spot_img
spot_img

ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಶಿವಮೊಗ್ಗ: ಕಿರುಗಥೆಗಳು

Must Read

spot_img

ವಿದೇಶಿ ವ್ಯಾಮೋಹ

ಜಲಜಮ್ಮ ಮತ್ತು ಶ್ರೀ ಪತಿರಾಯರಿಗೆ ಇಬ್ಬರು ಮಕ್ಕಳು ರಾಯರಿಗೆ ಮೊದಲಿನಿಂದಲೂ ವಿದೇಶಿ ವ್ಯಾಮೋಹ ಜಾಸ್ತಿ ಕೈತುಂಬ ಸಂಬಳ ಶಿಸ್ತಿನ ಜೀವನ ನಮ್ಮ ದೇಶದಲ್ಲಿ ಎನಿದೆ ದುಡಿಮೆಗೆ ತಕ್ಕ ಪಗಾರ ಯಾರೂ ಕೊಡುವುದಿಲ್ಲ ಎನ್ನುವರು,, ಗುಮಾಸ್ತರಾದ ಅವರ ಸಂಬಳ ಅಷ್ಟಕಷ್ಟೇ ಹೀಗಾಗಿ ಮಕ್ಕಳಿಬ್ಬರನ್ನು ಇಂಗ್ಲೀಷ್ ಸ್ಕೂಲಿಗೆ ಸೇರಿಸಿದರು ಅದಕ್ಕಾಗಿ ತಾವು ಉಪವಾಸ ಇದ್ದು ಹೊಟ್ಟೆಬಟ್ಟೆ ಕಟ್ಟಿ ಓದಿಸಿ ಸಾಫ್ಟ್ ವೇರ್ ಇಂಜಿನಿಯರ್ ಮಾಡಿದರು ಈಗ ಮಕ್ಕಳಿಬ್ಬರು ವಿದೇಶದಲ್ಲಿ ಸಂಸಾರದೊಂದಿಗೆ ಆರಾಮವಾಗಿದ್ದಾರೆ ಅಲ್ಲಿ ಹೋಗಿ ಇರಲು ದಂಪತಿಗಳಮನ ಒಪ್ಪದು ಇಬ್ಬರೇ ಒಂಟಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಮೊದಲಿನಿಂದಲೂ ಜಲಜಮ್ಮ ನಮ್ಮ ದೇಶದಲ್ಲಿ ಇಲ್ಲದ್ದು ಅಲ್ಲೇನಿದೆ ಬಿಡಿ ಎಂದು ವಾದ ಮಾಡುತ್ತಿದ್ದರು ಅದು ನಿಜ ಎಂದು ರಾಯರಿಗೆ ಈಗ ಅನಿಸುತ್ತಿದೆ ಮಕ್ಕಳು ಸಾಕಷ್ಟು ದುಡ್ಡು ಕಳಿಸುತ್ತಾರೆ.

ಆದರೆ ಜೊತೆ ಯಾರು ಇಲ್ಲ ಈಗ ದಂಪತಿಗಳ ಆರೋಗ್ಯದಲ್ಲಿ ಬಹಳ ಏರುಪೇರಾಗುತ್ತಿದೆ ಹೊದತಿಂಗಳು ಮಗ ಪ್ರಶಾಂತ ನಿಮ್ಮಿಬ್ಬರನ್ನು ವೃದ್ಧಾಶ್ರಮಕ್ಕೆ ಸೇರಿಸುವೆನು ಅಲ್ಲಿ ಎಲ್ಲಾ ವ್ಯವಸ್ಥೆ ಇರುತ್ತದೆ ನಿಮ್ಮ ಆರೋಗ್ಯದಲ್ಲಿ ಏರುಪೇರಾದರೆ ಯಾರು ನೋಡಿಕೊಳ್ಳುತ್ತಾರೆ ಎಂದು ಹೇಳಿ ಆಶ್ರಮಕ್ಕೆ ಸೇರಿಸಿ ತಾನು ವಿದೇಶಕ್ಕೆ ಹಾರಿ ಹೋದ ನನ್ನ ವಿದೇಶಿ ವ್ಯಾಮೋಹದ ಪ್ರತಿಫಲ ಜಲಜ ಎಂದು ಕಣ್ಣೀರಿಡುವರು ರಾಯರು

