ಸಿಂದಗಿ: ತಾಲೂಕಿನ ಮೋರಟಗಿ ಗ್ರಾಮದ ಪೆಟ್ರೋಲ್ ಪಂಪ ಆವರಣದಲ್ಲಿ ಇಂಧನ ಬೆಲೆ ಏರಿಕೆಯ ಕ್ರಮವನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಹುಸೇನ್ ಬಾಶ್ಯ ಬಾಗವಾನ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ದೇಶದ ಜನತೆಗೆ ಸುಳ್ಳು ಆಶ್ವಾಸನೆ ನೀಡುತ್ತ ಅಧಿಕಾರ ನಡೆಸುತ್ತಿದೆ. ಈ ಹಿಂದೆ ಪ್ರಧಾನಿ ಮೋದೀಜಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಬಡವರ ಬ್ಯಾಂಕ ಖಾತೆಗೆ ಹಣ ಜಮಾ ಮಾಡಿ ಅಚ್ಚಾ ದಿನ್ ತರುತ್ತೇನೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ತಮ್ಮ ಸರ್ವಾಧಿಕಾರ ಧೋರಣೆ ತಾಳಿದ್ದಾರೆ. ಜನಸಾಮಾನ್ಯರ ಬದುಕು ಕಠಿಣಗೊಳಿಸಿರುವ ಇಂಧನ ಬೆಲೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಬೆಲೆ ತಕ್ಷಣ ನಿಯಂತ್ರಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ಹರವಾಳ ಮಾತನಾಡಿ, ನೀವು ನಡೆಸುತ್ತಿರುವ ಕಣ್ಣಾ ಮುಚ್ಚಾಲೆ ಆಟ ಈಗಾಗಲೇ ಜನಸಾಮಾನ್ಯರಿಗೆ ಅರ್ಥ ಆಗಿದೇ ಕೂಡಲೇ ಇಂಧನ ಮತ್ತು ಅಡುಗೆ ಅನಿಲ ದರ ಕಡಿಮೆ ಮಾಡಿ ಲಾಕ್ದೌನ್ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೆರವಾಗಿ ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಬಿಜೆಪಿ ಗೆ ಉಳಿಗಾಲ ಇಲ್ಲ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಸಿದ್ರಾಮ್ ಜಮಾದಾರ್, ಷಣ್ಮುಕ್ ನೆಲ್ಲಗಿ, ಮುನಿರಸಾಬ ಮಣಿಯಾರ್, ರಫೀಕ್ ಅಗಸಿಮನಿ, ಸೇರಿದಂತೆ ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರು ಇದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