ಬೈಲಹೊಂಗಲ – ಈ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಬಡವರು, ಜನಸಾಮಾನ್ಯರು ನಿತ್ಯ ಬಳಸುವ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ( ಗ್ಯಾಸ್) ಹಾಗೂ ಇನ್ನುಳಿದ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿದೆ ಇದರಿಂದ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಕೇಂದ್ರ ಸರ್ಕಾರದ ಆಡಳಿತವನ್ನು ಗುರುತಿಸಿ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ವಿವೇಕಾನಂದ ಪೆಟ್ರೋಲ್ ಬಂಕಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.
ಜನಸಾಮಾನ್ಯರು ಪ್ರತಿನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ನುಡಿದು ಜನರ ಹೊರೆಯನ್ನು ಕಡಿಮೆ ಮಾಡದ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೀವನಕ್ಕೆ ಬರೆ ಎಳೆಯುತ್ತಿದೆ. ಇದರಿಂದ ಜನಸಾಮಾನ್ಯರು ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನುಡಿದರು.
ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಗೌಡ ಪಾಟೀಲ್ ಮಾತನಾಡಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರ ಬಂದಾಗಿನಿಂದ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಿರುವುದು ಖಂಡನೀಯ. ಕೇವಲ 37 ರೂಪಾಯಿಗೆ 1 ಲೀಟರ್ ಪೆಟ್ರೋಲ್ ಸಿಗಬೇಕಾಗಿತ್ತು ಈಗದು ಸೆಂಚುರಿ ಬಾರಿಸುತ್ತಿದೆ ಅದನ್ನು ದಿತೀಯ ಸೆಂಚುರಿಗೆ ತಲುಪಿಸುತ್ತಿರುವುದೆ ಮೋದಿಯ ಸರ್ಕಾರದ ಸಾಧನೆಯಾಗಿದೆ. ಈ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಮುಂಬರುವ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಾಟೀಲ್ ನುಡಿದರು.
ಈ ಸಂದರ್ಭದಲ್ಲಿ ಡಾ – ಮಹಾಂತೇಶ್ ಕಳ್ಳಿಬಡ್ಡಿ, ಹಸನ್ ಗರವನಕೊಳ್ಳ, ಶಿವಕುಮಾರ್ ಹಂಪಣ್ಣನವರ, ಮಡಿವಾಳಪ್ಪ ಅಕ್ಕಿಸಾಗರ, ವಿಷ್ಣು ಕಾಂಬ್ಳೆ, ಶ್ರೀಶೈಲ ಬೊಳನ್ನವರ, ಪ್ರಕಾಶ ನರಸನ್ನವರ, ಶಿವಾನಂದ ನರಸನ್ನವರ, ನಾಗರಾಜ ದಾನಪ್ಪ ನವರ, ವೀರಣ್ಣ ಅಂಬಡಗಟ್ಟಿ, ವಿನೋದ್ ಶೆಟ್ಟರ, ಪ್ರಜ್ವಲ್ ಬೆಳಗಾವಿ, ಇಮ್ರಾನ ಕಿತ್ತೂರ, ಬಸವರಾಜ ಕಿತ್ತೂರ, ನಿರ್ಗುಣ ರೇವಣ್ಣನವರ ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.