Homeಸುದ್ದಿಗಳುಹೊಸಪುಸ್ತಕ ಓದು

ಹೊಸಪುಸ್ತಕ ಓದು

ದಣಿವರಿಯದ ಗುರುಗಳ ಅನುದಿನದ ಸ್ಮರಣೆ

  • ದಣಿವರಿಯದ ಗುರು : ಎಂ. ಎಂ. ಕಲಬುರ್ಗಿ ಅವರ ಜೀವನ ಮತ್ತು ಸಾಹಿತ್ಯ ಚಿಂತನೆಗಳು
  • ಲೇಖಕರು : ಡಾ. ಎಫ್.ಟಿ.ಹಳ್ಳಿಕೇರಿ
  • ಪ್ರಕಾಶಕರು : ಯಾಜಿ ಪ್ರಕಾಶನ, ಹಂಪಿ, ೨೦೨೩
  • (ಸಂಪರ್ಕವಾಣಿ : ೯೪೪೮೧೮೪೦೨೨)
[ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್, ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕರೂ, ಯೋಗ ಪರಿಣತರೂ ಆದ ಡಾ. ಎಫ್.ಟಿ. ಹಳ್ಳಿಕೇರಿ ಅವರು ನಮ್ಮ ದಿನಮಾನದ ಅಪರೂಪದ ವಿದ್ವಾಂಸರು. ೨೦೨೩ರಲ್ಲಿ ಅವರು ಪ್ರಕಟಿಸಿದ ೧. ದಣಿವರಿಯದ ಗುರು, ೨. ಕಂಠಪತ್ರ-೫, ಮತ್ತು ೩. ಹಸ್ತಪ್ರತಿ ವ್ಯಾಸಂಗ-೨೩ ಈ ಮೂರು ಮಹತ್ವದ ಕೃತಿಗಳನ್ನು ಪ್ರೀತಿ ವಿಶ್ವಾಸಪೂರ್ವಕ ನನಗೆ ಕಳಿಸಿಕೊಟ್ಟಿದ್ದಾರೆ.   ನನ್ನಂತಹ ಚಿಕ್ಕವನ ಮೇಲೆ ಅವರಿಗೆ ವಿಶೇಷವಾದ ಪ್ರೀತಿ. ನನ್ನ ಓದಿನ ಹಂಬಲಕ್ಕೆ ಬೆಂಬಲವಾಗಿ ಈ ಕೃತಿಗಳನ್ನು ಕಳಿಸಿಕೊಟ್ಟ ಅವರಿಗೆ ಕೃತಜ್ಞತಾಪೂರ್ವಕ ಶರಣುಗಳು.]

ಈ ಮೂರು ಕೃತಿಗಳಲ್ಲಿ ಮೊದಲಿಗೆ ಓದಲು ನಾನು ಕೈಗೆತ್ತಿಕೊಂಡ ಪುಸ್ತಕ ‘ದಣಿವರಿಯದ ಗುರು’. ಆಪ್ತವಾದ ಭಾಷೆಯಲ್ಲಿ ತಮ್ಮ ಗುರುವಿನ ಘನ ವ್ಯಕ್ತಿತ್ವವನ್ನು ಅತ್ಯಂತ ಸರಳ ಮತ್ತು ಸುಲಲಿತವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಓದಲು ಪ್ರಾರಂಭಿಸಿದೆ, ಇಡೀ ಪುಸ್ತಕವನ್ನು ಓದಿಯೇ ಮೇಲಕ್ಕೆದ್ದೆ. ಅಷ್ಟೊಂದು ಪರಮಾಪ್ತಭಾವದಲ್ಲಿ ಡಾ. ಹಳ್ಳಿಕೇರಿ ಅವರು ಗುರುಗಳ ಜೀವನವನ್ನು ನಮ್ಮೆದುರು ಕಟ್ಟಿಕೊಟ್ಟಿದ್ದಾರೆ. 

