ಮೂಡಲಗಿ: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಪ್ರಸಕ್ತ ಸಾಲಿನ ಬೆಳಗಾವಿ ಜಿಲ್ಲೆಯ 399 ಫಲಾನುಭವಿಗಳಿಗೆ 7.98 ಕೋಟಿ ಮೊತ್ತದ ವಿಮೆಯನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಡಾ. ಭಾಗವತ್ ಕರಾಡ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರಾಜ್ಯಸಭೆಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಒಂದು ವರ್ಷದ ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದ್ದು ಇದನ್ನು ವರ್ಷದಿಂದ ವರ್ಷಕ್ಕೆ ನವೀಕರಿಸಬಹುದು ಮತ್ತು ಈ ಯೋಜನೆಯು 18 ರಿಂದ 70 ವರ್ಷ ವಯಸ್ಸಿನವರಿಗೆ ಎಲ್ಲ ಬ್ಯಾಂಕುಗಳು, ಪೋಸ್ಟ್ ಆಫೀಸ್ ಖಾತೆದಾರರಿಗೆ ಅವರ ಒಪ್ಪಿಗೆಯ ಮೇರೆಗೆ ಲಭ್ಯವಿದೆ ಎಂದರು.
ಈ ಯೋಜನೆಯು ಆಕಸ್ಮಿಕ ಮರಣ ಅಥವಾ ಸಂಪೂರ್ಣ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ರೂ. 2ಲಕ್ಷ ಕವರೇಜ್ ನೀಡುತ್ತದೆ ಮತ್ತು ಅಪಘಾತದಿಂದ ಭಾಗಶಃ ಶಾಶ್ವತ ಅಂಗವೈಕಲ್ಯಕ್ಕೆ ರೂ.1 ಲಕ್ಷ ಪ್ರತಿ ಚಂದಾದಾರರಿಗೆ ವಾರ್ಷಿಕ ಪ್ರೀಮಿಯಂನಲ್ಲಿ ರೂ. 20 ಅಪಘಾತದಿಂದ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಬಹುದು ಎಂದರು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ರಾಜ್ಯದ 4596 ಫಲಾನುಭವಿಗಳಿಗೆ 91.92 ಕೋಟಿ ರೂ. ವಿಮಾ ಮೊತ್ತ ಬಿಡುಗಡೆಯಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಎಂದು ಸಂಸದ ಈರಣ್ಣ ಕಡಾಡಿ ಮಾಹಿತಿ ಹಂಚಿಕೊಂಡರು.