ಕೃಷಿ ಇಲಾಖೆ ಬೆಳಗಾವಿ, ಅರಣ್ಯ ಇಲಾಖೆ ಬೆಳಗಾವಿ, ಗ್ರಾಮ ಪಂಚಾಯಿತಿ ಕಡೋಲಿ ಇವರ ಸಂಯುಕ್ತಾಶ್ರಯದಲ್ಲಿ ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ ಚೆನ್ನೈ ಇವರ ಸಹಯೋಗದಲ್ಲಿ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗಳ ಆವರಣದಲ್ಲಿ “ಆಜಾದಿ ಕಾ ಅಮೃತಮಹೋತ್ಸವ “ಇಂಡಿಯಾ -75”. ವರ್ಷಾಚರಣೆ ನಿಮಿತ್ತ ವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೊದಲಿಗೆಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಅರಣ್ಯ ಇಲಾಖೆ, ಕೃಷಿ ಇಲಾಖೆ,ಗ್ರಾಮ ಪಂಚಾಯಿತಿ ಕಡೋಲಿ , ಮತ್ತು ಶಾಲಾ ಬಳಗದವರು ಸೇರಿ ಮಕ್ಕಳಿಗೆ ಉಪಯುಕ್ತವಾಗುವ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು . ಈ ಕಾರ್ಯಕ್ರಮವನ್ನು ಶಿಕ್ಷಕರಾದ ಶಿವಾನಂದ ತಲ್ಲೂರ ನೆರವೇರಿಸಿಕೊಟ್ಟರು.
ಈ ನಿಮಿತ್ತವಾಗಿ ರೈತರು ಮತ್ತು ಗ್ರಾಮಸ್ಥರು ಮತ್ತು ಪಾಲಕರಿಗಾಗಿ ಶಾಲಾ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೋಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ಪಾಟೀಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಗ್ರಾಮದ ಹಿರಿಯ ಶಿಕ್ಷಕ ಬಾಬುರಾವ ಗೌಡವಾಡ್ಕರ್ ಮಾತನಾಡುತ್ತಾ, ಹಿಂದೆ ಅರಣ್ಯದ ವಿಸ್ತೀರ್ಣ ಬಹಳ ಇತ್ತು. ಈಗ ನಮ್ಮ ಅಹಿತಕರ ಚಟುವಟಿಕೆಗಳಿಂದ ಕಾಡು ಬರಡಾಗುತ್ತಿದೆ. ಮುಂದೆ ನಾವು ನಮ್ಮ ಉಳಿವಿಗೆ ಆದರೂ ಕಾಡು ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೃಷಿ ಇಲಾಖೆಯ ಅಧಿಕಾರಿ ಆರ್. ಬಿ. ನಾಯ್ಕರ ಭೂಮಿಯ ಮೇಲೆ ಮನುಷ್ಯ ಉಳಿಯಲು ಸಸ್ಯ ಬೇಕು. ಮರಗಳು ಆಮ್ಲಜನಕದ ಜೊತೆಗೆ ಮಣ್ಣನ್ನು ಸಂರಕ್ಷಣೆ ಮಾಡುತ್ತವೆ. ರೈತರು ಸಹ ತಮ್ಮ ಹೊಲ ಮತ್ತು ಉಳಿದ ಜಾಗಗಳಲ್ಲಿ,ರಸ್ತೆಬದಿಗಳಲ್ಲಿ ಗಿಡ ನೆಟ್ಟು ಪರಿಸರ ಸ್ನೇಹಿ ಆಗಬೇಕು ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವಲಯ ಅರಣ್ಯಾಧಿಕಾರಿ ಪ್ರಶಾಂತ ಜೈನ್ ಮಾತನಾಡಿ, ದೇಶ ಸ್ವತಂತ್ರವಾಗಿ 75 ವರ್ಷಗಳನ್ನು ಕಳೆದಿದೆ. ನಾವು ಬೆಳವಣಿಗೆಗಾಗಿ ಶ್ರಮಿಸಬೇಕಿದೆ. ನಮ್ಮ ದುರಾಸೆಯ ಫಲವಾಗಿ ಕರೋನಾ ದಂತಹ ಮಹಾಮಾರಿ ರೋಗ ಎದುರಿಸಬೇಕಾಯಿತು. ಈಗ ನಾವು ಬಾಟಲಿಯಲ್ಲಿ ನೀರು ಕುಡಿಯುತ್ತಿರುವ ಹಾಗೆ ಮುಂದೊಂದು ದಿನ ಬಾಟಲಿಯಲ್ಲಿ ಆಮ್ಲಜನಕ ತುಂಬಿಡುವ ಪರಿಸ್ಥಿತಿ ಬಾರದಿರಲು ನಮ್ಮ ದುರಾಸೆಗಳನ್ನು ಬದಿಗೊತ್ತಿ ಪರಿಸರ ಉಳಿಸುತ್ತಾ ಕಾಳಜಿ ಮೆರೆಯೋಣ. ಗಿಡ ಹಚ್ಚಲಾಗದಿದ್ದರೂ ಗಿಡ ಕಡಿಯುವ ಗೋಜಿಗೆ ಹೋಗಬಾರದು ಎಂದರು. ಮದ್ರಾಸ್ ಫರ್ಟಿಲೈಸರ್ ಲಿಮಿಟೆಡ್ ನ ದಾವಣಗೆರೆಯ ಪ್ರಾದೇಶಿಕ ಅಧಿಕಾರಿ ಡಿ.