ಡಾ. ಎಂ. ಎಂ. ಕಲಬುರ್ಗಿ ಅವರು ಇದ್ದಾಗಲೇ ಅವರ ಜೀವನ ಸಾಧನೆ ಕುರಿತು ಬಹಳಷ್ಟು ಕೃತಿಗಳು ಪ್ರಕಟವಾಗಿದ್ದವು. ೨೦೧೫ರಲ್ಲಿ ಅವರ ಹತ್ಯೆಯ ನಂತರ ಪ್ರಕಟವಾದ ಅವರನ್ನು ಕುರಿತ ಕೃತಿಗಳ ಸಂಖ್ಯೆ ಬಹಳಷ್ಟು. ಡಾ. ಕಲಬುರ್ಗಿ ಅವರನ್ನು ಕುರಿತು ಪ್ರಕಟವಾದ ಕೃತಿಗಳನ್ನು ಕುರಿತೇ ಅಶೋಕ ನರೋಡೆ ಅವರು ಸಮೀಕ್ಷಾ ಕೃತಿಯೊಂದನ್ನು ಪ್ರಕಟಿಸಿದ್ದು ಗಮನಾರ್ಹ. ಈ ಕೃತಿಗಳ ಲೋಕಕ್ಕೆ ಹೊಸ ಸೇರ್ಪಡೆಯಾಗುತ್ತಿದೆ ಡಾ. ಎಫ್.ಟಿ.ಹಳ್ಳಿಕೇರಿ ಅವರ ‘ದಣಿವರಿಯದ ಗುರು’.

೧೯೮೭ರಲ್ಲಿ ಡಾ. ಹಳ್ಳಿಕೇರಿ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಎಂ. ಎಂ.ಕಲಬುರ್ಗಿ ಅವರ ಸಾನ್ನಿಧ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. ಡಾ. ಕಲಬುರ್ಗಿ, ಡಾ. ವೀರಣ್ಣ ರಾಜೂರ, ಡಾ. ಬಿ. ವಿ. ಶಿರೂರ ಅವರಂತಹ ಗುರುಗಳ ಗರಡಿಯಲ್ಲಿ ಅಧ್ಯಯನ ಮಾಡಿದ ಡಾ. ಹಳ್ಳಿಕೇರಿ ಅವರು ಆ ಗುರುಗಳ ಘನಪರಂಪರೆಯ ವಾರಸುದಾರಿಕೆಯನ್ನು ಅಕ್ಷರಶಃ ಮುಂದುವರಿಸಿದ ಏಕೈಕ ಪ್ರಾಧ್ಯಾಪಕರು. ಹಸ್ತಪ್ರತಿ ಶಾಸ್ತ್ರ  ಡಾ. ಕಲಬುರ್ಗಿ ಅವರ ಅತ್ಯಂತ ಪ್ರೀತಿಯ ವಿಷಯ. ಈ ವಿಷಯದ ಪ್ರಾಧ್ಯಾಪಕರಾಗುವ ಮೂಲಕ ಡಾ. ಕಲಬುರ್ಗಿ ಅವರ ಸಾಹಿತ್ಯ ಸಂಸ್ಕೃತಿಯ ನಿಜವಾದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ವಿಯಾದವರು ಡಾ. ಎಫ್.ಟಿ. ಹಳ್ಳಿಕೇರಿ ಅವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಭಾಗದಲ್ಲಿ ಕಳೆದ ೨೫ ವರ್ಷಗಳಿಂದ ಅವರು ಮಾಡಿದ ಸಾಧನೆ ಅನೂಹ್ಯವಾದುದು.

