ಮೂಡಲಗಿ – ಟ್ರ್ಯಾಕ್ಟರ್ ಗಳಲ್ಲಿ ಕಬ್ಬು ತುಂಬಿಕೊಂಡು ಜೋರಾಗಿ ಟೇಪ್ ಹಚ್ಚಿಕೊಂಡು ಹೋಗುತ್ತಿರುವ ಡ್ರೈವರ್ ಗಳಿಂದಾಗಿ ದಾರಹೋಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಾಣಾಪಾಯ ಆಗುವ ಸಂಭವವಿದ್ದು ಅದನ್ನು ತಪ್ಪಿಸಲು ಟ್ರ್ಯಾಕ್ಟರ್ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ತಾಲೂಕಿನ ಗುಜನಟ್ಟಿ ಗ್ರಾಮದ ಲಕ್ಷ್ಮಣ ರಾಮಪ್ಪ ಬಂಡ್ರೊಳ್ಳಿ ಹಾಗೂ ಇನ್ನೂ ಕೆಲವು ರೈತರು ಸೇರಿ ಮೂಡಲಗಿ ಪಿಎಸ್ ಐ ಯವರಿಗೆ ದೂರು ನೀಡಿದ್ದಾರೆ.
ಜೋಕಾನಟ್ಟ ಹೆಳವರ ಕ್ರಾಸದಿಂದ ವಡೇರಹಟ್ಟಿವರೆಗಿನ ರಸ್ತೆಯಲ್ಲಿ ಈಗ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಸಲುವಾಗಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಜೋಕಾನಟ್ಟಿ ಮಾರ್ಗವಾಗಿ ಕಬ್ಬು ತುಂಬಿದ ಟ್ರಾಕ್ಟರಗಳನ್ನು ಅತಿ ವೇಗವಾಗಿ ಚಲಾಯಿಸಿಕೊಂಡು, ಟೇಪನ್ನು ಹಚ್ಚಿಕೊಂಡು ಹೋಗುತ್ತಿದ್ದಾರೆ.
ಇದರಿಂದ ಸದರಿ ರಸ್ತೆ ಎಡ ಹಾಗೂ ಬಲ ಬದಿಯಲ್ಲಿ ಇರುವ ಜನರಿಗೆ ಬಹಳ ತೊಂದರೆ ಆಗುತ್ತಿದೆ ಹಾಗೂ ಸದರಿ ಮನೆಗಳಲ್ಲಿಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಬಹಳ ಅನಾನುಕೂಲತೆ ಆಗುತ್ತಿದೆ.
ವಿದ್ಯಾರ್ಥಿಗಳ ಜೀವನದ ಜೊತೆ ಟ್ರಾಕ್ಟರ ಮಾಲೀಕರು ಚೆಲ್ಲಾಟ ಆಡುತ್ತಿದ್ದಾರೆ. ಅದೇ ರೀತಿ ಜನಸಾಮಾನ್ಯರಿಗೆ ನಡೆದಾಡಲು ಭಯವಾಗುತ್ತಿದ್ದು, ಜೀವಕ್ಕೆ ಅಘಾತವಾಗುವ ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಸದರಿ ರಸ್ತೆಗೆ ಅವಶ್ಯಕತೆ ಇರುವ ಯಾವುದೇ ರೀತಿಯ ರೋಡ ಬ್ರೇಕ್ಗಳನ್ನು ಕೂಡಾ ಹಾಕಿರುವುದಿಲ್ಲ.
ಆ ಬಗ್ಗೆ ಯಾವುದೇ ಸಂಬಂಧಪಟ್ಟ ಅಧಿಕಾರಿಗಳು ಸಹ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿರುವದಿಲ್ಲ. ಆದ್ದರಿಂದ ಈ ಕುರಿತು ತಾವು ಗಮನಹರಿಸಿ ರಸ್ತೆಯಲ್ಲಿ ಪೋಲಿಸ್ ಭದ್ರತೆಯನ್ನು ಒದಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಸದರಿ ರಸ್ತೆ ಹೆಳವರ ಕ್ರಾಸ್, ಮುಧೋಳ ಮಡ್ಡಿ ಹಾಗೂ ವಡೇರಹಟ್ಟಿಯಲ್ಲಿ ಪೊಲೀಸ್ ಪೇದೆಯೊಬ್ಬರನ್ನು ನಿಯಮಿಸಿ ಟ್ರ್ಯಾಕ್ಟರ್ ಚಾಲಕರ ಹಾವಳಿಯಿಂದ ಜನತೆಯನ್ನು ರಕ್ಷಿಸಬೇಕೆಂದು ಮನವಿ ಸಲ್ಲಿಸಲಾಗಿದೆ.