ಬಾಗಲಕೋಟೆ : ಕನ್ನಡ ಭಾಷೆಗೆ ಸುದೀರ್ಘ ಇತಿಹಾಸ ಪರಂಪರೆ ಇದೆ. ಕದಂಬ ಚಾಲುಕ್ಯರಾದಿಯಾಗಿ ಅನೇಕ ಅರಸು ಮನೆತನಗಳ ಕಾಲಘಟ್ಟದಲ್ಲಿ ಶ್ರೀಮಂತಿಕೆಯ ಸಾಹಿತ್ಯ ರಚನೆಗೊಂಡು ನಾಡಿನ ಗತವೈಭವಕ್ಕೆ ಸಾಕ್ಷಿ ಎನಿಸಿದೆ ಎಂದು ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೇವೂರಿನ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಕನ್ನಡ ಸಂಘದ ಮುಖ್ಯಸ್ಥ ಡಾ.ಸಂಗಮೇಶ ಹಂಚಿನಾಳ ಹೇಳಿದರು.
ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ೭೦ ನೇ ಕನಾ೯ಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯೋತ್ಸವದ ಆಚರಣೆ ಮೂಲಕ ಭಾಷೆ ಸಂಸ್ಕೃತಿಗೆ ಗೌರವ ಸೂಚಿಸುವ ಕಾರ್ಯ ಎಲ್ಲರಿಂದಲೂ ನಡೆಯಬೇಕು. ಕನ್ನಡದ ಅಸ್ಮಿತೆಯ ಕುರಿತಾದ ಚಿಂತನೆಗಳು ನಾಡಿನ ಹಿರಿಮೆ ಹೆಚ್ಚಿಸಲು ನೆರವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೇರವೇರಿಸಲಾಯಿತು.
ಪ್ರಾಚಾರ್ಯ ಡಾ. ಜಗದೀಶ ಗು.ಭೈರಮಟ್ಟಿ,ವಿಶ್ರಾಂತ ಪ್ರಾಚಾರ್ಯ ಬಿ.ಬಿ. ಬೇವೂರ, ಹಿರಿಯ ಉಪನ್ಯಾಸಕರಾದ ಎಸ್.ಎಸ್ ಆದಾಪೂರ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಿ.ಎಸ್.ಗೌಡರ ಬೋಧಕೇತರ ಸಿಬ್ಬಂದಿಗಳಾದ ಆರ್.ಬಿ. ಕರಡಿಗುಡ್ಡ, ಶಿವು ಕಟಗಿ ಮುಂತಾದವರು ಭಾಗಿಯಾಗಿದ್ದರು. ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಂಡಿವಡ್ಡರ ಸಂಗಡಿಗರು ನಾಡಗೀತೆಯನ್ನು ಹಾಡಿದರು.
ಐ.ಕ್ಯೂ.ಎ.ಸಿ ಘಟಕದ ಮುಖ್ಯಸ್ಥ ಡಾ. ಎ.ಎಮ್. ಗೊರಚಿಕ್ಕನವರ ನಿರೂಪಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಮುಖ್ಯಸ್ಥ ಡಿ.ವಾಯ್. ಬುಡ್ಡಿಯವರ ವಂದಿಸಿದರು. ಕಾರ್ಯಕ್ರಮದ ನಂತರ ಕನ್ನಡ ವಿಷಯದ ಕುರಿತಾಗಿ ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

