ಬೀದರ – ಅನ್ಯ ಇಲಾಖೆಗೆ ನಿಯೋಜನೆಗೊಂಡ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಜುಲೈ 31ರ ಒಳಗೆ ವಾಪಸ್ ಪಡೆಯಲು ನಿರ್ಧರಿಸಲಾಗಿದ್ದು ಇನ್ನು ಮುಂದೆ ಪಶುಸಂಗೋಪನೆಯಿಂದ ಸಿಬ್ಬಂದಿಗಳನ್ನು ಅನ್ಯ ಇಲಾಖೆಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರ, ಪಶುಪಾಲಕರ ಅಭಿವೃದ್ಧಿಗಾಗಿ ಇಲಾಖೆಯಿಂದ ಪ್ರಾಣಿ ಕಲ್ಯಾಣ ಮಂಡಳಿ, ಪಶುಸಂಜೀವಿನಿ, ಗೋಹತ್ಯೆ ನಿಷೇಧ, ಜಿಲ್ಲೆಗೊಂದು ಗೋಶಾಲೆ ಹಾಗೂ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಪ್ರಾಣಿ ಕಲ್ಯಾಣ ಸಹಾಯವಾಣಿಯಂತಹ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಬೇರೆ ಕಡೆ ನಿಯೋಜನೆಯ ಮೇಲೆ ಹೋಗಿರುವುದರಿಂದ ಸಿಬ್ಬಂದಿ ಕೊರತೆಯುಂಟಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬರುತ್ತಿರುವ ರೈತರ ಕರೆಗಳನ್ನು ನಿರ್ವಹಿಸುವುದು ಸವಾಲಾಗಿದೆ. ಅಲ್ಲದೆ, ಲಸಿಕಾ ಕ್ರಾರ್ಯಕ್ರಮಗಳ ಪ್ರಗತಿ ಸಹ ಇದರಿಂದ ಕುಠಿತವಾಗುವ ಸಾದ್ಯತೆ ಇದೆ. ಆದ್ದರಿಂದ ಅನ್ಯ ಕರ್ತವ್ಯದ ಮೇಲೆ ತೆರಳಿದ ಎಲ್ಲ ಸಿಬ್ಬಂದಿಯನ್ನು ಇದೇ ತಿಂಗಳ ಕೊನೆಯಲ್ಲಿ ಇಲಾಖೆಗೆ ಹಿಂತಿರುಗಲು ಆದೇಶಿಸಲಾಗಿದೆ.
ಅಲ್ಲದೇ ಪ್ರತಿ ಬಾರಿ ಅಧಿವೇಶನದಲ್ಲಿ ಪ್ರತಿಪಕ್ಷಗಳಿಂದ ಹಾಗೂ ಆಡಳಿತ ಪಕ್ಷದ ಸದಸ್ಯರಿಂದ ಪಶುವೈದ್ಯರ ಕೊರತೆ ಕುರಿತು ಚರ್ಚೆ ನಡೆಯುತ್ತಲೇ ಇದೆ. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಸಹ ಪತ್ರದ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಅರಣ್ಯ ಇಲಾಖೆ, ಪಶುವೈದ್ಯಕೀಯ ಮಹಾವಿದ್ಯಾಲಯಗಳು, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಪಶುಪಾಲನಾ ಅಧೀನದಲ್ಲಿ ನ ನಿಗಮ/ಮಂಡಳಿಗಳಲ್ಲಿ ಗುರುತುಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುಪಾಲನಾ ಇಲಾಖೆಯ ವಿವಿಧ ವೃಂದದ ಪಶುವೈದ್ಯಾಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಎಲ್ಲರ ಸೇವೆಯನ್ನು ಹಿಂಪಡೆಯಲಾಗುತ್ತಿದೆ.
