ಅಥರ್ವ ಕಾಲೇಜಿನ ಮಹಾಪರ್ವ ಕಾರ್ಯಕ್ರಮ
ಮೂಡಲಗಿ: ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ನಾಗರಿಕ ಸಮಾಜದಲ್ಲಿ ಸುಸಂಸ್ಕೃತರನ್ನಾಗಿ ರೂಪಿಸಿದರೆ ಅವರು ಪಡೆದ ಶಿಕ್ಷಣದ ಮೌಲ್ಯವರ್ಧನೆಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆರಗಳು ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಉಡುಪಿಯ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ತಾಲೂಕಿನ ನಾಗನೂರ ಪಟ್ಟಣದ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ನೂತನ ಉಪನ್ಯಾಸ ಕೊಠಡಿಗಳ ಉದ್ಘಾಟನೆ, ಅನ್ನಪೂರ್ಣೇಶ್ವರಿ ಭೋಜನಾಲಯ ಭೂಮಿಪೂಜೆ ಹಾಗೂ ಮಹಾಪರ್ವ-೨೦೨೫ ಉದ್ಘಾಟಿಸಿ ಆಶಿರ್ವಚನ ನೀಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಥರ್ವ ಮಹಾವಿದ್ಯಾಲಯ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದು ವಿಶ್ವಗುರು ಭಾರತ ನಿರ್ಮಾಣ ಹಾಗೂ ಸನಾತನ ಧರ್ಮದ ಬಲವರ್ಧನೆಗೆ ಪೂರಕವಾಗಿದೆ. ನಮ್ಮ ಭವ್ಯ ಪರಂಪರೆಯ ಜ್ಞಾನದ ಬೆಳಕಿನಲ್ಲಿ ನವಯುಗದ ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನ ಬೆರೆತರೆ ಮಕ್ಕಳಿಗೆ ನೀಡಿದ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಎಂದು ಅವರು ಹೇಳಿದರು.
ಎಂ.ಆರ್.ಎನ್. ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ಆಧುನಿಕ ಶಿಕ್ಷಣದೊಂದಿಗೆ ಸನಾತನ ಭಾರತವನ್ನು ಬೆಸೆಯುವ ಮೂಲಕ ಒಂದು ಉಧಾತ್ತ ಪರಂಪರೆಯ ವಾರಸುದಾರರನ್ನು ನಿರ್ಮಿಸುವ ಜವಾಬ್ದಾರಿ ಹೊತ್ತು ಅಥರ್ವ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ನಮ್ಮ ಗ್ರಾಮೀಣ ಮಕ್ಕಳಿಗೆ ಹೊಸ ಜಗತ್ತು ಕಟ್ಟುವ ಶಕ್ತಿ ಇದೆ. ಅವರ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡುವ ಕೆಲಸ ನಮ್ಮಿಂದ ನಡೆಯಬೇಕು. ಮಕ್ಕಳಿಗೆ ಆಸ್ತಿಯನ್ನು ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸೋಣ. ಶಿಕ್ಷಣ ಸಂಸ್ಥೆ ಕಟ್ಟುವುದು ತುಂಬ ಸವಾಲಿನ ಕೆಲಸ ೫ ವರ್ಷಗಳ ಹಿಂದೆ ಪ್ರಾರಂಭವಾದ ಅಥರ್ವ ಕಾಲೇಜು ಇಂದು ೫೦೦ಕ್ಕೂ ಅಧಿಕ ಗ್ರಾಮೀಣ ಮಕ್ಕಳಿಗೆ ಹೊಸ ಪ್ಲಾಟಫಾರ್ಮ್ ನಿರ್ಮಿಸಿಕೊಟ್ಟಿದೆ. ಈ ಭಾಗದ ಹಿರಿಯರು, ಪಾಲಕರು ಸಂಸ್ಥೆಯ ಈ ಗೆಲುವಿಗೆ ಕೈಜೋಡಿಸಿದ್ದು ಅಭಿನಂದನೀಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ವಹಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸಗೌಡ ಪಾಟೀಲ, ಪ್ರಭಾ ಶುಗರ್ಸ್ ಅಧ್ಯಕ್ಷ ಅಶೋಕ ಪಾಟೀಲ, ಶಂಕರ ಹೊಸಮನಿ, ಸಂತೋಷ ಸೋನವಾಲ್ಕರ್, ಪಿ.ಎಲ್.ಬಬಲಿ, ಶ್ರೀಪಾದ ಸಿಂಗನಮಲ್ಲಿ, ಅಥರ್ವ ಮಹಾವಿದ್ಯಾಲಯ ಅಧ್ಯಕ್ಷ ವೆಂಕಟೇಶ ಜಂಬಗಿ ಉಪಸ್ಥಿತರಿದ್ದರು.
ಚೇತನ ಜೋಗನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂತೋಷ ಮಿರ್ಜಿ ಸ್ವಾಗತಿಸಿದರು. ಗಿರೀಶ ಗೋರಬಾಳ ವಂದಿಸಿದರು.