ಎಸ್. ದೇಶಪಾಂಡೆ ಮಾತನಾಡಿ, ಮದ್ರಾಸ್ ಫರ್ಟಿಲೈಸರ್ ಕಂಪನಿ 1966 ರಿಂದ ರೈತರಿಗೆ ಸಹಕಾರಿಯಾಗಲಿ ರೈತರು ಬೆಳೆಯಲಿ ಎಂಬ ಧ್ಯೇಯದಿಂದ ಹುಟ್ಟಿದ ನಮ್ಮ ಸಂಸ್ಥೆ ರೈತರಿಗೆ ಅನೇಕ ಕೃಷಿಪರ ವಸ್ತುಗಳನ್ನು ನೀಡುತ್ತಿರುವುದರ ಜೊತೆಗೆ ಸಮಾಜಪರ ಕೆಲಸಗಳನ್ನು ಮಾಡುತ್ತಿದೆ. ಈಗಿನ ಕಾಲದಲ್ಲಿ ನಗರೀಕರಣದಿಂದ ಕೃಷಿ ಭೂಮಿ ಕಡಿಮೆ ಆಗ್ತಾ ಇದೆ. ಜನಸಂಖ್ಯೆ ಬೆಳೆದಂತೆ ಆಹಾರ, ನೀರು, ಗಾಳಿ ಬೇಕು. ಅದಕ್ಕೆ ಅಗತ್ಯವಾದ ಪರಿಸರವನ್ನು ನಾವು ಕಾಯ್ದುಕೊಳ್ಳಬೇಕು. ನಾವು ನೆರಳಿಗಾಗಿ ಗಿಡ ಹುಡುಕುತ್ತೇವೆ ಹೊರತು ಗಿಡ ನೆಡಬೇಕೆಂಬ ವಿಚಾರ ನಮ್ಮಲ್ಲಿ ಬರುತ್ತಿಲ್ಲ ಇದು ವಿಷಾದನೀಯ ಹೀಗೆ ಆಗದಿರಲಿ ಭೂಮಿ ಬರಡಾಗದಿರಲಿ.ನಮ್ಮ ಕಂಪನಿ ವತಿಯಿಂದ ಇಂತಹ ಸಾಮಾಜಿಕ ಕಾರ್ಯಗಳು ನಿರಂತರವಾಗಿ ಜರುಗುತ್ತವೆ ಎಂದರು.
ಕಡೋಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಸುದೇವ ಆಯಕರೆ ಮಾತನಾಡಿ, ನೀರು, ಮಣ್ಣು, ಆಹಾರ ಒಂದಕ್ಕೊಂದು ಸಂಬಂಧಿತವಾಗಿವೆ. ಬೆಳಗಾವಿ ಜಿಲ್ಲಾ ಪಂಚಾಯಿತಿ ಈ ವರ್ಷ ಕೋಟಿ ವೃಕ್ಷ ನೆಡುವ ಸಂಕಲ್ಪ ಮಾಡಿದೆ. ಆ ನಿಟ್ಟಿನಲ್ಲಿ ಬೆಳಗಾವಿ ತಾಲೂಕಿನಲ್ಲಿ ಕಡೋಲಿ ಗ್ರಾಮ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರಾಜು ಮಾಯಣ್ಣ ಮಾತನಾಡಿ, ಪರಿಸರ ಸಂರಕ್ಷಣೆಯ ಭಾಗವಾಗಿ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಅರಣ್ಯ ಭಾಗದಲ್ಲಿ ರಾಜ್ಯದಲ್ಲಿ ಮಾದರಿಯಾಗಿರುವ ಪ್ರಾಣಿಸಂಗ್ರಹಾಲಯ ಆಗುತ್ತಿರುವುದು ಸಂತೋಷದ ವಿಷಯ.ಇದು ಸಹ ಪರಿಸರ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮಾ ನರೋಟಿ, ಸಿದ್ಧೇಶ್ವರ ಆಗ್ರೋ ಕೇಂದ್ರದ ಕಲ್ಲಪ್ಪ ದೇಸಾಯಿ, ಪ್ರಫುಲ್ ಪಾಟೀಲ, ಶಿಕ್ಷಕರಾದ ಸಿ. ಎನ್. ಜಾಧವ, ರಮೇಶ ಅಲಗೋಡಕರ, ಶಿವಾನಂದ ತಲ್ಲೂರ, ಎಂ. ಪಿ. ಹೊಟ್ಟಿನವರ, ಎಸ್. ವೈ. ಮರಕುಂಬಿ ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರು, ಊರಿನ ರೈತರು ನಾಗರಿಕರು ಶಾಲಾ ಮಕ್ಕಳ ಪಾಲಕರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮದ್ರಾಸ್ ಫರ್ಟಿಲೈಸರ್ ಲಿಮಿಟೆಡ್ ಅಧಿಕಾರಿಗಳಾದ ಕೆ.ಜಿ.ಹಿರೇಮಠ ಸ್ವಾಗತಿಸಿದರು, ಬಾಬುರಾವ್ ಗೌಡವಾಡ್ಕರ್ ವಂದಿಸಿದರು. ಶಿವಾಜಿ ಕುಟ್ರೆ ಕಾರ್ಯಕ್ರಮ ನಿರೂಪಿಸಿದರು.