ಸುರಿಯುತ್ತಿದ್ದ ಮಳೆಯಲ್ಲಿಯೇ ರಕ್ಷಣಾ ಕಾರ್ಯಾಚರಣೆ
ಬೀದರ – ಬಕ್ರೀದ್ ಹಬ್ಬದಲ್ಲಿ ಕಡಿಯಲು ತಂದಿದ್ದ 16 ಗೋವುಗಳನ್ನು ಬೀದರ್ ಟೌನ್ ಪೋಲಿಸ್ ಮತ್ತು ಪಶುಸಂಗೋಪನೆ ಇಲಾಖೆ ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಪಶುಗಳನ್ನು ಕಸಾಯಿ ಖಾನೆಗೆ ಸಾಗಿಸಲು ತಯಾರಿ ನಡೆಸಿದ್ದ ಖದೀಮರಿಗೆ ಕೋಳ ತೊಡಸಿದ ಬೀದರ್ ಪೊಲೀಸರು ಎಡೆಬಿಡದೆ ಬೀಳುತ್ತಿದ್ದ ಮಳೆ ಮಧ್ಯದಲ್ಲಿಯೇ ಗೊ ರಕ್ಷಣೆ ಮಾಡಿದರಲ್ಲದೆ ರಕ್ಷಣೆ ಸಂದರ್ಭದಲ್ಲಿ ಒಂದು ಗೋವಿನ ಕಾಲು ಮುರಿದಿದ್ದು ಮಳೆಯಲ್ಲಿಯೇ ಪಶು ವೈದ್ಯರು ಚಿಕಿತ್ಸೆ ನೀಡಿದರು.
ರಕ್ಷಣೆ ಮಾಡಲ್ಪಟ್ಡ ಗೋವುಗಳನ್ನು ಶ್ರೀ ವೈಷ್ಣೋದೇವಿ ಕಲ್ಚರ್ ಮತ್ತು ಚಾರಿಟಬಲ್ ಟ್ರಸ್ಟ್ ನ ಜ್ಞಾನ ಶಿವಯೋಗಾಶ್ರಮದಲ್ಲಿ ಸಂರಕ್ಷಣೆ ಮಾಡಲಾಗಿದೆ.
ಡಾ.ಶ್ರೀ ರಾಜಶೇಖರ ಶಿವಾಚಾರ್ಯರ ಶ್ಲಾಘನೆ:
ನಗರದ ಕಸಾಯಿಖಾನೆಗೆ ರವಾನಿಸಲು ತಂದಿದ್ದ ಅಪರೂಪದ ತಳಿಯಿಂದ ಕೂಡಿದbಗೋವುಗಳನ್ನು ಸಂರಕ್ಷಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಬೀದರಿನ ಜ್ಞಾನ ಶಿವಯೋಗಾಶ್ರಮ ಅಧಿಪತಿಗಳಾದ ಡಾ. ಶ್ರೀ ರಾಜೇಶೇಖರ ಶಿವಾಚಾರ್ಯರು ಬೆಳಮಖೇಡ ಅವರು ಬಣ್ಣಿಸಿದರು.
ನಗರದ ಚೌಬಾರ ಪರಿಸರದಲ್ಲಿ ಕಡಿಯಲು ತಂದಿದ್ದ 16 ಗೋವುಗಳನ್ನು ಚೌಬಾರ ಪೊಲೀಸ್ ಠಾಣೆಯ ಸಿ.ಪಿ.ಐ. ಪಾಲಾಕ್ಷ ಹಿರೇಮಠ ಹಾಗೂ ಪಿ.ಎಸ್.ಐ. ಪ್ರಭಾಕರ ಪಾಟೀಲ್ ನೇತೃತ್ವದಲ್ಲಿ ಮತ್ತು ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಕಳ್ಳರಿಂದ ಬಚ್ಚಿಟ್ಟಿದ್ದ ಗೋವುಗಳನ್ನು ಸುರಕ್ಷಿತವಾಗಿ ಬಿಡಿಸಿಕೊಂಡಿರುವುದು ಹೆಮ್ಮೆಪಡುವ ಸಂಗತಿಯಾಗಿದೆ.