ಶ್ರೀಮತಿ ಪ್ರಭಾ ಅಶೋಕ ಪಾಟೀಲ,
ಬೆಳಗಾವಿ


ಅಂತರಾಳದ ವ್ಯಥೆ

ಆಗ ನಾನಿನ್ನೂ ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ. ನನ್ನ ಗೆಳತಿ ಸುಜಾತ ನನಗೆ ಅತ್ಯಂತ ಆತ್ಮೀಯಳಾ ಗಿದ್ದಳು. ಪ್ರತಿದಿನ ಇಬ್ಬರು ಕೂಡಿಯೇ ಶಾಲೆಗೆ ಹೋಗುತ್ತಿದ್ದೆವು. ತುಂಬಾ ಮೃದು ಸ್ವಭಾವ ಆಗಿದ್ದಳು. ಸುಜಾತಳ ತಾಯಿ ತುಂಬಾ ಸುಂದರವಾಗಿದ್ದಳು. ಸುಜಾತಾಳಿಗೆ ಒಬ್ಬ ತಂಗಿಯೂ ಇದ್ದಳು. ನಾಲ್ಕು ಜನರ ತುಂಬು ಸುಂದರ ಸಂಸಾರವಿತ್ತು. ಯಾರ ಕರಿನೆರಳು ಸಂಸಾರದ ಮೇಲೆ ಬಿತ್ತೋ ಏನೋ, ಸುಜಾತಾಳ ತಂದೆ ಹೆಂಡತಿಯನ್ನು ಸಂಶಯ ಪಡಲು ಆರಂಭಿಸಿದ.

ಸಂಬಂಧಿಕರು ಮನೆಗೆ ಬಂದು ಹೋದರೂ ಅನುಮಾನಿಸಲು ತೊಡಗಿದ. ಅದು ವಿಪರೀತವಾದಾಗ ಜಗಳಗಳು ಅತಿರೇಕಕ್ಕೆ ಹೋಗುತ್ತಿದ್ದವು. ಕೊನೆಗೆ ಒಂದು ದಿನ ಹೆಂಡತಿ-ಮಕ್ಕಳಿಗೆ ವಿಷ ಹಾಕಿ ಕೊಂದು ತಾನು ಕೂಡ ನೇಣು ಹಾಕಿಕೊಂಡು ಸತ್ತುಹೋದ.

ಊರ ಜನರೆಲ್ಲಾ ಹೋಗಿ ನೋಡುತ್ತಿದ್ದಾಗ ನಾನು ಶಾಲೆಗೆ ಕರೆಯಲೆಂದು ಅವರ ಮನೆಗೆ ಹೋದೆ, ಅಲ್ಲಿ ಅವರೆಲ್ಲ ಬಿದ್ದಿದ್ದ ದೃಶ್ಯ ಹಾಗೂ ಸುಜಾತಾಳ ತಂದೆ ನೇಣು ಹಾಕಿಕೊಂಡ ದೃಶ್ಯ ಕಣ್ಣಾರೆ ಕಂಡು ಭಯ ಭೀತಳಾಗಿ ಮನೆಗೆ ಬಂದು ಅಳುತ್ತಾ ಅವ್ವನಿಗೆ ವಿಷಯ ತಿಳಿಸಿದೆ. ಸಂಶಯ ಅನ್ನುವ ಪಿಶಾಚಿ ಆ ಮನೆಯನ್ನೇ ನುಂಗಿತು. ಇದು ನನ್ನ ಅಂತರಾಳದಲ್ಲಿ ಎಂದಿಗೂ ಮರೆಯಲಾಗದ ಕಥೆಯ ವ್ಯಥೆಯಾಗಿ ಉಳಿದಿದೆ.

ಶ್ರೀಮತಿ ಸುಮಾ ಗಾಜರೆ
ವಿಜಯಪುರ


ನಿರುದ್ಯೋಗಿ

ಶರತ್ ಗೌಡ ಮತ್ತು ಅವನ ತಂದೆ ಕೃಷ್ಣೇಗೌಡ ಇಬ್ಬರೂ ಒಟ್ಟಾಗಿ ಟ್ಯಾಕ್ಟರ್ ನಲ್ಲಿ ಗೊಬ್ಬರ ವನ್ನು ತುಂಬಿಕೊಂಡು ಇಬ್ಬರು ಆಳುಗಳೊಂದಿಗೆ ಅವರ ಮನೆಯಿಂದ ಆರು ಕಿ.ಮೀ.ದೂರದಲ್ಲಿರುವ ಜಮೀನಿನಲ್ಲಿ ಬೆಳೆದಿರುವ ಹಿಪ್ಪು ನೇರಳೆ ತೋಟಕ್ಕೆ ಹೊರಟಿದ್ದರು. ಅಷ್ಟರಲ್ಲಿ ಅವರ ಮನೆಯ ಹತ್ತಿರ ಟಿವಿ ನ್ಯೂಸ್ ಚಾನಲ್ ನವರು ಬಂದುಬಿಟ್ಟರು.