ಪ್ರಸ್ತುತ ಕೃತಿಯಲ್ಲಿ ಒಟ್ಟು ೧೪ ಪ್ರಬಂಧಗಳಿವೆ. ಡಾ.ಕಲಬುರ್ಗಿ ಅವರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ೧೯೯೮ರಲ್ಲಿ ಅವರ ಸಾಹಿತ್ಯದಲ್ಲಿ ಬರುವ ಅಪೂರ್ವ ಸೂಕ್ತಿಗಳನ್ನು ಸಂಗ್ರಹಿಸಿ ‘ಹಾದಿಯ ಹೆಜ್ಜೆಗಳು’ ಎಂಬ ಮಹತ್ವದ ಕೃತಿಯನ್ನು ಡಾ. ಹಳ್ಳಿಕೇರಿ ಅವರು ಪ್ರಕಟಿಸಿದ್ದರು. ೨೦೧೦ರಲ್ಲಿ ಡಾ.ಕಲಬುರ್ಗಿ ಅವರ ಕುರುಬ ಸಮಾಜ ಸಾಹಿತ್ಯ ಕುರಿತ ಲೇಖನಗಳ ಸಂಪಾದನೆಯ ‘ಹಾಲುಮತ ಅಧ್ಯಯನಗಳು’ ಎಂಬ ಕೃತಿಯನ್ನು ಮತ್ತು ೨೦೧೨ರಲ್ಲಿ ಡಾ. ಕಲಬುರ್ಗಿ ಅವರ ಮಾರ್ಗ ಸಂಪುಟಗಳನ್ನು ಅವಲೋಕಿಸಿ ‘ಮಹಾಮಾರ್ಗ ಮಹಾವಾಕ್ಯಗಳು’ ಎಂಬ ಕೃತಿಯನ್ನು ಪ್ರಕಟಿಸಿದ್ದರು. ಬಿ.ಎಲ್.ಡಿ.ಇ. ಸಂಸ್ಥೆಯವರು ೨೦೨೦ರಲ್ಲಿ ಪ್ರಕಟಿಸಿದ ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟದ ಯೋಜನೆಯಲ್ಲಿ  ೨೨ ಮತ್ತು ೨೩ ನೇ ಸಂಪುಟಗಳನ್ನು ಡಾ. ಎಫ್.ಟಿ. ಹಳ್ಳಿಕೇರಿ ಅವರು ಸಂಪಾದಿಸಿದ್ದಾರೆ.  ಅಲ್ಲದೆ ಡಾ. ಎಂ. ಎಂ. ಕಲಬುರ್ಗಿ ಅವರೊಂದಿಗೆ ಕೂಡಿ ‘ತಗರ ಪವಾಡ’ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ಹೀಗೆ ಡಾ. ಕಲಬುರ್ಗಿ ಅವರೊಂದಿಗೆ ಕಳೆದ ಮೂರು ದಶಕಗಳಿಂದ ತಮ್ಮ ಬಿಡುವಿಲ್ಲದ ನಂಟು ಕಾರಣವಾಗಿ ಇಲ್ಲಿಯ ಬಹುತೇಕ ಲೇಖನಗಳು ಮೂರು ದಶಕಗಳ ಅವರ ಒಡನಾಟದ ಅಮೂಲ್ಯ ವಿವರಗಳನ್ನು ನಮಗೆ ಒದಗಿಸುತ್ತವೆ.

‘ದಣಿವರಿಯದ ಗುರು-ಎಂ.ಎಂ.ಕಲಬುರ್ಗಿ’ ಈ ಕೃತಿಯ ಮೊದಲ ಲೇಖನ. ಅವರ ಹತ್ಯೆಯ ನಂತರ ಬರೆದ  ಮೊದಲ ಲೇಖನ. ಅವರೊಂದಿಗಿನ ತಮ್ಮ ಒಡನಾಟದ ಅಪೂರ್ವ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಲೇ, ಅವರು ದುರಂತಕ್ಕೆ ಬಲಿಯಾದ ಬಗ್ಗೆ ನೋವನ್ನು ವ್ಯಕ್ತಪಡಿಸುತ್ತಾರೆ.  ‘ನಾನು ಕುರುಬ ಸಮಾಜದವನಾಗಿದ್ದರೂ ನನಗೆ ಆ ಸಮಾಜದ ಸಾಹಿತ್ಯ ಸಂಸ್ಕೃತಿ ಚರಿತ್ರೆ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ.’ (ಪು. ೨೨) ಎಂದು ಹೇಳುತ್ತ, ಡಾ. ಕಲಬುರ್ಗಿ ಅವರ ಸಂಪರ್ಕ ಸಾನ್ನಿಧ್ಯ ಕಾರಣವಾಗಿ ಹಾಲುಮತ ಸಮಾಜ ಸಂಸ್ಕೃತಿಗಳ ಬಗ್ಗೆ ತಾವು ಮಾಡಿದ ಸಾಹಿತ್ಯ ಸಾಧನೆಯ ವಿವರಗಳನ್ನು ದಾಖಲಿಸುತ್ತಾರೆ. 