ಅಧಿಕಾರಿಗಳಿಂದ ಸಂರಕ್ಷಿತ 16 ಗೋವುಗಳನ್ನು ಮಧ್ಯರಾತ್ರಿಯಲ್ಲಿಯೇ ನೌಬಾದ ಹತ್ತಿರದ ಭಾಲ್ಕಿ ರಸ್ತೆಯಲ್ಲಿರುವ ಜ್ಞಾನ ಶಿವಯೋಗಾಶ್ರಮದಲ್ಲಿ ಶ್ರೀ ವೈಷ್ಣದೇವಿ ಕಲ್ಬರಲ್ ಮತ್ತು ಚಾರಿಟೇಬಲ್ ಟ್ರಸ್ಟ್ನಿಂದ ಸಂಚಾಲಿತ ಶ್ರೀ ಮಾತೇಶ್ವರಿ ಗೋಶಾಲೆಯಲ್ಲಿ ಸಂರಕ್ಷಣೆಗಾಗಿ ಗೋವುಗಳನ್ನು ತಂದು ಬಿಟ್ಟಿರುವರು.
ಎಡಬಿಡದೇ ಸುರಿಯುತ್ತಿರುವ ಮಳೆ-ಕೆಸರನ್ನು ಲೆಕ್ಕಿಸದೇ ತುಂಬಿ ತಂದಿದ್ದ ಲಾರಿಗಳಿಂದ ಎರಡೂ ಇಲಾಖೆಯ ಅಧಿಕಾರಿಗಳು ಆ ಎಲ್ಲ ಗೋವುಗಳನ್ನು ಕೆಳಗಿಳಿಸಿದರು. ಲಾರಿಯಿಂದ ಇಳಿಸುವಾಗ ಒಂದು ಗೋವಿನ ಮುಂಭಾಗದ ಬಲಗಾಲು ಬಾಗಿಲಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಅದು ಮುರಿದು ಹೋಯಿತು.
ಅಂತಹ ಮಳೆಯಲ್ಲಿಯೇ ಅದಕ್ಕೆ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿದರು. ಯಶಸ್ವಿ ಶಸ್ತ್ರ ಚಿಕಿತ್ಸೆ ರಾತ್ರಿ ಕಾಲು ಮುರಿದುಕೊಂಡಿದ್ದ ಆ ಗೋವಿಗೆ ಜಿಲ್ಲಾ ಪಶು ವೈದ್ಯಕೀಯ ಆಸ್ಪತ್ರೆಯಿಂದ ತಜ್ಞ ಅನುಭವಿ ವೈದ್ಯರಾದ ಡಾ. ನೀಲಕಂಠ ಚನ್ನಶೆಟ್ಟಿ ನೇತೃತ್ವದಲ್ಲಿ ತುಂಬ ಶ್ರಮ ಮತ್ತು ಕಾಳಜಿ ವಹಿಸಿ ಆ ಗೋವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ವೈದ್ಯರ ಕಾಳಜಿ ಮೆಚ್ಚುವಂತದ್ದು ಎಂದು ಅವರು ಹೇಳಿದ್ದಾರೆ.
ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹ ಜನ ಮೆಚ್ಚುವಂತಹ ರೀತಿಯಲ್ಲಿ ಗೋವುಗಳನ್ನು ನೋಡಿಕೊಂಡರು. ಶ್ರೀ ವೈಷ್ಣದೇವಿ ಕಲ್ಬರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಂಗಮೇಶ ಬಿರಾದಾರ ಅವರ ಫಲಾಪೇಕ್ಷೆ ಇಲ್ಲದ ಗೋಸೇವೆ ಅಪೂರ್ವವಾದದ್ದು ಎಂದರು.
ಈ ಸಂದರ್ಭದಲ್ಲಿ ಸಿಪಿಐ ಪಾಲಾಕ್ಷ ಹಿರೇಮಠ, ಪಿ.ಎಸ್.ಐ. ಪ್ರಭಾಕರ ಪಾಟೀಲ್, ಪಶುವೈದ್ಯರಾದ ಡಾ. ಸಂಗಮೇಶ ಹುಮನಾಬಾದ, ಡಾ. ನೀಲಕಂಠ ಚನ್ನಶೆಟ್ಟಿ, ಆರಕ್ಷಕ ಬಂಧುಗಳಾದ ವಿಜಯಕುಮಾರ ಭೋಸೆ, ರಾಜಕುಮಾರ ದಾನಾ, ಐವನ್, ಪಾಂಡುರಂಗ ಪಾಂಚಾಳ ಪರಿಚಾರಕ ತೇಜರಾವ ಮತ್ತಿತರರು ಉಪಸ್ಥಿತರಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