ಆಗ ಅನಿವಾರ್ಯ ವಾಗಿ ಅವರನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಕಾಫಿ ತಿಂಡಿ ಕೊಟ್ಟು ಉಪಚರಿಸಿದ ನಂತರ ಕೃಷ್ಣೇಗೌಡರು ಟಿವಿ ನ್ಯೂಸ್ ಚಾನಲ್ ನವರನ್ನುದ್ದೇಶಿಸಿ “ತಾವು ಇಲ್ಲಿಗೆ ಬಂದಿರುವ ಕಾರಣ ತಿಳಿಯಲಿಲ್ಲ ಸರ್”ಎಂದಾಗ,”ನಿಮ್ಮ ಮಗ ಶರತ್ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗದೆ ಹಳ್ಳಿಯಲ್ಲಿ ಉಳಿದು ಕೃಷಿಯಲ್ಲಿ ತೊಡಗಿ ಒಳ್ಳೆಯ ಸಾಧನೆ ಮಾಡಿದ್ದಾರೆಂದು ತಿಳಿಯಿತು.ಅವರ ಸಂದರ್ಶನ ಮಾಡೋಣ ಎಂದು ಬಂದೆವು.”

ಅಂದಾಗ ಕೃಷ್ಣೇಗೌಡರಿಗೆ ಸಂತೋಷ ದಿಂದ ಏನು ಹೇಳಬೇಕೆಂದು ತಿಳಿಯಲಿಲ್ಲ.”ಆಯಿತು ಸಂತೋಷ.ಬನ್ನಿ ಹಾಗೆ ರೇಷ್ಮೆ ತೋಟದ ಹತ್ತಿರ ಹೋಗಿ ಅಲ್ಲಿಯೇ ನೀವು ಮಾತನಾಡುವಿರಂತೆ”ಅಂದಾಗ ಆ ಟಿವಿ ನ್ಯೂಸ್ ಚಾನಲ್ ನವರು ಅವರ ಜೊತೆಗೆ ರೇಷ್ಮೆ ಬೆಳೆ ಇರುವ ಜಮೀನಿನ ಬಳಿಗೆ ಹೋಗಿ ಫೊಟೋ ಗಳನ್ನು ತೆಗೆದುಕೊಂಡು ವೀಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾ, ಶರತ್ ಗೌಡ ನಿಗೆ “ನೀವು ಎಂಜಿನಿಯರಿಂಗ್ ಮುಗಿಸಿ ಐಟಿ ಕಂಪನಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಹಳ್ಳಿಯಲ್ಲೇ ನೆಲಸಿ ಈ ರೈತನ ಕೆಲಸ ಮಾಡಲು ಮನಸ್ಸು ಮಾಡಿದ್ದು ಏಕೆ, ಈ ರೀತಿ ಸಾಧನೆ ಮಾಡಲು ನಿಮಗೆ ಪ್ರೇರಣೆ ಏನು,ಅಂತಾ ಹೇಳ್ತೀರಾ?”ಎಂದಾಗ, ಶರತ್ ಗೌಡ ಒಂದು ಕ್ಷಣ ಭಾವುಕನಾಗಿ ನಂತರ ತನ್ನ ಸಾಧನೆ ಬಗ್ಗೆ ವಿವರಿಸತೊಡಗಿದ.”ನೋಡಿ ಸಾರ್.ನನಗೆ ಪಿ.ಯು‌.ಸಿಯಲ್ಲಿ ಚೆನ್ನಾಗಿ ಅಂಕ ಸಿಗದೇ ಇದ್ದರೂ ನನ್ನ ತಂದೆಯವರು ನನ್ನ ಮಗ ಎಂಜಿನಿಯರಿಂಗ್ ಮಾಡಲಿ ಎಂದು ಸಾಲಸೋಲ ಮಾಡಿ ಬೆಂಗಳೂರು ನಗರದಲ್ಲಿ ಹಾಸ್ಟೆಲ್ ನಲ್ಲಿ ಹಾಕಿ ಓದಿಸಿದರು.ಆ ಕಾಲದಲ್ಲಿ ಅವರು ಎಸ್.ಎಸ್.ಎಲ್.ಸಿ.ವರೆಗೆ ಓದಿದ್ದರೂ.. ಹಳ್ಳಿಯಲ್ಲೇ ನೆಲಸಿ ಕುಟುಂಬ ವನ್ನು ವ್ಯವಸಾಯ ಮಾಡಿ ನಡೆಸಿ ಕೊಂಡು ಹೋಗುತ್ತಿದ್ದರಲ್ಲವೇ?ನಮ್ಮ ಮನೆಯಲ್ಲಿ ಆಗ ಸಾಕಷ್ಟು ಜನರಿದ್ದರೂ ಹಬ್ಬ ಹರಿದಿನ ಮದುವೆ ಜಾತ್ರೆ ಉತ್ಸವ ಅಂತ ಎಲ್ಲಾ ಒಟ್ಟಾಗಿ ಸಂತೋಷ ದಿಂದ ಇರುತ್ತಿದ್ದರು. ಎಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿ ನಿಶ್ಚಿಂತೆಯಿಂದ ಮಲಗುತ್ತಿದ್ದರು.

