ಸಿಂದಗಿ : ಸ್ವಯಂ ಘೋಷಿತ ಲೆಟರಹೆಡ್ ಅಧ್ಯಕ್ಷ ಮುತ್ತಣ್ಣ ಬೆನ್ನೂರ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯರವರ ಜನಪರ ಮತ್ತು ಸಾಮಾಜಿಕ ಹೇಳಿಕೆ ಹಾಗೂ ಮಾಜಿ ಜಲಸಂಪನ್ಮೂಲ ಸಚಿವ ಎಮ್.ಬಿ.ಪಾಟೀಲರ ರಾಜಕೀಯ ಬೆಳವಣಿಗೆಯನ್ನು ಕಂಡು ಸಹಿಸಲಾಗದೆ ಕೆಲ ಕುಹಕಿಗಳು ಅವರ ರಾಜಕೀಯ ಜೀವನಕ್ಕೆ ಕುಂದು ತರುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ತಾಲೂಕ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ರವಿಕುಮಾರ ಹೊಸಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬಾಗಲಕೋಟ ಜಿಲ್ಲೆಯ ಮುತ್ತಣ್ಣ ಬೆನ್ನೂರ ರವರು ದಲಿತರನ್ನು ಸಿದ್ದರಾಮಯ್ಯ ಮತ್ತು ಎಮ್.ಬಿ. ಪಾಟೀಲರು ಹತ್ತಿಕ್ಕುತ್ತಿದ್ದಾರೆ ಎಂದು ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇಂತಹ ಅವಿವೇಕಿಗಳಿಂದ ಕೂಡಿದ ಬಿಜೆಪಿ ಪಕ್ಷ ಯಾವಾಗಲು ಇಂತಹ ಕೆಳ ಮಟ್ಟದ ರಾಜಕೀಯ ಮಾಡುತ್ತಾ ಬಂದಿದೆ. ಸದ್ಯ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮುಗ್ದ ಪರಿಶಿಷ್ಟ ಜಾತಿಯ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸಕ್ಕೆ ಕೈ ಹಾಕಿದೆ ಇದಕ್ಕೆ ಉದಾಹರಣೆಯಂಬಂತೆ ಇಂತಹ ಚೇಲಾಗಳಿಂದ ವ್ಯತಿರಿಕ್ತ ಹೇಳಿಕೆ ಬಹಿರಂಗ ಪಡಿಸುತ್ತಿರುವುದು ಬಿಜೆಪಿ ಪಕ್ಷದ ಕುತಂತ್ರ ರಾಜಕಾರಣ ಎದ್ದು ಕಾಣುತ್ತಿದೆ.
ಲೆಟರ್ ಹೆಡ್ ಗೆ ಸೀಮಿತವಾದ ಅಧ್ಯಕ್ಷ ಮುತ್ತಣ್ಣ ಬೆನ್ನೂರ ರವರೇ ಯಾವುದೇ ಹೇಳಿಕೆ ನೀಡಬೇಕಾದರೆ ಹತ್ತು ಬಾರಿ ಯೋಚಿಸಿ ಹೇಳಿಕೆ ನೀಡಿ ನೀವು ನೀಡೊ ಹೇಳಿಕೆ ಸಮಾಜಕ್ಕೆ ಮಾದರಿಯಾಗಬೇಕೆ ಹೊರತು ಇಡೀ ಸಮಾಜದಲ್ಲಿನ ಶಾಂತಿ ಕದಡುವಂತಾಗಬಾರದು. ಯಾರದೋ ಒಲೈಕೆಗಾಗಿ ನೀವು ಸಮಾಜವನ್ನು ಬಳಸಿಕೊಂಡು ಹೇಳಿಕೆ ನೀಡುತ್ತಾ ಹೋದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಸಮಾಜದಿಂದ ನಿಮಗೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯಪುರ-ಬಾಗಲಕೋಟ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲಗೌಡ ಪಾಟೀಲರಿಗೆ ಪರಿಶಿಷ್ಟ ಜಾತಿಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಬೆಂಬಲಿಸಿ ಗೆಲ್ಲಿಸುವುದರೊಂದಿಗೆ ಇಂತಹ ತುಚ್ಛ ಹೇಳಿಕೆ ನೀಡುವವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ವರದಿ: ಪಂಡಿತ್ ಯಂಪೂರೆ, ಸಿಂದಗಿ