Homeಸುದ್ದಿಗಳುಕಾಂಗ್ರೆಸ್ ನವರಿಗೆ ರಾಜಕಾರಣ, ಚುನಾವಣೆ ಮುಖ್ಯ ಅಲ್ಲ - ಡಿ ಕೆ ಶಿವಕುಮಾರ

ಕಾಂಗ್ರೆಸ್ ನವರಿಗೆ ರಾಜಕಾರಣ, ಚುನಾವಣೆ ಮುಖ್ಯ ಅಲ್ಲ – ಡಿ ಕೆ ಶಿವಕುಮಾರ

ಸಿಂದಗಿ: ಆಯಾ ವೃತ್ತಿಯಲ್ಲಿ ಆಚಾರ, ವಿಚಾರಗಳನ್ನು ತಿಳಿದುಕೊಂಡು ಮುಂದಿನ ದಿನಮಾನಗಳಲ್ಲಿ ಜನರ ದನಿಯಾಗಬೇಕು ಎನ್ನುವ ನಂಬಿಕೆಯಲ್ಲಿದ್ದ ದೀನ ದಲಿತರು, ಅಲ್ಪ ಸಂಖ್ಯಾತರು, ಅಸಂಘಟಿತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೋವಿಡ್ ದಿಂದ ಮೃತಪಟ್ಟವರ ಕುಟುಂಬಕ್ಕೆ ಇನ್ನೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ನಾನೇ ಖುದ್ದಾಗಿ ರಾಜ್ಯಾದ್ಯಾಂತ ಪ್ರವಾಸ ಮಾಡಿ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಹುಡುಕುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಕರೋನಾ ಸಂಕಷ್ಟ, ಅಪೌಷ್ಠಿಕತೆ, ಮೂಲಸೌಕರ್ಯ, ವಲಸೆ ಕಾರ್ಮಿಕರ ಉದ್ಯೋಗ ಮತ್ತಿತರ ವಿಷಯಗಳ ಕುರಿತಾಗಿ ದಲಿತ ಸಮುದಾಯದವರೊಡನೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್‍ನವರಿಗೆ ರಾಜಕಾರಣ ಹಾಗೂ ಚುನಾವಣೆ ಮುಖ್ಯ ಅಲ್ಲ. ಸಮಾಜಕ್ಕೆ ಆತ್ಮ ಧೈರ್ಯ ತುಂಬುವುದು ಮುಖ್ಯವಾಗಿದೆ. ಕಾಂಗ್ರೆಸ್ ಪಕ್ಷ ಜನರೊಂದಿಗೆ ಇದೆ. ರಾಜ್ಯ ಹಾಗೂ ರಾಷ್ಟ್ರ ಕೋವಿಡ್ ನಿಂದಾಗಿ ನರಳುತ್ತಾ ಇದೆ. ಅಲ್ಲದೇ ದಲಿತರು, ಕಾರ್ಮಿಕರು ಕೋವಿಡ್ ವೇಳೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.

ಸಿಂದಗಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಅದ್ದೂರಿ ಸ್ವಾಗತ.

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕೋವಿಡ್ ಪರಿಹಾರ ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಸಮಸ್ಯೆಗಳಿಗೆ ಕೂಡಲೆ ಪರಿಹಾರ ಸಿಗುವದಿಲ್ಲ ಅದನ್ನು ಹಂತ ಹಂತವಾಗಿ ದೊರಕಿಸಿ ಕೊಡುತ್ತೇನೆ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಸಂವಿಧಾನದ ಆಶಯದಂತೆ ಕಾರ್ಯ ಮಾಡುತ್ತಿದ್ದೇನೆ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಲಿತರ ಅಭಿವೃದ್ದಿಗೆ ರೂ 27 ಸಾವಿರ ಕೋಟಿಗಳಷ್ಟು ಹಣ ಮೀಸಲಿಟ್ಟು ದಲಿತರ ಅಭಿವೃದ್ದಿಗೆ ಶ್ರಮಿಸಿದ್ದೇವೆ ಆದರೆ ಆ ಯೋಜನೆ ಇಂದು ದಲಿತರಿಗೆ ಮುಟ್ಟುತ್ತಿಲ್ಲ ಎಂಬ ನೋವು ನಮಗೆ ಕಾಡುತ್ತಿದೆ.

ಸದಾಶಿವ ಆಯೋಗ ರಚನೆ ಮಾಡಿದ್ದು ಎಸ್.ಎಮ್.ಕೃಷ್ಣ ಸರ್ಕಾರದಲ್ಲಿ ಅದು ನಾವೇ ಮಾಡಿದ್ದು ಆದರೆ ಇಂದು ಅದು ಕೋರ್ಟಿನಲ್ಲಿ ಇದೆ ಯಾವುದೇ ಯೋಜನೆಗಳು ಪಕ್ಷದಲ್ಲಿ, ಜನರ ಮಧ್ಯದಲ್ಲಿ ಚರ್ಚೆಯಾಗಿ ಅನ್ಯ ಸಮಾಜಕ್ಕೆ ನೋವಾಗದೆ ಎಲ್ಲರಿಗೂ ಒಮ್ಮತ ಸಿಕ್ಕ ಮೇಲೆ ಮಾಡುವುದು ಸೂಕ್ತ. ತರಾತುರಿಯಲ್ಲಿ ಮಾಡುವುದು ಬೇಡ ಎಂಬ ಕಲ್ಪನೆಯಿಂದ ಅದು ನೆನೆಗುದಿಗೆ ಬಿದ್ದಿದೆ ಅತ್ಯಂತ ಜವಾಬ್ದಾರಿಯುತವಾಗಿ ಅದನ್ನು ಮುಂದಿನ ದಿನಮಾನಗಳಲ್ಲಿ ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದರು.