ಮನೆಜನರೆಲ್ಲರೂ ಒಂದಾಗಿ ಜಮೀನಿನಲ್ಲಿ ದುಡಿಯುತ್ತಿದ್ದರು. ನಾನು ಎಂಜಿನಿಯರಿಂಗ್ ಮುಗಿಸಿ ಬಂದಾಗ ಐ.ಟಿ.ಕಂಪೆನಿಗಳಲ್ಲಿ ಭಾರೀ ಕೆಲಸದ ಪೈಪೋಟಿ ಇತ್ತು. ನನಗೆ ಕೇವಲ ವರ್ಷಕ್ಕೆ ಮೂರು ಲಕ್ಷ ಸಂಬಳದ ಆಫರ್ ಕೊಟ್ಟರು. ಇದು ಬೆಂಗಳೂರು ನಗರದಲ್ಲಿ ಜೀವನ ನಡೆಸಲು ಏನೂ ಸಾಲುವುದಿಲ್ಲ ಅನ್ನಿಸಿತು.

ಹಾಗಾಗಿ ನನ್ನ ತಂದೆಯವರನ್ನು ಕೇಳಿ ,ನಮ್ಮ ಜಮೀನಿನಲ್ಲಿ ರೇಷ್ಮೆ ಬೆಳೆ ಮಾಡಿದರೆ ಹೇಗೆ ಎಂದು ಆಲೋಚಿಸಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಾಂತ್ರಿಕ ಮಾಹಿತಿ ಪಡೆದು ಬ್ಯಾಂಕ್ ನಲ್ಲಿ ಮತ್ತೆ ಕೊಳವೆ ಬಾವಿ ತೆಗೆಯಲು ಸಾಲ ಪಡೆದು ಬೋರ್ ವೆಲ್ ಹಾಕಿಸಿ..ನಂತರ ಜಾಮೀನಿನ ಮಣ್ಣು ಪರೀಕ್ಷೆ ಮಾಡಿಸಿ ಮೂರು ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ತೋಟ ಸ್ಥಾಪಿಸಿ ಅದರಲ್ಲಿ ಎರಡು ತಂಡ ಮಾಡಿಕೊಂಡು ಪ್ರತ್ಯೇಕ

