ಬೆಂಗಳೂರು – ಸಾಹಿತ್ಯ ವಿಚಾರ ವೇದಿಕೆಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನ. ೨೦ ರಂದು ಬೆಂಗಳೂರಿನ ಆರ್ ಪಿ ಸಿ ಲೇಔಟ್ 10 ನೇ ಮುಖ್ಯರಸ್ತೆಯ ಡಾ.ಕೆ.ವಿ.ನಾರಾಯಣಮೂರ್ತಿರವರ ಮನೆಯಂಗಳದಲ್ಲಿ ಬೆಳಿಗ್ಗೆ 11.00 ಗಂಟೆಗೆ ‘ಸತ್ಯಂ ಶಿವಂ ಸುಂದರಂ’ ಕೃತಿ ಲೋಕಾರ್ಪಣೆಯನ್ನು ಖ್ಯಾತ ಕಾದಂಬರಿಕಾರ ಡಾ.ಸುರೇಶ್ ಪಾಟೀಲ ನೆರವೇರಿಸುವರು.
ಪ್ರಾಧ್ಯಾಪಕ ಡಾ.ಎಸ್.ರಾಮಮೂರ್ತಿ ಶರ್ಮ ಲಕ್ಕೂರುರವರು ಕೃತಿ ಕುರಿತು ಮಾತನಾಡುವರು.
ಪ್ರೊ. ಎಚ್.ಎನ್.ಸುರೇಶ್ ಅಧ್ಯಕ್ಷತೆ ವಹಿಸುವರು. ಹಿರಿಯ ವಿದ್ವಾಂಸ ಡಾ.ಎಂ.ಶಿವಕುಮಾರ ಸ್ವಾಮಿ ಮತ್ತು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು , ಕೆ.ಕೆ.ಪ್ರಿಂಟರ್ಸ್ ಮತ್ತು ಪಬ್ಲಿಶರ್ಸ್ ನ ಶಿವರಾಂ ಉಪಸ್ಥಿತರಿರುವರು ಎಂದು ಸಾಹಿತ್ಯ ವಿಚಾರ ವೇದಿಕೆ ಅಧ್ಯಕ್ಷ ಡಾ. ಆರ್ ವಾದಿರಾಜು ತಿಳಿಸಿದ್ದಾರೆ.
ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಕೆ ವಿ ನಾರಾಯಣ ಮೂರ್ತಿರವರ ‘ಸತ್ಯಂ ಶಿವಂ ಸುಂದರಂ’ ಒಂದು ಮಹತ್ವದ ಕೃತಿ. ಭಾರತೀಯರ ಅಧಿದೈವ ಶಿವನ ಕುರಿತಾಗಿ ಸೊಗಸಾದ ಮನಗುಟ್ಟುವ ಶೈಲಿಯಲ್ಲಿ ಶಿವನ ಅನೇಕ ಸ್ವರೂಪಗಳನ್ನು ಪರಿಚಯಿಸಿದ್ದಾರೆ.
ವೇದೋಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ಶಿವ ತತ್ವ, ಶಿವರಾಧನೆಯ ವಿಸ್ತೃತ ಮಾಹಿತಿಗಳಿಂದ ಕೂಡಿರುವ ಪುಸ್ತಕ ಇದಾಗಿದೆ.