ಬೆಳಗಾವಿಃ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಘಟಕದ ಸಹಯೋಗದಲ್ಲಿ ಬುಧವಾರದಂದು ರಾಜ್ಯ ಕಾರ್ಯಕಾರಿಣಿ ಸಭೆಯು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶರವರ ಉಪಸ್ಥಿತಿಯಲ್ಲಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಉಮಾಸ್ವಾಮಿ ಲೇಔಟ್ನ ರಾಯಲ್ ಗಾರ್ಡನ್ದಲ್ಲಿ ಜರುಗಿತು.
ರಾಜ್ಯದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿಯವರು ಶಿಕ್ಷಕರ ಸಮಸ್ಯೆಗಳ ಕುರಿತು “ಸಿ ಆಂಡ್ ಆರ್ ನಿಯಮಗಳಿಗೆ ತಿದ್ದುಪಡಿ ಮಾಡಿ ಪಿಎಸ್ಟಿ ಪದವೀಧರ ಶಿಕ್ಷಕರನ್ನು ಜಿಪಿಟಿ ಹುದ್ದೆಯಲ್ಲಿ ವಿಲೀನಗೊಳಿಸಿ ಸೇವಾ ಹಿರಿತನ ನೀಡುವುದು. ಪದವೀಧರ ಶಿಕ್ಷಕರನ್ನು ವಿಲೀನಗೊಳಿಸಿದ ನಂತರ ಅವರು ಅಪೇಕ್ಷೆ ಪಡುವ ಸ್ಥಳಗಳಿಗೆ ನಿಯುಕ್ತಿಮಾಡಲು ಅವಕಾಶ ನೀಡುವುದು.೧೫೦೦೦ ಜಿಪಿಟಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಕ್ಕಿಂತ ಪೂರ್ವದಲ್ಲಿ ಸೇವಾನಿರತ ಪದವೀಧರ ಶಿಕ್ಷಕರಿಗೆ ಅವಕಾಶ ನೀಡುವುದು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ” ತಮ್ಮ ಸ್ವಾಗತಪರ ಭಾಷಣದಲ್ಲಿ ತಿಳಿಸಿದರು. ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುತ್ತ “ಇದುವರೆಗೂ ಸಂಘ ಶಿಕ್ಷಕರ ಪರವಾಗಿ ಶಿಕ್ಷಕರ ವರ್ಗಾವಣೆ ನೀತಿಯಿಂದ ಹಿಡಿದು ಸಿ.ಆಂಡ್ ಆರ್ ನಿಯಮಾವಳಿಗಳ ತಿದ್ದುಪಡಿ ಕುರಿತಂತೆ ಹತ್ತು ಹಲವು ಸಲ ಪ್ರತಿಭಟನೆ ನಡೆಸುವ ಮೂಲಕ ಮನವಿ ನೀಡಿದ್ದು.ವೃಂದ ನೇಮಕಾತಿ ನಿಯಮಗಳಲ್ಲಿ ಕೂಡ ಬದಲಾವಣೆ ಮಾಡುವ ಮೂಲಕ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡುತ್ತ ಪ್ರತಿ ವರ್ಷವೂ ವರ್ಗಾವಣೆ ಮಾಡುವ ಜೊತೆಗೆ ಗ್ರಾಮೀಣ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗ್ರಾಮೀಣ ಭತ್ಯೆ ಮಂಜೂರು ಮಾಡುವಂತೆ ತಿಳಿಸಿ ಮನವಿಯನ್ನು ಅರ್ಪಿಸಿದರು.
ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಜಯಕುಮಾರ ಹೆಬಳಿಯವರು ಕಾರ್ಯಕಾರಿಣಿ ಸಭೆಯ ನೇತೃತ್ವವನ್ನು ವಹಿಸಿಕೊಂಡಿದ್ದರು.
ಸಂಘದ ಪದಾಧಿಕಾರಿಗಳು ನಡೆಸಿದ ಕಾರ್ಯಕಾರಿಣಿ ಸಭೆಯಲ್ಲಿ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶರವರು ಮಾತನಾಡುತ್ತ ,“ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ನಮ್ಮ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿದ್ದು ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು”ಎಂದು ಭರವಸೆ ನೀಡಿದರು.
ಎ.ಐ.ಪಿ.ಟಿ.ಎಸ್ ಕಾರ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ರಾಜ್ಯದ ಪದಾಧಿಕಾರಿಗಳು. ಉಪಾಧ್ಯಕ್ಷರಾದ ನಾಗೇಂದ್ರ, ಪದ್ಮಲತಾ, ಚೇತನ, ಸುಮತಿ, ನಾಗನಗೌಡ, ಕಮಲಾದೇವಿ, ಸವದತ್ತಿ ತಾಲೂಕ ಅಧ್ಯಕ್ಷರಾದ ಹಣಮಂತ ಪೆಟ್ಲೂರ, ಉಪಾಧ್ಯಕ್ಷರಾದ ಎಂ.ಎಸ್.ಕೋಳಿ,ಜಿಲ್ಲಾ ಸಂಘಟನೆಯ ಎಂ.ಎಪ್.ಸಿದ್ದನಗೌಡರತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ,ಸಂಘಟನಾ ಕಾರ್ಯದರ್ಶಿ ಜಿ.ವ್ಹಿ.ಕುರಿ, ವೀರೇಶ ಚಂದರಗಿ,ಸಾವಿತ್ರಿ ತಳವಾರ ಸೇರಿದಂತೆ ಎಲ್ಲ ಜಿಲ್ಲೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಗದೀಶ ಗೋಣಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ನುಗ್ಲಿ ಸ್ವಾಗತಿಸಿದರು.