ಸಿಂದಗಿ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಅಲ್ಪ ಅಧಿಕಾರಾವಧಿಯಲ್ಲಿಯೇ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಹೆಚ್ಚಿನ ಅನುದಾನ ತಂದು ನುಡಿದಂತೆ ನಡೆಯುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವೆ ಎಂದು ಶಾಸಕ ರಮೇಶ ಭೂಸನೂರ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಕಕ್ಕಳಮೆಲಿ ಮತ್ತು ಶಿರಸಗಿ ಗ್ರಾಮದಲ್ಲಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನನ್ನ ಗೆಲುವಿಗೆ ಮೂವತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವಿಗೆ ಕಾರಣರಾದ ಮತದಾರ ಹಾಗೂ ಕಾರ್ಯಕರ್ತರೊಂದಿಗೆ ಸಾಮಾನ್ಯನಂತೆ ಬೆರೆತು ಕೆಲಸ ಮಾಡುವ ಮೂಲಕ ಇನ್ನುಳಿದ ಒಂದು ವರ್ಷದ ಅವಧಿಗೆ ತಕ್ಕ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಉಪಚುನಾವಣೆ ವೇಳೆ ಕೋಳಿ, ತಳವಾರ ಸಮುದಾಯದ ಜನರ ಎಸ್ಟಿ ಮೀಸಲಾತಿ ಪ್ರಮಾಣ ಪತ್ರದ ಬೇಡಿಕೆಯಿರಿಸಿದ್ದರು. ಅವರ ಬೇಡಿಕೆಯಂತೆ ತಳವಾರ, ಪರಿವಾರ ಜನರಿಗೆ ಸರ್ಕಾರ ಎಸ್ಟಿ ಪ್ರಮಾಣಪತ್ರ ನೀಡುವಂತೆ ಆದೇಶಿಸಲಾಗಿದೆ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡು ಪ್ರಮಾಣ ಪತ್ರಗಳನ್ನು ಸಿಎಂ ಅವರೇ ಖುದ್ದು ಪ್ರಮಾಣ ಪತ್ರ ವಿತರಿಸಲಿದ್ದಾರೆ ಎಂದರು.
ಓಬಿಸಿ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮಾತನಾಡಿ, ಚುನಾವಣೆ ವೇಳೆ ಕ್ಷೇತ್ರದ ಜನರಿಗೆ ಕೊಟ್ಟ ಮಾತು, ಭರವಸೆಗಳನ್ನು ಈಡೇರಿಸುತ್ತಿರುವ ಶಾಸಕ ರಮೇಶ ಭೂಸನೂರ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಶಯದಂತೆ ಪ್ರತಿ ಮನೆ, ಸಮಾಜ ಹಾಗೂ ಕಟ್ಟಕಡೆಯ ವ್ಯಕ್ತಿಯ ಮನೆವರೆಗೂ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿರಸಗಿ ಹಾಗೂ ಕಕ್ಕಳಮೆಲಿ ಗ್ರಾಮಸ್ಥರಿಂದ ಸಮುದಾಯ ಭವನ, ಸಿಸಿ ರಸ್ತೆ, ಹೊಲಗದ್ದೆಗಳ ರಸ್ತೆ ಅಭಿವೃದ್ಧಿ, ಗ್ರಂಥಾಲಯ, ಹೋಬಳಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಮಠ,ಮಾನ್ಯಗಳ ಅಭಿವೃದ್ಧಿಗಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮಾಜಿ ಜಿ. ಪಂ. ಸದಸ್ಯ ಬಿಂದುರಾಯಗೌಡ ಪಾಟೀಲ್, ಗ್ರಾ. ಪಂ. ಅಧ್ಯಕ್ಷ, ಸಂಜೀವಕುಮಾರ ಹಳ್ಳೆಪಗೋಳ, ಶ್ರೀಶೈಲಗೌಡ ಮಾಗಣಗೇರಿ, ಭಗವಂತ್ರಾಯಗೌಡ ಹಳ್ಳೇಪ್ಪಗೋಳ, ಶಿವಯೋಗಿ ಮೂಡಗಿ, ಶಿವು ಪದ್ಮ, ದುಂಡಪ್ಪ ಸಾಂಬಾ, ಹಾವಣ್ಣ ಪೂಜಾರಿ, ಮಡಿವಾಳಪ್ಪಗೌಡ ಅಂಕಲಗಿ, ಬಿ. ಎಸ್. ನಡಕುರ, ಎಂ. ಎಸ್. ಟಕ್ಕಳಕ್ಕಿ, ಬಾಗಣ್ಣ ತಳವಾರ, ಸೇರಿದಂತೆ ಕಾರ್ಯಕರ್ತರು ಇದ್ದರು.