ಡಾ. ಕಲಬುರ್ಗಿ ಅವರು ಎಂದೂ ತಮ್ಮ ವಿದ್ಯಾರ್ಥಿಗಳ ಜಾತಿಯ ಹಿನ್ನೆಲೆಯನ್ನು ನೋಡಿದವರಲ್ಲ. ಬುದ್ಧಿವಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಮ್ಮ ಆಪ್ತವಲಯದ ತೆಕ್ಕೆಗೆ ತೆಗೆದುಕೊಂಡು ಅವರಿಂದ ಸಾಹಿತ್ಯ ಸಂಶೋಧನೆಯ ಕಾರ್ಯಗಳು ನಡೆಯುವಂತೆ ಪ್ರೋತ್ಸಾಹಿಸಿದವರು. ಈ ವಿಷಯ ಕುರಿತು ಡಾ. ಹಳ್ಳಿಕೇರಿ ಅವರು ಪ್ರಸ್ತಾಪಿಸುತ್ತ “ನಾನು ಹಾಲುಮತ ಸಮುದಾಯದಿಂದ ಬಂದವನು. ನಾನು ವಿದ್ಯಾಭ್ಯಾಸ ಮುಗಿಸಿಕೊಂಡು ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆಗೆ ಸೇರಿದ ಮೇಲೆಯೇ ನಾನು ಈ ಸಮುದಾಯದವನು ಎಂಬುದು ಗುರುಗಳಿಗೆ ಗೊತ್ತಾಯ್ತು. ಆಗ ಅವರು ಹೇಳಿದರು “ನೀನು ಈ ಸಮುದಾಯದವನು ಅಂತಾ ಮೊದಲೇ ಗೊತ್ತಾಗಿದ್ದರೆ ನಿನ್ನಿಂದ ಈ ಸಮುದಾಯದ ಸಾಹಿತ್ಯದ ಬಗ್ಗೆ ಅಧ್ಯಯನ-ಬರವಣಿಗೆ ಮಾಡಿಸಬಹುದಿತ್ತು” ಪು. (೧೧೦) ಎಂದು ಹೇಳಿರುವುದು ಡಾ. ಕಲಬುರ್ಗಿ ಅವರ ವಿದ್ಯಾರ್ಥಿಯ ಪ್ರತಿಭೆಯನ್ನು ಮಾತ್ರ ಪ್ರೀತಿಸುತ್ತಿದ್ದ ಘಟನೆಗೆ ಒಂದು ಉಜ್ವಲ ನಿದರ್ಶನವಾಗಿದೆ. ೨೦೧೫ರಲ್ಲಿ ಡಾ. ಹಳ್ಳಿಕೇರಿ ಅವರಿಗೆ ‘ರೇವಣಸಿದ್ಧರ’ ಕುರಿತು ಸಮಗ್ರ ಸಮೀಕ್ಷೆ ಮಾಡಲು ಸರಕಾರದಿಂದ ಒಂದು ಬೃಹತ್ ಯೋಜನೆ ಕೊಡಿಸಬೇಕೆಂದು ಡಾ.

ಕಲಬುರ್ಗಿ ಅವರು ಆಶಿಸಿದ್ದರು. ಈ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸುವಷ್ಟರಲ್ಲಿ ಡಾ. ಕಲಬುರ್ಗಿ ಅವರು ಹತ್ಯೆಯಾದುದು ನಿಜಕ್ಕೂ ಸಾಹಿತ್ಯ ಸಾಂಸ್ಕೃತಿಕ ಲೋಕಕ್ಕೊಂದು ದೊಡ್ಡ ಹಾನಿಯೆಂದೇ ಹೇಳಬೇಕು. ಸರಕಾರದ ಮೇಲೆ ಒತ್ತಡ ತಂದು, ಮಾಡಬೇಕಾದ ಯೋಜನೆಗಳಿಗೆ ಅನುದಾನವನ್ನು ತರುವಲ್ಲಿ ಡಾ. ಕಲಬುರ್ಗಿ ಅವರಿಗಿದ್ದಷ್ಟು ಛಾತಿ ಕನ್ನಡದಲ್ಲಿ ಮತ್ತೊಬ್ಬರಿಗಿರಲಿಲ್ಲ. ಈ ಸಂಗತಿಯನ್ನು ಲೇಖಕರು ಇಲ್ಲಿ ವಿಷಾದಭಾವದಿಂದಲೇ ಪ್ರಸ್ತಾಪಿಸಿದ್ದಾರೆ. 

