ಮೂಡಲಗಿ: ತಾಲೂಕಿನ ಅವರಾದಿ ಗ್ರಾಮ ಪಂಚಾಯತ ವ್ಯಾಪ್ತಿಯ ವೆಂಕಟಾಪೂರ ಗ್ರಾಮಕ್ಕೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಮೂಡಲಗಿ ತಾಲೂಕಾ ಪಂಚಾಯತ ಅಧಿಕಾರಿಗಳಿಗೆ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.
ವೆಂಕಟ್ಯಾಪೂರ ಗ್ರಾಮದ ರೈತರಿಗೆ ಸರಕಾರದಿಂದ ದೊರೆಯುವ ಕೃಷಿ ಹೊಂಡ, ಶೌಚಾಲಯ, ಇಂಗು ಗುಂಡಿ, ಎರೆಹುಳ ತೊಟ್ಟಿ, ದನಗಳ ಶೆಡ್ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಅವರಾದಿ ಗ್ರಾ.ಪಂ ದಿಂದ ನೀಡಿಲ್ಲ, ಅವರಾದಿ ಗ್ರಾ.ಪಂ ಪಿಡಿಓ ಅವರು ಕೆಲವು ಎಜೆಂಟರ ಜೊತೆ ಸೇರಿ ವೆಂಕಟ್ಯಾಪೂರ ಗ್ರಾಮದ ರೈತರ ಹೆಸರಿನಲ್ಲಿ ಅವರಿಗೆ ಗೊತ್ತಾಗದ ಹಾಗೆ ಅವರ ಸಹಿ ಇಲ್ಲದಿದ್ದರೂ ಅವರ ಹೆಸರಿನಲ್ಲಿ ಸರಕಾರದಿಂದ ಬರುವ ಸೌಕರ್ಯಗಳನ್ನು ಮಂಜೂರ ಮಾಡಿ ಸರ್ಕಾರಕ್ಕೂ ಮತ್ತು ರೈತರಿಗೂ ಮೋಸ ಮಾಡಿ ಹಣವನ್ನು ಲಪಟಾಯಿಸುತ್ತಾರೆ. ತಾಲೂಕಾ ಮತ್ತು ಜಿಲ್ಲಾ ಅಧಿಕಾರಿಗಳು ವೆಂಕಟ್ಯಾಪೂರ ರೈತರಿಗೆ ಆದಂತಹ ಅನ್ಯಾಯವನ್ನು ಹೆಚ್ಚಿನ ರೀತಿಯಲ್ಲಿ ತನಿಖೆ ಮಾಡಿ ವೆಂಕಟ್ಯಾಪೂರ ಗ್ರಾಮಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ನ್ಯಾಯವನ್ನು ಕೊಡಿಸಬೇಕು, ಅನ್ಯಾಯದಲ್ಲಿ ಭಾಗಿಯಾದವರನ್ನು ಯಾರೇ ಆಗಿರಲಿ ಎಷ್ಟೇ ಪ್ರಭಾವಿಯಾಗಲಿ ಅವರಿಗೆ ಶಿಕ್ಷೆ ಕೊಡಿಸ ಬೇಕು ಇಲ್ಲದಿದರೆ ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ ಮುಂದೆ ಹೋರಾಟವನ್ನು ರೈತರು ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಸೇರಿ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜನಪರ ವೇದಿಕೆಯ ತಾಲೂಕಾ ಅಧ್ಯಕ್ಷ ಲಕ್ಷ್ಮಣ ಮೆಳ್ಳಿಗೇರಿ, ಕಾಳಪ್ಪ ಬಡಿಗೇರ, ತಿಮ್ಮಣ್ಣ ಕೋಳಿಗುಡ್ಡ, ಸುನೀಲ ಗಸ್ತಿ, ಶಬ್ಬೀರ ಪೈಲ್ವಾನ, ನಿಂಗಪ್ಪ ಉದ್ದಗೋಳ, ರವೀಂದ್ರ ಕೊರವಿ, ಭೀಮನಗೌಡ ಪಾಟೀಲ, ರಾಮಚಂದ್ರ ಮಳವಾಡ, ಮಲ್ಲಪ್ಪ ಜಂಕಟ್ಟಿಹಾಳ, ಹರೀಶ ದಾಸನವರ, ಶಿವಪ್ಪ ಹೊಸಮನಿ ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಇದ್ದರು.