ಸಿಂದಗಿ: ಸರಕಾರದ ಮಾರ್ಗಸೂಚಿ ಹಾಗೂ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ರಾಷ್ಟ್ರೀಯ ಹಬ್ಬವನ್ನು ಅರ್ಥಪೂರ್ಣ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಧ್ವಜ ಸಂಹಿತೆ ಕಟ್ಟುನಿಟ್ಟಿನಲ್ಲಿ ನಡೆಯಬೇಕು. ದ್ವಜಾರೋಹಣ ಹಾಗೂ ಅವರೋಹಣ ಮಾಡುವಲ್ಲಿ ತಪ್ಪಿದಲ್ಲಿ ರಾಜ್ಯ ಧ್ವಜ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ ಈ ವಿಷಯದಲ್ಲಿ ರಾಜಿ ಇಲ್ಲ ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ ಎಚ್ಚರಿಕೆ ನೀಡಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಧ್ವಜ ಕಟ್ಟುವ ಸಲುವಾಗಿ ಪ್ರಮಾದಗಳು ಆಗದಂತೆ ಅನುಭವಿಗಳಿಂದ ತರಬೇತಿ ನೀಡುತ್ತಿದ್ದು ಅನುಭವ ಪಡೆದುಕೊಳ್ಳಿ ಅಲ್ಲದೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ. ಅಂಬೇಡ್ಕರ ಭಾವಚಿತ್ರ ಇಡಬೇಕು ಮತ್ತು ಎಲ್ಲಾ ಇಲಾಖೆಗಳಲ್ಲಿ ಬೆಳಿಗ್ಗೆ 7.30 ಗಂಟೆಗೆ ದ್ವಜಾರೋಹಣ ಮಾಡಿ 8 ಗಂಟೆಗೆ ತಹಶೀಲ್ದಾರ ಕಛೇರಿಯ ಅವರಣದಲ್ಲಿ ನಡೆಯುವ ಧ್ವಜಾರೋಹಣ ಮುಗಿಸಿ ಅಲ್ಲಿಂದ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಭಾತ ಫೇರಿ ಮೂಲಕ 9 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ದ್ವಜಾರೋಹಣದಲ್ಲಿ ಪಾಲ್ಗೊಳ್ಳುವುದು. ನಂತರ ವಾಕ್ಸಿನ್ ನೀಡುವಲ್ಲಿ ಇಡೀ ರಾಜ್ಯಕ್ಕೆ 2ನೇ ಸ್ಥಾನದಲ್ಲಿರುವ ಕಾರಣ ಕೊವಿಡ್ 3 ನೇ ಅಲೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖಾ ಸಿಬ್ಬಂದಿಗಳಿಗೆ ಸನ್ಮಾನಿಸಲಾಗುವುದು. ಅಲ್ಲದೆ ಪೊಲೀಸ ಇಲಾಖೆ, ಗೃಹ ರಕ್ಷಕದಳ, ಅಗ್ನಿಶಾಮಕ ದಳ, ಅಬಕಾರಿ ಇಲಾಖೆ ಸಿಬ್ಬಂದಿಗಳು ಪಥಸಂಚಲನ ನಡೆಸಿ ಧ್ವಜ ವಂದನೆ ಸಲ್ಲಿಸುವರು. ಶಾಸಕ ರಮೇಶ ಭೂಸನೂರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಂಎಲ್ಸಿ ಅರುಣ ಶಹಾಪುರ, ಲಿಂಬೆ ಅಭಿವೃದ್ಧಿ ಮಂಡಳೀ ಅಧ್ಯಕ್ಷ ಅಶೋಕ ಅಲ್ಲಾಪುರ, ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರು, ಎಪಿಎಂಸಿ ಅಧ್ಯಕ್ಷ-ಉಪಾದ್ಯಕ್ಷರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಟ್ಟಣದ ಅಂಗಡಿಗಳಲ್ಲಿ ಪ್ಲಾಸ್ಟಿಕ ಧ್ವಜ ಮಾರಾಟವನ್ನು ನಿಯಂತ್ರಿಸಬೇಕಲ್ಲದೆ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಕ್ರಮ ವಹಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಪತ್ರಕರ್ತ ಪಂಡಿತ ಯಂಪೂರೆ ಮಾತನಾಡಿ, ಸಭೆಯಲ್ಲಿ ಚರ್ಚಿಸಿದ ಎಲ್ಲ ವಿಷಯಗಳನ್ನು ಚಾಚು ತಪ್ಪದೇ ಪಾಲಿಸಿದರೆ ಯಾವುದೇ ಪ್ರಮಾದ ಸೃಷ್ಟಿಸಲಾರದು ಕಾರಣ ಗಣರಾಜ್ಯೋತ್ಸವವನ್ನು ಹಬ್ಬವಾಗಿ ಆಚರಿಸಲು ಎಲ್ಲರು ಕೈಗೂಡಿಸಿ ಕಾರ್ಯನಿರ್ವಹಿಸಿ ಎಂದರು.
ಈ ಸಂದರ್ಭದಲ್ಲಿ ಸಿಪಿಐ ರವಿ ಹುಕ್ಕುಂದ, ತಾಪಂ ಇಓ ಕೆ.ಹೊಂಗಯ್ಯ, ಬಿಇಓ ಎಸ್.ಎಚ್. ಹರನಾಳ, ಕೃಷಿ ಇಲಾಖೆಯ ಎಚ್.ವೈ.ಸಿಂಗೆಗೋಳ, ಲೋಕೋಪಯೋಗಿ ಎಇಇ ತಾರಾನಾಥ ರಾಠೋಡ, ಕ್ರೀಡಾಧಿಕಾರಿ ಶಿವಕುಮಾರ ಕಲ್ಲೂರ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್. ಭೂಸಗೊಂಡ, ಅಬಕಾರಿ ಇಲಾಖೆಯ ಆರತಿ ಖೈನೂರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಶಿಕ್ಷಕ ಸಿದ್ದಲಿಂಗ ಚೌಧರಿ ಸ್ವಾಗತಿಸಿ ಕಳೆದ ವರ್ಷದ ವರದಿಯನ್ನು ಸಭೆಗೆ ವಿವರಿಸಿದರು. ಕೊನೆಯಲ್ಲಿ ವಂದಿಸಿದರು.