ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ನಿನ್ನೆ ಬಸವ ಭಕ್ತರು ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ ಯೋಜನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಬಗ್ಗೆ ವರದಿಯಾಗಿತ್ತು.
ಇಂದು ಇನ್ನೊಂದು ಸಂಘಟನೆ ಮೊಟ್ಟೆ ಬೇಕು ಎಂದು ಪ್ರತಿಭಟನೆ ಆರಂಭಿಸಿದ್ದು ಸರ್ಕಾರವನ್ನು ಗೊಂದಲಕ್ಕೆ ಕೆಡವಿದೆ.
ಮೊಟ್ಟೆ ವಿತರಿಸುವ ಯೋಜನೆ ಇಡೀ ರಾಜ್ಯಕ್ಕೆ ಸಂಬಂಧಿಸಿಲ್ಲ ಅಪೌಷ್ಟಿಕತೆಗೆ ತುತ್ತಾಗಿರುವ ಹೈದರಾಬಾದ್ ಕರ್ನಾಟಕದ ಬೀದರ, ಕಲಬುರ್ಗಿ, ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು. ಜತೆಗೆ ಪಕ್ಕದ ಬಿಜಾಪುರ ಜಿಲ್ಲೆ ಒಳಗೊಂಡಂತೆ ಕೇವಲ ಏಳು ಜಿಲ್ಲೆಗಳಿಗೆ ಮಾತ್ರ ಈ ಯೋಜನೆ ಇರುವುದು ಎಂದು ಗುಲ್ಬರ್ಗಾ ವಿಭಾಗದ ಆಯುಕ್ತರಾದ ನಳೀನ್ ಅತುಲ್ ಅವರು ಹೇಳಿದ್ದು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ನರುಳುತ್ತಿರುವುದು ಕಂಡು, HKRDB ಅನುದಾನವನ್ನು ಬಳಸಿ ಮಕ್ಕಳ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಮೊಟ್ಟೆ ವಿತರಿಸಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಫಲವಾಗಿ ವಾರದಲ್ಲಿ ಮೂರು ದಿನ ಮಕ್ಕಳಿಗೆ ಮೊಟ್ಟೆ ನೀಡಲು ಆರಂಭಿಸಲಾಗಿದೆ ಆದರೆ ಇನ್ನೊಂದು ವಾದವೆಂದರೆ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ತುತ್ತಾಗಿರುವುದಕ್ಕೆ ಸರ್ಕಾರವೆ ನೇರ ಹೊಣೆಯಾಗಿದೆ ಎಂಬ ಆರೋಪವಿದೆ.
ಮಕ್ಕಳ ಅಪೌಷ್ಟಿಕತೆ ಮತ್ತು ಶಿಕ್ಷಣದ ಹಿನ್ನೆಡೆ ಎರಡಕ್ಕೂ ಪರಸ್ಪರ ಸಂಬಂಧವಿದೆ. ಒಂದೆಡೆ, ಕಣ್ಣೊರೆಸುವ ತಂತ್ರವಾಗಿ ಸರ್ಕಾರ ಏಳು ಜಿಲ್ಲೆಗಳಲ್ಲಿ ಒಂದನೇ ತರಗತಿಯಿಂದ ಎಂಟನೆಯ ತರಗತಿಯವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ವಿತರಿಸಲು ನಿರ್ಧರಿಸಿದೆ.
ಮತ್ತೊಂದೆಡೆ, ಇದರ ವಿರುದ್ಧ ಸಣ್ಣ ಪ್ರತಿರೋಧ ಹುಟ್ಟುವಂತೆ ವ್ಯವಸ್ಥಿತವಾಗಿ ಪ್ಲಾನ್ ರೂಪಿಸಿದೆ ಎನ್ನುವ ದಟ್ಟವಾದ ಅನುಮಾನ ಸಾರ್ವಜನಿಕರಲ್ಲಿ ಎದ್ದಿದೆ. ಇದನ್ನು ಪುಷ್ಟೀಕರಿಸುವಂತೆ ಮುಖ್ಯಮಂತ್ರಿಗಳ ಕುಲಬಾಂಧವರಿಂದಲೆ ಮೊಟ್ಟೆಯ ಬಗ್ಗೆ ತಕರಾರು ಆರಂಭವಾಗಿದೆ.
ಮಗುವನ್ನೂ ಚಿವುಟಿ ತೊಟ್ಟಿಲನ್ನೂ ತೂಗುತ್ತಿರುವ ಸರ್ಕಾರದ ಈ ನಡೆಯ ಹಿಂದೆ ಕುಟಿಲ ರಾಜಕಾರಣವನ್ನು ಹೊಂದಿರುವುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ, ಸರ್ಕಾರದ ಬೊಕ್ಕಸಕ್ಕೆ ಇದು ವಿನಾಕಾರಣ ಹೊರೆಯಾಗುತ್ತದೆ ಎಂದು ಸರ್ಕಾರ ಭಾವಿಸಿದಂತಿದೆ. ಅದಕ್ಕೆ ಹೇಗಾದರೂ ಮಾಡಿ ಈ ಯೋಜನೆಗೆ ಫುಲ್ ಸ್ಟಾಪ್ ಹಾಕಬೇಕೆಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ ನಿರ್ಧರಿಸಿದ್ದಾರೆಂದು ರಾಜಕೀಯ ಪಡಸಾಲೆಯಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.
‘ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಯ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ.ಆದರೆ, ಏನು ಮಾಡುವುದು ಕೆಲವು ಜನರಿಂದ ಪ್ರತಿರೋಧ ಬಂದಿರುವುದರಿಂದ ಅನಿವಾರ್ಯವಾಗಿ ಈ ಕೋಳಿ ಮೊಟ್ಟೆ ನೀಡುವ ಯೋಜನೆಯನ್ನು ಕೈಬಿಟ್ಟಿದ್ದೇವೆ’ ಎಂದು ಸಾರ್ವಜನಿಕರಿಗೆ ಸಮಜಾಯಿಷಿ ನೀಡಲು ಬೊಮ್ಮಾಯಿ ಒಳ್ಳೆಯ ಪ್ಲಾನ್ ಹೆಣೆದಂತಿದೆ! ಆದರೆ ಒಂದು ವೇಳೆ ಈ ಯೋಜನೆ ಕೈ ಬಿಟ್ಟರೆ ಸರ್ಕಾರಕ್ಕೆ ಇದು ಉರುಳಾಗುವುದು ಶತಸ್ಸಿದ್ಧವೆನ್ನಲಾಗುತ್ತಿದ್ದು, ರಾಜ್ಯ ಸರ್ಕಾರದ ನಡೆ ಅಪೌಷ್ಠಿಕ ಮಕ್ಕಳ ಕಡೆಯೋ ಅಥವಾ ಬಸವಣ್ಣನವರ ಭಕ್ತರ ಕಡೆಯೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