    ಡಾ. ಕಲಬುರ್ಗಿ ಅವರು ಬರೆದಂತೆ ಬದುಕಿದವರು. ಒಳಗೊಂದು ಹೊರಗೊಂದು ಭಾವ ಅವರಲ್ಲಿ ಇರಲಿಲ್ಲ. ಅದರಲ್ಲೂ ಹಣಕಾಸಿನ ವಿಷಯದಲ್ಲಿ ಅವರು ತುಂಬ ಕಟ್ಟುನಿಟ್ಟು. ಹಣವನ್ನು ತೀರ್ಥದಂತೆ ಬಳಸಬೇಕೆಂದು ಅವರು ಬೇರೆಯವರಿಗೆ ಹೇಳುವದಷ್ಟೇ ಅಲ್ಲ, ಅದನ್ನು ಅಕ್ಷರಶಃ ತಮ್ಮ ಬದುಕಿನಲ್ಲಿಯೂ ಅನುಷ್ಠಾನಕ್ಕೆ ತಂದವರು. ಅಂತಹ ಕೆಲವು ಪ್ರಸಂಗಗಳನ್ನು ಡಾ. ಹಳ್ಳಿಕೇರಿ ಅವರು ಇಲ್ಲಿ ಪ್ರಸ್ತಾಪಿಸಿ ಗುರುಗಳು ಹಣಕಾಸಿನ ವಿಷಯದಲ್ಲಿ ಎಷ್ಟು ಪರಿಶುದ್ಧರಿದ್ದರೂ ಎಂಬುದಕ್ಕೆ ಅನನ್ಯವಾದ ನಿದರ್ಶನ ಒದಗಿಸಿದ್ದಾರೆ. ಅವರ ಮಗನ ಮದುವೆಗೆ ಒಂದು ಸಾವಿರ ರೂಪಾಯಿಗಳನ್ನು ಡಾ. ಹಳ್ಳಿಕೇರಿ ಅವರ ಕೈಯಲ್ಲಿ ಕೊಟ್ಟಿದ್ದರು. ಮದುವೆಯ ನಂತರ ಉಳಿದ ಹಣವನ್ನು ಡಾ. ಕಲಬುರ್ಗಿ ಅವರಿಗೆ ಮರಳಿ ಕೊಡಲು ಹೋದಾಗ, ಇವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡು ‘ಕೈಬಾಯಿ ಶುದ್ಧವಿದ್ದರೆ ಮನುಷ್ಯ ಎಲ್ಲಿದ್ದರೂ ಚೆನ್ನಾಗಿ ಬದುಕುತ್ತಾನೆ’ ಎಂದು ಹೇಳಿದ್ದು ಓದುಗರಲ್ಲಿ ಗುರು-ಶಿಷ್ಯರಿಬ್ಬರ ಶುದ್ಧ ಚಾರಿತ್ರ್ಯದ ಬಗ್ಗೆ ಅಭಿಮಾನ ಮೂಡುವಂತೆ ಮಾಡುತ್ತದೆ. 

    ‘ನುಡಿದಂತೆ ನಡೆದವರು’ ಎಂಬ ಲೇಖನದಲ್ಲಿ ಡಾ. ಕಲಬುರ್ಗಿ ಅವರು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಬಂದ ನಂತರ ಮಾಡಿದ ಸಾಧನೆಯ ಸಮಗ್ರ ವಿವರಗಳನ್ನು ದಾಖಲಿಸುತ್ತ, ೫೦೦ ಕೃತಿಗಳು ವಿಶ್ವವಿದ್ಯಾಲಯದಿಂದ ಪ್ರಕಟವಾದ ಸಂಗತಿಯನ್ನು ಇಲ್ಲಿ ದಾಖಲಿಸಿದ್ದಾರೆ. 

 ‘ಯುವ ಸಂಶೋಧಕರು ಮತ್ತು ಎಂ.ಎಂ.ಕಲಬುರ್ಗಿ’ ಎಂಬ ಲೇಖನ ವಿಚಾರ ಸಂಕಿರಣದಲ್ಲಿ ಮಂಡಿಸಿದ್ದು, ಹಿರಿಯ ವಿದ್ವಾಂಸರಿಂದ ಬೇಗ ಕೆಲಸಗಳು ಆಗದೇ ಇದ್ದಾಗ, ತಮ್ಮ ಸಾಮೀಪ್ಯಕ್ಕೆ ಬಂದ ಯುವ ಪ್ರತಿಭಾವಂತರಿಂದ ದೊಡ್ಡ ಯೋಜನೆಗಳನ್ನು ಹೇಗೆಲ್ಲ ಪೂರ್ಣಗೊಳಿಸಿದರು ಎಂಬ ಸಂಗತಿಯನ್ನು ಡಾ. ಹಳ್ಳಿಕೇರಿ ಅವರು ದಾಖಲೆಗಳ ಸಮೇತ ಸಾದರಪಡಿಸಿದ್ದಾರೆ. ಅವಕಾಶವಿದ್ದ ಸಂದರ್ಭಗಳಲ್ಲಿ ಯುವಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. (ನನಗೂ ಡಾ. ಕಲಬುರ್ಗಿ ಗುರುಗಳು ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ‘ಬಸವರಾಜ ಕಟ್ಟೀಮನಿ ಯುವಪುರಸ್ಕಾರ ನೀಡಿ ಗೌರವಿಸಿದ್ದ ಘಟನೆ ನೆನಪಿಗೆ ಬರುತ್ತದೆ.)

