ಸಿಂದಗಿ: ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆಗಳಿಗಾಗಿ ಇಡೀ ರಾಜ್ಯದಾದ್ಯಂತ ನಡೆಯುತ್ತಿರುವ ಧರಣಿ ಪ್ರತಿಭಟನಾ ಕಾರ್ಯಕ್ರಮದ ಬೆಂಬಲಾರ್ಥ ಸಿಂದಗಿ ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ರೈತರಪರ ಯಾವೊಂದು ಅನುಕೂಲಗಳು ಮಾಡಿಕೊಟ್ಟಿಲ್ಲ ಮತ್ತು ಅಧಿಕಾರಕ್ಕೆ ಬಂದಾಗೊಮ್ಮೆ ಅಚ್ಚೆ ದಿನ್ ಬರುತ್ತೆ ಎಂದು ಹೇಳುತ್ತ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದಾರೆ. ಅಲ್ಲದೆ ಭೂ ಕಾಯ್ದೆಗಳನ್ನು ತಿದ್ದುವ ಮೂಲಕ ಶ್ರೀಮಂತರ ಪರ ಕಾನೂನು ಪಾಸು ಮಾಡಿದ್ದಾರೆ. ಮತ್ತು ದಿನೆ ದಿನೆ ಡಿಸೇಲ್, ಪೆಟ್ರೋಲ್ ಬೆಲೆ ಏರಿಸುತ್ತ ಬಡಕುಟುಂಬಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದು ಜನಸಾಮಾನ್ಯರ ಸರಕಾರವಲ್ಲ. ದಲ್ಲಾಳಿಗಳ,ಶ್ರೀಮಂತರ ಸರಕಾರವಾಗಿದೆ. ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ರೈತರು, ಜನಸಾಮಾನ್ಯರು ಸೇರಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಾ ಅಧ್ಯಕ್ಷ ಬಸೀರ ಅಹ್ಮದ ತಾಂಬೆ, ಕಾರ್ಯದರ್ಶಿ ಮಲ್ಲಿಕಾಜುನ ಬಳಬಟ್ಟಿ, ತಾಲೂಕ ಉಪಾಧ್ಯಕ್ಷ ನಬಿಲಾಲ ಹಿಪ್ಪರಗಿ ಮುಂತಾದವರು ಉಪಸ್ಥಿತರಿದರು.