ಭವ್ಯ ಕನ್ನಡ ನಾಡನು ಕಟ್ಟೋಣ
ಹುಯಿಲಗೋಳರ ಕನಸ ನನಸಾಗಿಸೋಣ,
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಗೀತೆಯ ಭಕ್ತಿ ಸಂಭ್ರಮದಿ ಹಾಡೋಣ,
ಮ.ರಾಮಮೂರ್ತಿ ರೂಪಿಸಿದ
ಕೆಂಪು-ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣ,,
ಜೈ ಭಾರತ ಜನನಿಯ ತನುಜಾತೆ,
ಜಯಹೇ ಕರ್ನಾಟಕ ಮಾತೆ
ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹಾಡಿ
ಸುವರ್ಣ ಕರ್ನಾಟಕ ಮಹೋತ್ಸವ ಮಾಡೋಣ,
ಅಮೃತ ಭಾರತಿಗೆ ಕನ್ನಡದಾರತಿ ಮಾಡೋಣ…
ಮೂರು ಸಹಸ್ರ ವರ್ಷದ
ಕನ್ನಡ ನಾಡು- ನುಡಿಯ ಮಹತ್ವವ ಸ್ಮರಿಸೋಣ,
ಚಿನ್ನ, ಬೆಳ್ಳಿ, ವಜ್ರಗಳ ಅಳೆದು ಮಾರಿದ
ವಿಜಯನಗರದ ವೈಭವ ಸ್ಮರಿಸೋಣ,
ಹೊಯ್ಸಳರ ಶಿಲ್ಪಕಲಾ ಸೌಂದರ್ಯವ ನೆನೆಯೋಣ,
ಮೈಸೂರು ಅರಸರ ಜನಪರ ಆಡಳಿತವ ಶ್ಲಾಘಿಸೋಣ,
ಕದಂಬ ವಂಶದ ಮಯೂರ ವರ್ಮನ
ಶೌರ್ಯ,ಆಡಳಿತ,ಕನ್ನಡ ಪ್ರೇಮವ
ಗೌರವಿಸೋಣ..
ಕನ್ನಡ ಮಾತೆಗೆ ಸರಳ ವಚನಗಳ ಅಭಿಷೇಕ ಮಾಡಿದ
ಬಸವಣ್ಣ,ಅಕ್ಕಮಹಾದೇವಿ,ಚನ್ನಬಸವಣ್ಣ,
ಸರ್ವಜ್ಞ ಮಹಾಪುರುಷರಿಗೆ ನಮಿಸೋಣ,
ಕನ್ನಡಮ್ಮನ ಹೊನ್ನ ಕಿರೀಟಕ್ಕೆ
ಜ್ಞಾನಪೀಠದ ಮುತ್ತುಗಳ ತೊಡಿಸಿದ
ಕುವೆಂಪು,ಬೇಂದ್ರೆ, ಕಾರಂತ,ಗೋಕಾಕ್,ಮಾಸ್ತಿ,
ಅನಂತಮೂರ್ತಿ,ಕಂಬಾರ,ಕಾರ್ನಾಡರ
ಕೃತಿಗಳ ಓದೋಣ , ಅವರ ಸಾಧನೆಗಳ ಸ್ಮರಿಸೋಣ..
ಕನ್ನಡ ತಾಯಿಯ ಮುಡಿಗೆ ಸರಸ್ವತಿ ಸಮ್ಮಾನ ನೀಡಿದ
ಬೈರಪ್ಪ,ಮೊಯ್ಲಿ ಅವರ ಶ್ಲಾಘಿಸೋಣ,
ತಾಯಿ ಭುವನೇಶ್ವರಿಗೆ
ರಾಷ್ಟ್ರಕವಿ ಕಿರೀಟ ತೊಡಿಸಿದ
ಕುವೆಂಪು,ಗೋವಿಂದ ಪೈ,ಶಿವರುದ್ರಪ್ಪ ರ ಸಾಹಿತ್ಯ ಓದೋಣ,
ಈ ಮಹಾನ್ ಸಾಧಕರಿಗೆ ನಮಿಸೋಣ…
ಕರ್ನಾಟಕ ರತ್ನ ಪ್ರಾಯರಾದ
ಕುವೆಂಪು,ಡಾ..ರಾಜ್,ನಿಜಲಿಂಗಪ್ಪ,
ಸಿಎನ್ನಾರ್ ರಾವ್,ದೇವಿಪ್ರಸಾದ ಶೆಟ್ಟಿ,
ಭೀಮಸೇನ ಜೋಶಿ,ಶಿವಕುಮಾರ ಸ್ವಾಮೀಜಿ,
ದೇಜಗೌ,ವೀರೇಂದ್ರ ಹೆಗಡೆ, ಪುನೀತರ ಕೊಡುಗೆಗಳ ಸ್ಮರಿಸೋಣ
ಅವರ ಅಮೂಲ್ಯ ಸಾಧನೆಗೆ ನಮಿಸೋಣ..
ಪ್ರತಿ ದಿನ,ಪ್ರತಿ ಕ್ಷಣ ಕನ್ನಡವನ್ನೇ ಬಳಸೋಣ,
ಎಳೆಯರಿಗೆ ಕನ್ನಡವನ್ನೇ ಕಲಿಸೋಣ,
ಕನ್ನಡ ವಿರೋಧಿಗಳ ಧಿಕ್ಕರಿಸೋಣ,
ಕರ್ನಾಟಕ ಸುವರ್ಣ ಮಹೋತ್ಸವದಂದು
ಕನ್ನಡ ನಾಡು,ನುಡಿ,ಸಂಸ್ಕೃತಿ ರಕ್ಷಣೆಗೆ
ಅನುಕ್ಷಣವೂ ಕಟಿಬದ್ಧರಾಗೋಣ..
ಡಾ.ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ
ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು
ಕೆ.ಆರ್.ನಗರ,ಮೈಸೂರು ಜಿಲ್ಲೆ
ಮೊಬೈಲ್ -6363172368