   ‘ಹಸ್ತಪ್ರತಿ ಶಾಸ್ತ್ರ ಮತ್ತು ಎಂ. ಎಂ. ಕಲಬುರ್ಗಿ’ ಮತ್ತು ‘ಗ್ರಂಥ ಸಂಪಾದನಶಾಸ್ತ್ರ ಮತ್ತು ಎಂ.ಎಂ.ಕಲಬುರ್ಗಿ’ ಎರಡೂ ಲೇಖನಗಳು ಡಾ. ಹಳ್ಳಿಕೇರಿ ಅವರ ವಿಸ್ತಾರವಾದ ಅಧ್ಯಯನಕ್ಕೆ ಸಾಕ್ಷಿಯಾಗಿವೆ. ಡಾ. ಕಲಬುರ್ಗಿ ಅವರ ಸಮಗ್ರ ಸಾಧನೆಯನ್ನು ಈ ಎರಡೂ ಲೇಖನಗಳಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ.

 ‘ಹಾಲುಮತ ಸಾಹಿತ್ಯ-ಸಮಾಜ-ಸಂಸ್ಕೃತಿ ಶೋಧಕ ಎಂ.ಎಂ.ಕಲಬುರ್ಗಿ’ ಲೇಖನ ಡಾ. ಕಲಬುರ್ಗಿ ಅವರ ಹಾಲುಮತ ಅಧ್ಯಯನಕ್ಕೆ ಸಂಬಂಧಪಟ್ಟ ಲೇಖನಗಳ ಸಂಪಾದನೆಯ ಕೃತಿಗೆ ಬರೆದ ಸುದೀರ್ಘವಾದ ಪ್ರಸ್ತಾವನೆ. ಡಾ. ಎಂ. ಎಂ. ಕಲಬುರ್ಗಿ ಅವರು ಆರು ಮಾರ್ಗ ಸಂಪುಟಗಳನ್ನು ಏಕಕಾಲಕ್ಕೆ ಪ್ರಕಟಿಸಿದರು. ೧೦೦ ಲೇಖನಗಳ ಬೃಹತ್ ಸಂಪುಟಗಳಲ್ಲಿ ಅಡಕವಾದ ವಿವಿಧ ವಿಷಯಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುವಂತಾದರೆ, ಡಾ. ಕಲಬುರ್ಗಿ ಅವರ ಸಂಶೋಧನೆಯ ವಿವಿಧ ಹೆಜ್ಜೆಗುರುತುಗಳನ್ನು ಸುಲಭವಾಗಿ ಗಮನಿಸಬಹುದು ಎಂಬ ಆಲೋಚನೆ ಈ ಸಂಪಾದನೆಗಳ ಹಿಂದಿತ್ತು. (೨೦೧೦ರಲ್ಲಿ ನಾನು ಮೊಟ್ಟ ಮೊದಲು ನನ್ನ ಬೆಳದಿಂಗಳು ಪ್ರಕಾಶನದಿಂದ ಡಾ. ಕಲಬುರ್ಗಿ ಅವರ ನಾಟಕ-ರಂಗಭೂಮಿ ಲೇಖನಗಳ ಸಂಕಲನ ‘ನಾಟಕದ ನೆಲೆಗಳು’ ಎಂಬ ಕೃತಿಯನ್ನು ಪ್ರಕಟ ಮಾಡಿದ್ದೆ. ತದನಂತರ ಇಂತಹ ಅನೇಕ ಕೃತಿಗಳನ್ನು ಮೈಸೂರಿನ ಸಂವಹನ ಪ್ರಕಾಶನದವರು ಮಾಡಿದರು)

 ‘ರೇವಣಸಿದ್ಧ : ಎಂ. ಎಂ. ಕಲಬುರ್ಗಿ ಅವರ ಶೋಧಗಳು’ ಇದು ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ. ರೇವಣಸಿದ್ಧ ಲಿಂಗಾಯತರಿಗೆ ಮಾತ್ರ ಗುರುವಲ್ಲ, ಕುರುಬ ಸಮಾಜಕ್ಕೂ ಗುರುವಾಗಿದ್ದಾನೆ ಎಂಬ ಶೋಧದ ಎಳೆಗಳನ್ನು ಡಾ. ಹಳ್ಳಿಕೇರಿ ಅವರು ಇಲ್ಲಿ ತೋರಿಸಿಕೊಟ್ಟಿದ್ದಾರೆ.

