ಮೂಡಲಗಿ – ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಯ ಆಶ್ರಯದಲ್ಲಿ ಮೇ ೩ ರಂದು ನಡೆಯಲಿರುವ ರಂಗೋಲಿ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡುವ ಕರಪತ್ರ( ಜಾಹೀರಾತು) ವನ್ನು ಶ್ರೀ ಶ್ರೀಧರ ಬೋಧ ಸ್ವಾಮಿಗಳು ಬಿಡುಗಡೆ ಮಾಡಿದರು.
ಶನಿವಾರದಂದು ಶ್ರೀ ಶಿವಬೋಧರಂಗ ಮಠದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಗಳು ಕರಪತ್ರ ಬಿಡುಗಡೆಗೊಳಿಸಿದರು.
ಮೂಡಲಗಿಯ ಶುಭೋದಯ ಸ್ವಾಭಿಮಾನ ಕನ್ನಡ ಸರಕ್ಷಣಾ ವೇದಿಕೆಯ ವತಿಯಿಂದ ಚುಕ್ಕೆ ರಂಗೋಲಿ ಹಾಗೂ ಚುಕ್ಕೆ ರಹಿತ ( ಫ್ರೀ ಹ್ಯಾಂಡ್ ) ರಂಗೋಲಿ ಸ್ಪರ್ಧೆಯನ್ನು ಮೇ ತಿಂಗಳ ೩ ನೇ ತಾರೀಖಿನಂದು ಬೆಳಿಗ್ಗೆ ೧೦.೩೦ ಕ್ಕೆ ಶ್ರೀ ಶಿವಬೋಧರಂಗ ಕೆಳಗಿನ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡೂ ವಿಭಾಗಗಳಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ತಲಾ ರೂ. ೨೫೦೦ ಇಡಲಾಗಿದೆ.
ಸ್ಪರ್ಧಾಳುಗಳು ಸ್ಪರ್ಧೆಗೆ ಬೇಕಾದ ಸಲಕರಣೆಗಳನ್ನು ತಾವೇ ತರಬೇಕು, ಚಿತ್ರ ನೋಡಿ ರಂಗೋಲಿ ಹಾಕಲು ಅವಕಾಶ ಇಲ್ಲ, ಕೊಟ್ಟಿರುವ ಅಳತೆಯಲ್ಲಿಯೇ ಚಿತ್ರ ಬಿಡಿಸಬೇಕು, ಅಪೂರ್ಣ ರಂಗೋಲಿಗೆ ಮಾನ್ಯತೆ ಇಲ್ಲ, ಪ್ರತಿಯೊಬ್ಬರಿಗೂ ರಂಗೋಲಿ ಪೂರ್ಣಗೊಳಿಸಲು ೨.೩೦ ತಾಸು ಅವಧಿ ನೀಡಲಾಗಿದೆ, ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು ಯಾವುದೇ ವಾದ ವಿವಾದಗಳಿಗೆ ಆಸ್ಪದವಿಲ್ಲ ಎಂಬುದಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಪರ್ಧಿಗಳಿಗೆ ಪ್ರವೇಶ ಫೀ ರೂ. ೫೦ ನಿಗದಿಪಡಿಸಲಾಗಿದ್ದು ಆಸಕ್ತರು ಚೆನ್ನಮ್ಮಾ ವೃತ್ತದಲ್ಲಿ ಇರುವ ಅಭಿಷೇಕ ಮೆಡಿಕಲ್ಸ ಹಾಗೂ ಭಾಜಿ ಮಾರ್ಕೆಟ್ ರಸ್ತೆಯಲ್ಲಿರುವ ಪೃಥ್ವಿ ಮೆಡಿಕಲ್ ಸ್ಟೋರ್ ನಲ್ಲಿ ಹೆಸರು ಬರೆಸಬಹುದಾಗಿದೆ.