ಬೆಂಗಳೂರು – ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀಕೃಷ್ಣ ಸಮೂಹ ವಿದ್ಯಾಸಂಸ್ಥೆ ಸಹಯೋಗದಲ್ಲಿ ಖ್ಯಾತ ಹರಿದಾಸ ವಿದ್ವಾಂಸ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಗೆ ಅಭಿನಂದನೆ ಹಾಗೂ ಡಾ.ಆರ್.ವಾದಿರಾಜು ರಚಿಸಿರುವ ‘ಸಾರ್ಥಕ ಸಾಧನೆ’ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ಇದೇ ಮೇ 15 ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಬನಶಂಕರಿ ಮೂರನೇ ಹಂತ ವಿದ್ಯಾಪೀಠದ ಹತ್ತಿರ ಇರುವ ಐಟಿಐ ಲೇಔಟ್ನ ಶ್ರೀಕೃಷ್ಣ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಕೃತಿ ಲೋಕಾರ್ಪಣೆ ಮಾಡುವರು, ಖ್ಯಾತ ಕಾದಂಬರಿಕಾರ ಡಾ.ಸುರೇಶ ಪಾಟೀಲ ಕೃತಿ ಕುರಿತು ಮಾತನಾಡುವರು. ಶ್ರೀಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ರುಕ್ಮಾಂಗದ ನಾಯ್ಡು ಅಧ್ಯಕ್ಷತೆ ವಹಿಸುವರು ,ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಡಾ. ರಾಮಲಿಂಗೇಶ್ವರ (ಸಿಸಿರಾ) ಭಾಗವಹಿಸುವರು ,ಪ್ರಕಾಶಕರಾದ ಶಿವರಾಮ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಚಿನ್ಮಯಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕೀರ್ತನೆಗಳ ಗಾಯನ ಏರ್ಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೃತಿಯ ಕುರಿತು:
‘ಸಾರ್ಥಕ ಸಾಧನೆ’ (ಪಾರ್ಥಸಾರಥಿ ವಿಠಲ ದಾಸರ ಜೀವನ ಕೃತಿ ಕೀರ್ತನೆಗಳ ಅವಲೋಕನ ) ಬೆಂಗಳೂರು ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಆರ್ ವಾದಿರಾಜು ರವರ ಈ ಕೃತಿ ಹಿರಿಯ ದಾಸಸಾಹಿತ್ಯ ಸಂಶೋಧಕ ,ವಿದ್ವಾಂಸ ಅಂತರರಾಷ್ಟ್ರೀಯ ಖ್ಯಾತಿಯ ಅರಳುಮಲ್ಲಿಗೆ ಪಾರ್ಥಸಾರಥಿ ರವರ ಜೀವನ ಅವರಿಗೆ ಅಂಕಿತವಾದ ಪಾರ್ಥಸಾರಥಿ ವಿಠಲ ದಾಸರ ಕೀರ್ತನೆಗಳ ಅವಲೋಕನವನ್ನು ಮಾಡುವ ಹೊತ್ತಗೆ ಇದಾಗಿದೆ.
ಆಧುನಿಕ ಕಾಲಘಟ್ಟದಲ್ಲಿ ದಾಸಸಾಹಿತ್ಯವನ್ನು ಜಗದಗಲ ಪಸರಿಸಿದ ಹಿರಿಮೆ ಅರಳುಮಲ್ಲಿಗೆ ಪಾರ್ಥಸಾರಥಿಯವರದ್ದು, ದೇಶ ವಿದೇಶಗಳಲ್ಲಿ ನಮ್ಮ ಸನಾತನ ಭಾರತೀಯ ಸಂಸ್ಕೃತಿಯ ಸಾರಸತ್ವವಾದ ಕನ್ನಡದ ಹರಿದಾಸರ ಕೀರ್ತನೆಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವ್ಯಾಖ್ಯಾನ ಮಾಡುತ್ತಾ, ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತಿ ಗಳಿಸಿದ ಶ್ರೀಯುತರ ಜೀವನಾನುಭವ ಅಪಾರ.
ಕಳೆದ ಐವತ್ತು ವರ್ಷಗಳಿಂದ ಹರಿದಾಸ ಸಾಹಿತ್ಯವನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಅರಳುಮಲ್ಲಿಗೆಯವರು ವಿಷ್ಣುಸಹಸ್ರನಾಮದ ಪ್ರಸರಣಕ್ಕೆ ಕಂಕಣಬದ್ಧರಾಗಿರುವ ಬಹುಶ್ರುತ ವಿದ್ವಾಂಸರು. ಪಾರ್ಥಸಾರಥಿ ವಿಠಲದಾಸ ಎಂಬ ಅಂಕಿತ ಪಡೆದು ಸಾವಿರಾರು ಕೀರ್ತನೆಗಳನ್ನು ರಚಿಸಿದ ಹಿರಿಮೆ ಅಂತೆಯೇ ತಿಳಿಗನ್ನಡದಲ್ಲಿ ವೇದೋಪನಿಷತ್ತುಗಳ ಸಾರವನ್ನು ತಿಳಿಸಿದ್ದಾರೆ.
ಅರಳುಮಲ್ಲಿಗೆಯವರ ಕುರಿತು ಗ್ರಂಥಗಳು ಪ್ರಕಟವಾಗಿದ್ದರೂ ಈ ಕೃತಿ ತನ್ನದೇ ಆದ ವಿಶಿಷ್ಟತೆಯಿಂದ ಮನಸೆಳೆಯುತ್ತದೆ .ಕೆಕೆ ಪ್ರಿಂಟರ್ಸ್ ಅಂಡ್ ಪಬ್ಲಿಶರ್ಸ್ ಪ್ರಕಟಿಸಿರುವ ಡಾ.ಆರ್. ವಾದಿರಾಜು ರವರ ಈ ಪುಸ್ತಕ ಅಪ್ರತಿಮ ಸಾಧಕನೋರ್ವರ ಜೀವನಗಾಥೆಯನ್ನು ತಿಳಿಸುತ್ತ ನಿಜಕ್ಕೂ ಕನ್ನಡ ಪುಸ್ತಕ ಪ್ರಪಂಚಕ್ಕೆ ಉತ್ತಮ ಕಾಣಿಕೆಯಾಗಿ ಮೂಡಿಬಂದಿದೆ.