‘ಎಂ. ಎಂ. ಕಲಬುರ್ಗಿ ಅವರ ಬರಹಗಳ ಅವಲೋಕನ’, ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧವೇ ಆಗಿದೆ. ‘ಪಂಪ ಪ್ರಶಸ್ತಿ ಪುರಸ್ಕೃತ ಸಂಶೋಧಕ ಎಂ.ಎಂ.ಕಲಬುರ್ಗಿ’ ಲೇಖನ ಪರಿಚಯಾತ್ಮಕವಾಗಿದೆ.

‘ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿದ ಬಸವಣ್ಣನವರ ವಚನ ಸಂಪುಟ’ ಲೇಖನ ಗಮನಿಸುವಂತಹದು. ೧೯೯೪ರಲ್ಲಿ ಡಾ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಸಮಗ್ರ ವಚನ ಸಾಹಿತ್ಯ ಸಂಪುಟಗಳು ಪ್ರಕಟವಾದವು. ಅದರಲ್ಲಿ ಮೊದಲನೆಯ ‘ಬಸವಣ್ಣನವರ ವಚನ ಸಂಪುಟ’ವನ್ನು ಡಾ. ಕಲಬುರ್ಗಿ ಅವರೇ ಸಂಪಾದಿಸಿದ್ದರು. ಈ ಕೃತಿಯನ್ನು ಮೊಟ್ಟ ಮೊದಲು ಬಸವ ಪಥ ಪತ್ರಿಕೆಯಲ್ಲಿ ವಿಮರ್ಶೆ ಮಾಡಿದವರು ಡಾ. ಹಳ್ಳಿಕೇರಿ ಅವರು.  ಈ ಲೇಖನದಲ್ಲಿ ಈ ವಚನ ಸಂಪುಟದ ವಿಶೇಷತೆಗಳನ್ನು ತುಂಬ ಅರ್ಥಪೂರ್ಣವಾಗಿ ತಿಳಿಸಿದ್ದಾರೆ.

ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ-ಕಾವ್ಯ ಸಾಹಿತ್ಯ ಭಾಗ ೪ ಮತ್ತು ೫  ಈ ಎರಡು ಲೇಖನಗಳು ಬಿ.ಎಲ್.ಡಿ.ಇ. ಸಂಸ್ಥೆಯಿAದ ಪ್ರಕಟವಾದ ಡಾ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟ ೨೨-೨೩ ಸಂಪುಟಗಳಿಗೆ ಬರೆದ ವಿಸ್ತೃತವಾದ ಪ್ರಸ್ತಾವನೆಗಳಾಗಿವೆ. 

ನಾಡೋಜ ಎಂ. ಎಂ.ಕಲಬುರ್ಗಿ ನುಡಿನಮನ’ ಲೇಖನ. ಡಾ. ಕಲಬುರ್ಗಿ ಅವರ ಹತ್ಯೆಯ ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ‘ನುಡಿನಮನ’ ಕಾರ್ಯಕ್ರಮದಲ್ಲಿ ಮಾಡಿದ ಪ್ರಾಸ್ತಾವಿಕ ಭಾಷಣವಾಗಿದೆ. 

ಡಾ. ಹಳ್ಳಿಕೇರಿ ಅವರು ೧೯೯೪ರಲ್ಲಿ ಮೊದಲ ಬಾರಿಗೆ ಇತಿಹಾಸ ಅಕಾಡೆಮಿ ಸಮ್ಮೇಳನದಲ್ಲಿ ಭಾಷಣ ಮಾಡಲು ಅವಕಾಶ ಕಲ್ಪಿಸಿದ ಡಾ. ಕಲಬುರ್ಗಿ ಗುರುಗಳ ಔದಾರ್ಯವನ್ನು ಇಲ್ಲಿ ತುಂಬ ಭಾವನಾತ್ಮಕವಾಗಿ ನೆನಪಿಸಿಕೊಂಡಿದ್ದಾರೆ. ಡಾ. ಕಲಬುರ್ಗಿ ಅವರ ಬರವಣಿಗೆಯ ಶೈಲಿ ಡಾ. ಹಳ್ಳಿಕೇರಿ ಅವರ ಸಾಹಿತ್ಯದಲ್ಲಿಯೂ ಮುಂದುವರಿದಿದೆ ಎಂಬ ಭಾವ ಮೂಡುತ್ತದೆ.

