ಸಿಂದಗಿ: ಮಹಾಮಾರಿ ಕರೋನಾ ಸಂದರ್ಭದಲ್ಲಿ ಆಮ್ಲಜನಕವಿಲ್ಲದೆ ಅನೇಕರ ಉಸಿರು ನಿಂತು ಹೋಯಿತು. ಆವಾಗ್ಗೆ ನೆನಪಾಗಿದ್ದು ಗಿಡ-ಮರಗಳ ಉತ್ತೇಜನಕ್ಕೆ ಮೆಲುಕು ಹಾಕುವಂತಾಯಿತು. ಈಗಲಾದರು ಆಮ್ಲಜನಕದ ಕೊರತೆ ನೀಗಿಸಲು ಗಿಡ-ಮರ ಬೆಳೆಸುವುದು ಅತ್ಯಗತ್ಯವಾಗಿದೆ ಈ ಕಾರ್ಯಕ್ಕೆ ವಿಶ್ವ ಬಂಧು ಪರಸರ ಬಳಗ ಅಣಿಯಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಎಸ್.ಕೆ.ಗುಗ್ಗರಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಗಣಿಹಾರ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ವಿಶ್ವ ಬಂಧು ಪರಿಸರ ಬಳಗ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಮಾತನಾಡಿ, ಒಂದು ಸಸಿಯನ್ನು ನೆಟ್ಟರೆ ಕನಿಷ್ಠ ಅದು ಇನ್ನೂರು ಜನರಿಗೆ ಆಮ್ಲಜನಕ ಕೊಡುತ್ತದೆ. ಹೀಗೆಯೇ ನೂರಾರು, ಸಾವಿರಾರು ನೆಡುವುದರಿಂದ ಮುಂದಿನ ದಿನಮಾನಗಳಲ್ಲಿ ಪ್ರಪಂಚದ ಆಮ್ಲಜನಕ ನೀಗುತ್ತದೆ. ಪರಿಸರದ ಅವನತಿಗೆ ಪರೋಕ್ಷವಾಗಿ ನಗರೀಕರಣದ ತೀವ್ರತೆಯೇ ಕಾರಣ. ಇನ್ನು ಮುಂದೆ ಪರಿಸರದ ಅವನತಿಯನ್ನು ತಡೆಗಟ್ಟಿ, ಸಮತೋಲನ ತರುವಲ್ಲಿ ಪ್ರಜ್ಞಾವಂತ ನಾಗರಿಕರು ಸಹಕರಿಸಬೇಕು ಎಂದರು.
ಕಾವ್ಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಮಾತನಾಡಿ, ಆಮ್ಲಜನಕದ ಕೊರತೆಯಿಂದ ಕೋವಿಡ್ ನಂತಹ ಮಾಹಾಮಾರಿಗಳು ನಮ್ಮನ್ನು ಆಳುತ್ತಿವೆ. ಒಬ್ಬರ ಮುಖ ಒಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಸಂಬಂಧಗಳು ದೂರಾಗಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಸರ, ಕಾಡು ಬೆಳೆಸುವುದೊಂದೆ ಪರಿಹಾರ ಎಂದರು.
ವಿಶ್ವಬಂಧು ಪರಿಸರ ಬಳಗದ ಸಂಚಾಲಕರಾದ ಸಿದ್ಧಲಿಂಗ ಚೌಧರಿ ಹಾಗೂ ಪತ್ರಕರ್ತ ಆನಂದ ಶಾಬಾದಿ ಮಾತನಾಡಿ, ವರ್ಷದ 52 ವಾರಗಳಲ್ಲಿ ಸಾವಿರಾರು ಗಿಡಗಳನ್ನು ನೆಡುವ ಕಾರ್ಯ ನಿರಂತರ ಸಾಗಲಿದೆ. ಇದು ಲಕ್ಷ ವೃಕ್ಷ ಅಭಿಯಾನವಾಗಿ ರಾಜ್ಯದಲ್ಲಿ ಮಾದರಿಯಾಗಲಿ, ಆ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯಪ್ರವೃತ್ತರಾಗೋಣ ಎಂದರು.
ಮುಖ್ಯಗುರು ಸಿ.ಎಂ. ಮೇತ್ರಿ, ಮು. ಶಿಕ್ಷಕಿ ಎಸ್.ಎಮ್.ಮಸಳಿ ಮಾತನಾಡಿದರು. ಶಿಕ್ಷಕ ಡಿ.ಎಮ್.ಮಾವೂರ ಸ್ವಾಗತಿಸಿದರು. ಎಸ್.ಬಿ ಬಿರಾದಾರ ವಂದಿಸಿದರು.
ಈ ಸಂದರ್ಭದಲ್ಲಿ ಕರೋನಾ ವಾರಿಯರ್ಸಗಳಾಗಿ ಸೇವೆ ಸಲ್ಲಿಸಿದ ರೇಖಾ ಹೊಸಮನಿ, ಮಮತಾಜ ಬಳಗಾನೂರ, ದೀಪಾ ಗುತ್ತರಗಿ, ಜ್ಯೋತಿ ಬಿರಾದಾರ, ಪ್ರೇಮಾ ಪವಾರ ಇವರನ್ನು ಸನ್ಮಾನಿಸಲಾಯಿತು.