ಶಾಸಕರಲ್ಲಿ ಮನವಿ
ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಯಾವುದೇ ಕಾರಣಕ್ಕೂ ಇಲಾಖೆಯಿಂದ ಅನ್ಯ ಕರ್ತವ್ಯದ ಮೇಲೆ ನಿಯೋಜನೆ ಮೇಲೆ ಸಿಬ್ಬಂದಿ ನೀಡಲು ಮನವಿ ಸಲ್ಲಿಸಬಾರದು ಎಂದು ಎಲ್ಲ ಶಾಸಕರು/ವಿಧಾನ ಪರಿಷತ್ ಸದಸ್ಯರಿಗೆ ಪತ್ರದ ಮೂಲಕ ತಿಳಿಸಲಾಗಿದೆ. ರೈತರು, ಪಶುಪಾಲಕರು, ಜಾನುವಾರು ಸಾಕಣೆದಾರರ ಮೇಲೆ ಸಿಬ್ಬಂದಿ ಕೊರತೆ ನೇರವಾಗಿ ಪರಿಣಾಮ ಬೀರುತ್ತದೆ. ನಮ್ಮ ಇಲಾಖೆಯಿಂದ ಬೇರೆ ಇಲಾಖೆಗೆ ತೆರಳಿ ಪಶುವೈದ್ಯರು ಕಾರ್ಯ ನಿರ್ವಹಿಸಬಹುದು. ಆದರೆ, ಬೇರೆ ಇಲಾಖೆಯಿಂದ ನಮ್ಮ ಇಲಾಖೆಗೆ ಬಂದು ಅಧಿಕಾರಿಗಳು ಪ್ರಾಣಿಗಳಿಗೆ ಚಿಕಿತ್ಸೆ ನೀಡವಂತಹ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಹೀಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಪಶುವೈದ್ಯರಿಗೆ ಕಿವಿ ಮಾತು
ಕಲಿಕಾ ಹಂತದಲ್ಲಿ ಆಸಕ್ತಿಯಿಂದ ಪಶುವೈದ್ಯಕೀಯ ಪದವಿ ಪಡೆದು ಮೂಕ ಪ್ರಾಣಿಗಳ ಆರೋಗ್ಯ ಕಾಪಾಡುವ ಪಣತೊಟ್ಟ ನೀವೆಲ್ಲ ಈಗ ಮೂಕ ಪ್ರಾಣಿಗಳ ರೋದನೆಯನ್ನು ಕಡೆಗಣಿಸಿ ಬೇರೆ ಇಲಾಖೆಗೆ ಅನ್ಯ ಕರ್ತವ್ಯಕ್ಕೆ ತೆರಳಿದ್ದಿರಿ. ನಿಮ್ಮ ಮಾತೃ ಇಲಾಖೆಗೆ ನಿಮ್ಮ ಸೇವೆ ಮುಡಿಪಾಗಿರಲಿ. ಪ್ರಾಣಿಗಳ ರೋದನೆ ನಿಮ್ಮನ್ನು ಹೊರತುಪಡಿಸಿ ಬೇರೆಯವರಿಗೆ ಅರ್ಥವಾಗುವುದು ಕಷ್ಟ. ಆದ್ದರಿಂದ ಎಲ್ಲ ಪಶುವೈದ್ಯಾಧಿಕಾರಿಗಳು ಇಲಾಖೆಗೆ ಹಿಂತಿರುಗಿ ಪ್ರಾಣಿಗಳ ಆರೋಗ್ಯಕ್ಕೆ ನಿಮ್ಮ ಸೇವೆಯನ್ನು ಮೀಸಲಿಡಬೇಕು. ನನ್ನ ಇಲಾಖೆಯನ್ನು ನಾನು ನನ್ನ ಕುಟುಂಬವೆಂದು ಪರಿಗಣಿಸಿದ್ದೇನೆ. ಏನೇ ಸಮಸ್ಯೆ ಇದ್ದರೂ ನೇರವಾಗಿ ಸಂಪರ್ಕಿಸಿ ಎಂದು ಸಚಿವರು ಹೇಳಿದ್ದಾರೆ
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