚಿಲುಮೆಯಂತೆ ಚಿಮ್ಮುತ್ತಿರುತ್ತದೆ. ನೆಮ್ಮದಿಯ ಗೂಡಿನಲ್ಲಿ ನಗುತ್ತ ನೂರ್ಕಾಲ ಬಾಳುವಂತೆ ಮಾಡುತ್ತದೆ.


ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -
- Advertisement -

Latest News

ಕಾರ್ಯಕರ್ತರೇ, ನಾಯಕರ ದಾಳಗಳಾಗದೆ ಜಾಗೃತರಾಗಿರಿ.

ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಚ್ಚರಿಕೆ.ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಲಹೆ. ನಿಮ್ಮನ್ನ ರಾಜ್ಯ ಸರ್ಕಾರ ತಮ್ಮದಿದೆ ಆದ್ದರಿಂದ ನಿಮಗೆ ರಕ್ಷಣೆ ನೀಡುತ್ತದೆ ಏನೂ...
- Advertisement -

More Articles Like This

- Advertisement -
close
error: Content is protected !!
Join WhatsApp Group