ಗುಣಮಟ್ಟದ ಸಾಹಿತ್ಯ ರಚನೆಯಾಗಬೇಕಿದೆ: ಸಿಎಂ ಬೊಮ್ಮಾಯಿ
ಬೆಳಗಾವಿ – ಇದೇ ಗುರುವಾರ ದಿ. 23ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಗರದ ಮರಾಠಾ ಮಂಡಳ ಕಾಲೇಜಿನ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಪುಟ್ಟಿ ಅವರು ರಚಿಸಿದ ‘ಭಾವಗಳು ಬಿಕರಿಗಲ್ಲ’ ಕವನ ಸಂಕಲನವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಸಾಹಿತ್ಯದ ಕೊರತೆ ಎದ್ದುಕಾಣುತ್ತಿದೆ. ಪ್ರಜ್ಞಾವಂತರು ಪ್ರಬುದ್ಧರು ಒಳ್ಳೆಯ ಸಾಹಿತ್ಯ ನಿರ್ಮಾಣ ಮಾಡಲು ಮುಂದೆ ಬರಬೇಕು. ಭಾವಗಳ ಸಂಗಮವಾದ ಇಂತಹ ಕೃತಿಗಳು ಇನ್ನಷ್ಟು ತಮ್ಮಿಂದ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕೆ.ಎ.ಎಸ್ ಅಧಿಕಾರಿಗಳಾದ ಡಾ. ರವಿ ತಿರ್ಲಾಪುರ ಮಾತನಾಡಿ, ಆರೋಗ್ಯಕರ ಸಮಾಜಕ್ಕೆ ಉತ್ತಮ ಸಾಹಿತ್ಯ ಕೊಡುಗೆಯಾಗಬಲ್ಲದು. ಸಾಹಿತ್ಯ ನಮ್ಮ ಜೀವನಕ್ಕೆ ಹಿಡಿದ ಕೈಗನ್ನಡಿ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಿತ್ತೂರಿನ ಕಲ್ಮಠದ ಶ್ರೀ ಮ. ನಿ. ಪ್ರ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಪ್ರಸ್ತುತ ಸಮಾಜದಲ್ಲಿ ಭಾವನೆಗಳಿಗೆ ಬೆಲೆ ಇಲ್ಲದೆ ಅಧೋಗತಿಯತ್ತ ಸಾಗುತ್ತಿದೆ. ಈ ಸ್ಥಿತಿಯಲ್ಲಿ ಭಾವಗಳ ಸಂಗಮವಾದ ಸಾಹಿತ್ಯ ಸಮಾಜಕ್ಕೆ ದಾರಿತೋರಬಲ್ಲವು ಎನ್ನುತ್ತಾ ಸಾಹಿತ್ಯಕ ಕೃಷಿ ಹೆಚ್ಚಲಿ ಎಂದು ಆಶೀರ್ವದಿಸಿದರು. ಮುಖ್ಯಮಂತ್ರಿಗಳು ಕವನ ಸಂಕಲನ ಬರೆದ ಸಾಹಿತಿ ವಿಜಯಲಕ್ಷ್ಮಿ ಪುಟ್ಟಿ ಯವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕಿತ್ತೂರಿನ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಅಭಿಯಂತರರಾದ ಮಹಾಂತೇಶ ಪುಟ್ಟಿ,ಆಕಾಶ ಪುಟ್ಟಿ, ಐಶ್ವರ್ಯ ಪುಟ್ಟಿ,ಸಾಹಿತಿಗಳಾದ ಡಾ. ಶಶಿಕಾಂತ ಪಟ್ಟಣ, ಆಶಾ ಕಡಪಟ್ಟಿ, ಸುನಂದಾ ಎಮ್ಮಿ, ಪ್ರೊ. ಗಿರೀಶ ಕರ್ಕಿ ಉಪಸ್ಥಿತರಿದ್ದರು.