ದಲಿತ ಮುಖಂಡ ವೈ.ಸಿ.ಮಯೂರ ಮಾತನಾಡಿ, ಸ್ವಾತಂತ್ರ್ಯ ದೊರೆತು 70 ದಶಕಗಳು ಕೋಮುವಾದಿ, ಜಾತಿವಾದಕ್ಕೆ ಸಿಲುಕಿ ದಲಿತರು ತತ್ತರಿಸಿಹೋಗಿದ್ದೇವೆ ಇನ್ನೂವರೆಗೆ ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಹೋಗಿಲ್ಲ. ಅಲ್ಲದೆ ನಮ್ಮನಾಳುವ ಸರಕಾರಗಳು ಡಾ. ಅಂಬೇಡ್ಕರ ನಿಗಮದಿಂದ ಸಿಗುವಂತ ಸೌಲಭ್ಯಗಳನ್ನು ಕಡಿತಗೊಳಿಸಿದೆ. ಕರೋನಾ ಸಂಕಷ್ಟಕ್ಕೆ ಸಿಲುಕಿ ಎಷ್ಟೋ ಜನ ಸತ್ತಿದ್ದಾರೆ ಎನ್ನುವುದು ಅಂಕಿ ಸಂಖ್ಯೆ ಗೊತ್ತಾಗಿಲ್ಲ. ಖಾಸಗೀಕರಣದಿಂದ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದ್ದು ಹಂತ ಹಂತವಾಗಿ ನಿವಾರಣೆ ಮಾಡಬೇಕು ಮತ್ತು ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರಾತಿನಿಧ್ಯ ಕೊಡುವಂತೆ ಮನವಿ ಮಾಡಿಕೊಂಡರು.

ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಆಡಳಿತಾರೂಢ ಸರಕಾರ ಪಡಿತರ ಚೀಟಿಗಳ ಮುಖಾಂತರ ನೀಡುವ 7 ಕೆಜಿ ಅಕ್ಕಿಯನ್ನು 2 ಕೇಜಿಗೆ ಇಳಿಸಿದ್ದಾರೆ. ಬಡಕೂಲಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕಸಿದುಕೊಂಡಿದೆ ಇದರ ಬಗ್ಗೆ ಸದನದಲ್ಲಿ ಚರ್ಚಿಸುವಂತೆ ಕೇಳಿಕೊಂಡರು.

ರಮೇಶ ನಡುವಿನಕೇರಿ ಮಾತನಾಡಿ, ತಾಲೂಕಿನ ಗ್ರಾಪಂ ಯಲ್ಲಿ ಹಾಗೂ ಪುರಸಭೆಯಲ್ಲಿ ದಲಿತರಿಗಾಗಿ ಬರುವಂಥ ಆಶ್ರಯ ಮನೆಗಳಿಗೆ ಬಿಲ್ಲು ಮಾಡಲು ರೂ 50 ಸಾವಿರಗಳಂತೆ ಬೇಡಿಕೆ ಇಡುತ್ತಿದ್ದಾರೆ ಬಡವರು ಎಲ್ಲಿಂದ ಕೊಡಬೇಕು ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂವಾದದಲ್ಲಿ ದಲಿತ ಮುಖಂಡರಾದ ಶಿವಾನಂದ ಜಗತಿ, ಶಿವು ಕಾಲೆಬಾಗ, ರಮೇಶ ಗುಬ್ಬೇವಾಡ, ಸಾಯಬಣ್ಣಾ ಪುರದಾಳ, ರಾವುತ ತಳಕೇರಿ, ರಮೇಶ ನಡುವಿನಕೇರಿ ಸೇರಿದಂತೆ ಸಂವಾದ ಕಾರ್ಯಕ್ರಮದಲ್ಲಿ ಸುಮಾರು 20 ಕ್ಕೂ ಹೆಚ್ಚು ದಲಿತ ಮುಖಂಡರು ಸಮುದಾಯದ ಸಮಸ್ಯೆಗಳ ಕುರಿತಾಗಿ ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಡಾ. ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಿದರು.

ಈ ಸಂದರ್ಭದಲ್ಲಿ ಬಬಲೇಶ್ವರ ಶಾಸಕ ಡಾ. ಎಂ.ಬಿ.ಪಾಟೀಲ, ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಅಭ್ಯರ್ಥಿ ಅಶೋಕ ಮನಗೂಳಿ, ಕಾಂತಾ ನಾಯಕ, ಮೈಬೂಬಸಾಬ ತಾಂಬೋಳಿ, ಶರಣಪ್ಪ ಸುಣಗಾರ, ವಿಠ್ಠಲ ಕಟಕದೊಂಡ, ಎಸ್.ಎಮ್.ಪಾಟೀಲ ಗಣಿಹಾರ, ಮಲ್ಲಣ್ಣ ಸಾಲಿ, ಜಿಲ್ಲಾ ವಿಕ್ಷಕ ಅಜಯಕುಮಾರ ಸರನಾಯಕ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.

ಜಿಲ್ಲಾಧ್ಯಕ್ಷ ರಾಜು ಆಲಗೂರ ಸ್ವಾಗತಿಸಿ, ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ವಂದಿಸಿದರು.

RELATED ARTICLES

Most Popular

close
error: Content is protected !!
Join WhatsApp Group