ಮೂಡಲಗಿ: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ವಿಶೇಷ ಪೂಜೆ ನೇರವೇರಿಸಿ ಲೋಕ ಕಲ್ಯಾಣಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಲಾಯಿತು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಫೆ-21 ರಂದು ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸುಮಾರು 60 ಕೋಟಿ ಭಕ್ತರು ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ಥಾನ ಮಾಡಿದ್ದಾರೆ. ಒಂದು ಸಣ್ಣ ಮದುವೆ ಆಯೋಜನೆ ಮಾಡುವ ಮನೆಯ ಯಜಮಾನ ಎಷ್ಟು ತಯಾರಿ ಮಾಡಿದರೂ ಕೆಲವು ಕೊರತೆಗಳು ಉಂಟಾಗುತ್ತವೆ. ಆದರೆ ಉತ್ತರ ಪ್ರದೇಶ ಸರಕಾರ ದೇಶದ ಅರ್ಧದಷ್ಟು ಜನ ಪ್ರಯಾಗರಾಜ್ ಗೆ ಭೇಟಿ ನೀಡಿದರು ಕೂಡ ಇವರುಗಳ ಊಟೋಪಚಾರ, ವಸತಿ, ವಾಹನ ಸೌಕರ್ಯ, ವೈದ್ಯಕೀಯ ಸೇವೆ ಮತ್ತು ಪುಣ್ಯ ಸ್ನಾನ ಈ ಎಲ್ಲವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದೆ. ಇದು ಸರ್ಕಾರದ ಕಾರ್ಯಕ್ಷಮತೆಯನ್ನು ತೋರಿಸುತ್ತದೆ ಎಂದರು.
ಕೆಲ ವಿರೋಧ ಪಕ್ಷಗಳು ಬಿಜೆಪಿಯನ್ನು ಟೀಕೆ ಮಾಡುವ ಭರದಲ್ಲಿ ಇಲ್ಲಿಗೆ ಭೇಟಿ ನೀಡಿದ ದೇಶದ 60 ಕೋಟಿ ಜನ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಇದು ಪಾಪದ ಕೆಲಸ. ಟೀಕೆ ಮಾಡುವ ವಿರೋಧಪಕ್ಷದ ನಾಯಕರು ಕೂಡ ಇಲ್ಲೊಮ್ಮೆ ಭೇಟಿ ನೀಡಿ ಗಂಗೆಯಲ್ಲಿ ಮಿಂದೆದ್ದು ಪಾಪ ಕಳೆದುಕೊಂಡರೆ ಒಳ್ಳೆಯದೆಂದು ಭಾವಿಸುತ್ತೇನೆ ಎಂದರು.
144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ ರಾಜ್ ನ ಮಹಾಕುಂಭಮೇಳ ಅತ್ಯಂತ ಯಶಸ್ವಿಯಾಗಿದೆ. ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಮತ್ತು ಅವರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುವುದಾಗಿ ಸಂಸದ ಈರಣ್ಣ ಕಡಾಡಿ ಹೇಳಿದರು.