ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ಪರ್ಯಾಯ ಒಕ್ಕೂಟ ರಚನೆ ಮಾಡಿದ್ದು ಈ ಹಿಂದಿನ ಪಂಚಮಸಾಲಿ ಸಮಾಜದ ಹೋರಾಟದಿಂದ ಹೊರಗುಳಿದು ಯಾವುದೇ ಒಂದು ಪಕ್ಷದ ಮೆಚ್ಚುಗೆಯನ್ನು ಗಳಿಸಲು ಕೆಲವು ಪ್ರಭಾವಿ ವ್ಯಕ್ತಿಗಳು ಈ ಸಂಘಟನೆ ಹಿಂದೆ ನಿಂತು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಅಭಿವೃದ್ದಿ ಸಮಿತಿಯ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ ಹಾಗೂ ಸಮಾಜದ ಯುವ ಮುಖಂಡ ಈಶ್ವರ ಢವಳೇಶ್ವರ ಒಕ್ಕೂಟ ರಚಸಿರುವ ಕ್ರಮವನ್ನು ಖಂಡಿಸಿದ್ದಾರೆ.
2008ರಲ್ಲಿ ಪ್ರಾರಂಭವಾದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲಸಂಗಮ ಸಮಾಜ ಸಂಘಟನೆಯಲ್ಲಿ ಪಾಲ್ಗೊಂಡು ಬಡ ಮಕ್ಕಳ 2ಎ ಮೀಸಲಾತಿಗಾಗಿ ಹೋರಾಟ ಜಗತ್ತಿನಾದ್ಯಂತ ದಾಖಲೆಯ 712 ಕಿ.ಮಿ ಉದ್ದದ 39 ದಿನಗಳ ಪಂಚಲಕ್ಷ ಹೆಜ್ಜೆಗಳ ಪಾದಯಾತ್ರೆ ಮಾಡಿ,ವಿಶ್ವಾದ್ಯಂತ ಪಂಚಮಸಾಲಿ ಸಮಾಜದ 10 ಲಕ್ಷ ಜನರನ್ನು ಸೇರಿಸಿ ಬೆಂಗಳೂರಿನ ಮಹಾ ರ್ಯಾಲಿ ಮತ್ತು ಮೀಸಲಾತಿಗಾಗಿ ಪಾಂಚಜನ್ಯ ಮೊಳಗಿಸಲು 23 ದಿನದ ಸತ್ಯಾಗ್ರಹ ಮಾಡುತ್ತ ಸಮಾಜದ ಬಡ ಮಕ್ಕಳ ಹಿತಾಸಕ್ತಿ ಕಾಪಾಡುತ್ತ ಬಂದು ಮೀಸಲಾತಿ ಪಡೆಯುವ ಹಂತದಲ್ಲಿರುವಾಗಲೇ ಸಂಘಟನೆಯಲ್ಲಿ ಪಾಲ್ಗೊಳ್ಳದೆ ಸ್ವಪ್ರತಿಷ್ಠೆ ಬೆಳೆಸಿಕೊಳ್ಳುವ ಸಲುವಾಗಿ ಪಂಚಮಸಾಲಿ ಸಮಾಜದ ಹೆಸರು ಹೇಳಿಕೊಂಡು ಕೆಲವು ರಾಜಕೀಯ ವ್ಯಕ್ತಿಗಳು ಕುತಂತ್ರವನ್ನು ರೂಪಿಸಿ ಕೆಲವು ಸ್ವಾಮೀಜಿಗಳನ್ನು ಪುಸಲಾಯಿಸಿ ಒಕ್ಕೂಟ ರಚನೆಯ ರಾಜಕೀಯ ನಾಟಕವು ಹೇಗಾದರೂ ಮಾಡಿ ಪಂಚಮಸಾಲಿಗಳ ಒಗ್ಗಟ್ಟು ಒಡೆಯುವ ಹುನ್ನಾರ ಮಾಡಿದ್ದು ಇಂಥ ಒಕ್ಕೂಟವನ್ನು ನಾವು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಸಲಹೆ ಸೂಚನೆಗಳು ಏನಾದರೂ ಇದ್ದರೆ ಪ್ರಥಮ ಜಗದ್ಗುರಗಳಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಹಾಗೂ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹಾಗೂ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ವಿಜಯಪೂರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದನ್ನು ಬಿಟ್ಟು ಒಕ್ಕೂಟ ರಚನೆ ಮಾಡಿ ಸಮಾಜಕ್ಕೆ ದ್ರೋಹಬಗೆಯುವ ಕೆಲಸ ಸರಿಯಲ್ಲವೆಂದು ಹೇಳಿದ್ದಾರೆ.