ಗುರು-ಶಿಷ್ಯರಿಬ್ಬರು ಬಳಸುವ ಭಾಷೆ ತಾದಾತ್ಮ್ಯಭಾವವನ್ನು ಹೊಂದಿದ ಅನುಭವವಾಗುತ್ತದೆ. ಡಾ. ಕಲಬುರ್ಗಿ ಅವರು ‘ಮಾರ್ಗ’ ಹೆಸರಿನ ಸಂಶೋಧನ ಸಂಪ್ರಬಂಧಗಳನ್ನು ಪ್ರಕಟಿಸಿದರೆ, ಡಾ. ಹಳ್ಳಿಕೇರಿ ಅವರು ‘ಕಂಠಪತ್ರ’ ಹೆಸರಿನ ಐದು ಸಂಪುಟಗಳನ್ನು ಪ್ರಕಟಿಸಿದ್ದಾರೆ. ಹೀಗೆ ಡಾ. ಕಲಬುರ್ಗಿ ಅವರ ಸಾಹಿತ್ಯ ಸಂಶೋಧನ ಮಾರ್ಗದ ನಿಜವಾದ ವಾರಸುದಾರಿಕೆಯನ್ನು ಅತ್ಯಂತ ಯೋಜನಾಬದ್ಧವಾಗಿ ಮುಂದುವರಿಸುತ್ತಿರುವ ಡಾ. ಹಳ್ಳಿಕೇರಿ ಅವರು ನಮ್ಮ ನಡುವೆ ಇರುವ ಅಪರೂಪದ ವಿದ್ವಾಂಸರು.

 ಇಲ್ಲಿಯ ಎಲ್ಲ ಲೇಖನಗಳು ಕಾಲಾನುಕಾಲಕ್ಕೆ ಬರೆದವುಗಳು. ಹೀಗಾಗಿ ಅಲ್ಲಲ್ಲಿ ಪುನರಾವರ್ತನೆಯಾಗಿರುವುದು ಸಹಜವಾದರೂ ಓದಿನ ರುಚಿಗೆ ಯಾವುದೇ ಭಂಗಬರುವುದಿಲ್ಲ.

ಯದ್ಯದಾಚರತಿ ಶ್ರೇಷ್ಠ ಸ್ತದ್ಯದೇವೇತರೋ ಜನಾಃ||

ಸಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೆ||

ಸಮಾಜದ ಗುರುವೆನಿಸಿದ ಶ್ರೇಷ್ಠನು ತನ್ನ ನಿತ್ಯ ನಡೆ-ನುಡಿಯ ಮೂಲಕ ಹೇಗೆ ಆಚರಿಸುತ್ತಾನೆಯೋ ಲೋಕದ ಜನರು ಅಂದರೆ ಸಮಾಜವು ಅವನ ನಡೆ ನುಡಿಯನ್ನೇ ಪ್ರಮಾಣವನ್ನಾಗಿ ತಿಳಿದು ಅದೇ ಪ್ರಕಾರ ನಡೆಯುತ್ತದೆ ಎಂಬ ಗೀತೋಕ್ತಿಯಂತೆ, ಡಾ. ಹಳ್ಳಿಕೇರಿ ಅವರು ತಮ್ಮ ಗುರುಗಳಾದ ಡಾ. ಕಲಬುರ್ಗಿ ಅವರ ನಡೆ-ನುಡಿಗಳನ್ನೇ ಮುಂದುವರಿಸಿ, ಅವರ ಘನವ್ಯಕ್ತಿತ್ವಕ್ಕೆ ಶಿಷ್ಯನ ನಿಜವಾದ ಗೌರವವನ್ನು ತಂದುಕೊಟ್ಟಿದ್ದಾರೆ.

ಇಂತಹ ಒಂದು ಅಪರೂಪದ ಕೃತಿಯನ್ನು ಸಾರಸ್ವತಲೋಕಕ್ಕೆ ಕೊಟ್ಟ ಡಾ. ಎಫ್.ಟಿ.ಹಳ್ಳಿಕೇರಿ ಅವರಿಗೆ ವಂದನೆ-ಅಭಿನಂದನೆಗಳು.


 ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

RELATED ARTICLES

Most Popular

close
error: Content is protected !!
Join WhatsApp Group