ಮೂಡಲಗಿ: ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ನೂತನ ಅಧ್ಯಕ್ಷರಾಗಿ ಇಲ್ಲಿಯ ದಂತ ವೈದ್ಯ ಡಾ. ಸಂಜಯ ಅಪ್ಪಯ್ಯ ಶಿಂಧಿಹಟ್ಟಿ ಅವರು ನೇಮಕರಾಗಿದ್ದಾರೆ.
ಇತ್ತೀಚೆಗೆ ಬೆಳಗಾವಿ ಕನ್ನಡ ಭವನದಲ್ಲಿ ಜರುಗಿದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಡಾ. ಸಂಜಯ ಶಿಂಧಿಹಟ್ಟಿ ಅವರಿಗೆ ಕನ್ನಡ ಧ್ವಜ ನೀಡಿ ಗೌರವಿಸಿದರು.
ದಂತ ವಿಜ್ಞಾನದಲ್ಲಿ ಪದವಿ ಮಾಡಿಕೊಂಡಿರುವ ಡಾ. ಸಂಜಯ ಶಿಂಧಿಹಟ್ಟಿ ಅವರು ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದಾರೆ. ಕಳೆದ ಎರಡು ದಶಕಗಳಿಂದ ಕನ್ನಡ ನಾಡು, ನುಡಿ, ದೇಶ ಭಕ್ತಿ, ರಾಷ್ಟ್ರ ನಾಯಕರ ಮತ್ತು ಸಾಧಕರ ಕುರಿತಾಗಿ ವಿವಿಧೆಡೆ ಭಾಷಣ, ಪ್ರಬಂಧಗಳನ್ನು ಮಂಡಿಸಿ ಪ್ರಶಸ್ತಿ, ಗೌರವಗಳನ್ನು ಸಂಪಾದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎರಡು ಬಾರಿ ಯುವ ಪ್ರತಿಭೆ ಪ್ರಶಸ್ತಿ, ಬೆಳಗಾವಿಯ ಮಹೇಶ್ವರಿ ಸಂಸ್ಥೆಯಿಂದ ಭಗತಸಿಂಗ ಪ್ರಶಸ್ತಿ, ಬೆಳಗಾವಿಯ ಸ್ವಾಮಿ ವಿವೇಕಾನಂದ ಸಂಸ್ಥೆಯಿಂದ ವಿವೇಕಾನಂದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಸ್ಥಾಪಿಸಿ ಪ್ರತಿ ಹುಣ್ಣಿಮೆಗೆ ‘ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ’ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಜನರಲ್ಲಿ ಸಾಹಿತ್ಯ ಮತ್ತು ಪುಸ್ತಕ ಓದುವ ಅಭಿರುಚಿಯನ್ನು ಜನರಲ್ಲಿ ಬೆಳೆಸುತ್ತಿದ್ದಾರೆ.
‘ಕನ್ನಡ ನೆಲದ ಸೇವೆಯನ್ನು ಮಾಡುವ ಬಲವಾದ ಇಚ್ಛೆ ನನ್ನದಾಗಿದೆ. ಸಾಹಿತ್ಯ ಪರಿಷತ್ ಅಧ್ಯಕ್ಷತೆಯ ಜವಾಬ್ದಾರಿಯಿಂದ ಅದನ್ನು ಈಡೇರಿಸುವ ಅವಕಾಶ ಈಗ ನನಗೆ ದೊರೆತಿದೆ. ಕನ್ನಡದ ಸೇವೆಯನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ’ ಎಂದು ಡಾ. ಸಂಜಯ ತಿಳಿಸಿರುವರು.
ಡಾ. ಸಂಜಯ ಶಿಂಧಿಹಟ್ಟಿ ಅವರ ಅಯ್ಕೆಗೆ ತಾಲ್ಲೂಕಿನಾದ್ಯಂತ ಸಾಹಿತಿಗಳು, ಶಿಕ್ಷಕರು, ಕಲಾವಿದರು ಸ್ವಾಗತಿಸಿ ಅವರನ್ನು ಅಭಿನಂದಿಸಿದ್ದಾರೆ.