ಮೈಸೂರು – ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದ್ಯದಲ್ಲಿಯೇ ಪುನೀತ್ ರಾಜಕುಮಾರ್ ಅವರ ಸಂಸ್ಮರಣಾ ಕಾರ್ಯಕ್ರಮ ವೊಂದನ್ನು ಹಮ್ಮಿಕೊಳ್ಳಲು ರಾಜ್ಯಸರ್ಕಾರ ಆಯೋಜಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಜಿಲ್ಲೆಯ ಗಣ್ಯ ನಾಗರಿಕರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಾಹಿತಿ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಮಾತನಾಡಿ, ಪುನೀತ್ ರಾಜಕುಮಾರ್ ಅವರ ನಿಧನ ಕನ್ನಡ ಸಾಂಸ್ಕೃತಿಕ ,ಚಲನಚಿತ್ರ ಲೋಕಕ್ಕೆ ಅಪಾರ ನಷ್ಟವಾಗಿದೆ.
ಬಡವರಿಗೆ, ದೀನದುರ್ಬಲರಿಗೆ, ಅಶಕ್ತ ಮಹಿಳೆಯರಿಗೆ ಜೀವನವಿಡೀ ಸ್ಪಂದಿಸುವ ಮೂಲಕ ಪುನೀತ್ ಸೇವಾ ಕ್ಷೇತ್ರಕ್ಕೆ ಮೆರುಗು ತಂದುಕೊಟ್ಟಿದ್ದಾರೆ. ಆದ್ದರಿಂದ ಮೈಸೂರಿನಲ್ಲಿ ನಡೆಯುವ ಪುನೀತ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ನೇತ್ರದಾನ ಹಾಗೂ ರಕ್ತದಾನ ಕಾರ್ಯಕ್ರಮ ನಡೆಸುವ ಮೂಲಕ ಪುನೀತ್ ಅವರು ನಡೆಸಿದ ಸಮಾಜಸೇವಾ ಕಾರ್ಯಕ್ರಮಗಳನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಸಾಂಸ್ಕೃತಿಕ ನಗರಿ ಮೈಸೂರಿನ ಲ್ಲಿ ನಡೆಯುವ ಪುನೀತ್ ಸಂಸ್ಮರಣಾ ಕಾರ್ಯಕ್ರಮ ಇಡೀ ರಾಷ್ಟಕ್ಕೇ ಮಾದರಿಯಾಗಿರಬೇಕೆಂದವರು ನುಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ವೈ.ಡಿ ರಾಜಣ್ಣ ಅವರೂ ಸಹ ಭೇರ್ಯ ರಾಮಕುಮಾರ್ ಅವರ ಅಭಿಪ್ರಾಯವನ್ನು ಅನುಮೋದಿಸಿದರು.
ರಂಗಾಯಣದ ನಿವೃತ್ತ ನಿರ್ದೇಶಕರಾದ ಜನಾರ್ದನ ಅವರು ಮಾತನಾಡಿ, ಪುನೀತ್ ರಾಜಕುಮಾರ್ ಅವರ ನಾಡು-ನುಡಿ,ಸಮಾಜದ ಪ್ರಗತಿಗೆ ಸಲ್ಲಿಸಿರುವ ಸೇವೆಯ ಬಗ್ಗೆ ಕವನ,ಲೇಖನಗಳನ್ನು ಆಹ್ವಾನಿಸಿ ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಸಲಹೆ ನೀಡಿದರು.
ಪರಿಸರವಾದಿ ಶ್ರೀಮತಿ ಭಾನು ಮೋಹನ್ ಮಾತನಾಡಿ, ಮೈಸೂರು ನಗರದ ಹೊರವಲಯದಲ್ಲಿರುವ ಉದ್ಯಾನ ವನಗಳಿಗೆ ಪುನೀತ್ ಅವರ ಹೆಸರು ನಾಮಕರಣ ಮಾಡಿ,ಆ ಉದ್ಯಾನವನಗಳನ್ನು ಅಭಿವೃದ್ದಿ ಪಡಿಸಬೇಕೆಂದು ಸಲಹೆ ನೀಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಶೇಖರ್ ಸಭೆಯ ನೇತೃತ್ವ ವಹಿಸಿ,ಎಲ್ಲರ ಸಲಹೆಗಳನ್ನೂ ಆಲಿಸಿದರು.ಶಾಸಕರಾದ ನಾಗೇಂದ್ರ ಉಪಸ್ಥಿತರಿದ್ದರು.