ರೇಷ್ಮೆ ಹುಳು ಸಾಕಾಣಿಕೆ ಮನೆ ಮಾಡಿಕೊಂಡು .ಪ್ರತಿ ತಿಂಗಳು ಮುನ್ನೂರು ಮೊಟ್ಟೆಗಳನ್ನು ತಂದು ಹುಳುಗಳನ್ನು ನಾವೇ ಮನೆಯವರು ರೆಂಬೆ ಪದ್ಧತಿ ಯಲ್ಲಿ ಮೇಯಿಸಲು ಪ್ರಾರಂಭಿಸಿದೆ.ಪ್ರತಿ ತಿಂಗಳು ಮುನ್ನೂರು ಕೆ.ಜಿ.ಮಿಶ್ರತಳಿ ಗೂಡು ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದಾಗ, ಒಂದು ಲಕ್ಷಕ್ಕೂ ಹೆಚ್ಚು ಹಣ ಸಿಗುತ್ತಿದೆ.ಖರ್ಚು ಕಳೆದು ಅರವತ್ತು ಸಾವಿರ ರೂಪಾಯಿ ಉಳಿಯುತ್ತದೆ.ಊರಿನಲ್ಲೆ ಇದ್ದು ಹೀಗೇ ಐದು ವರ್ಷಗಳಿಂದ ಸುಮಾರು ಅರವತ್ತು ಲಕ್ಷ ರೂಪಾಯಿ ಗಳಿಸಿದ್ದೇನೆ.

ಮದುವೆ ಮಾಡಿಕೊಂಡು ಹೆಂಡತಿ ಮಕ್ಕಳ ಜತೆ ತಂದೆತಾಯಿಯನ್ನು ನೋಡಿಕೊಂಡು ಇದ್ದೇನೆ.ಇಷ್ಟೇ ಸರ್ ನನ್ನ ಸಾಧನೆ.ನನಗೆ ಜನರು ನಿರುದ್ಯೋಗಿ ಅಂತಾ ಕರೆದರೂ ಚಿಂತೆಯಿಲ್ಲ.ನನಗೆ ಜೀವನದಲ್ಲಿ ತೃಪ್ತಿಯಿದೆ ಸರ್”ಎಂದಾಗ ಇವರ ಮಾತುಗಳನ್ನು ವೀಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ಟಿವಿ ಚಾನೆಲ್ ನವರು ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು.

ಮಂಜುನಾಥ ಗಣಪತಿ ಹೆಗಡೆ ಚಿಕ್ಕಬಳ್ಳಾಪುರ


ಮನಸ್ಸಿನ ಮಾತು

ಮಳೆಗಾಲ ಪ್ರಾರಂಭವಾಗಿತ್ತು. ಹನಿ ಹನಿ ಮಳೆಯಿಂದ ಆಕಾಶದಲ್ಲಿ ಹಾರುತ್ತಿರುವ ಪಕ್ಷಿಗಳು ಬಂದು ಮರದ ಮೇಲೆ ಕುಳಿತಿದ್ದವು. ಒಂದು ಗುಬ್ಬಚ್ಚಿ ಚಿಂತಿತ ಸ್ಥಿತಿಯಲ್ಲಿ ಒಂಟಿಯಾಗಿ ಮರದ ಟೊಂಗೆಯ ಮೇಲೆ ಕುಳಿತಿತ್ತು. ಆಗ ಪಕ್ಷಿ ಗೆಳೆಯರು ” ಗೆಳತಿ ಏನಾಯಿತು? ಹುಷಾರಿಲ್ವಾ?, ಏಕೆ ಬೇಸರ?, ಏಕೆ ಒಂಟಿಯಾಗಿ ಕುಳಿತಿದ್ದಿ? . ” ಎಂದು ಕೇಳಿದವು.

ಆಗ ಆ ಗುಬ್ಬಚ್ಚಿ ತನ್ನ ಪಕ್ಷಿ ಗೆಳೆಯರಿಗೆ ” ಗೆಳೆಯರೇ, ಮಳೆಗಾಲ ಪ್ರಾರಂಭವಾಗಿದೆ ರೈತನು ಹೊಲದಲ್ಲಿ ಹೂಳಲು ಪ್ರಾರಂಭಿಸಿದ್ದಾನೆ. ಕಪ್ಪೆ ಅಣ್ಣಾ ಮಳೆ ನೀರಿನಲ್ಲಿ ತಕತಕ ಕುಣಿಯಲು ಕಾತುರದಿಂದ ಕಾಯುತ್ತಿದ್ದಾನೆ. ಚಿಟ್ಟೆ ಅಕ್ಕಾ ತನ್ನ ಬಣ್ಣ ಬಣ್ಣದ ರೆಕ್ಕೆಗಳನ್ನು ಬಡಿಯುತ್ತ, ಹೂಗಳ ಮಕರಂದವನ್ನು ಹೊಟ್ಟೆ ತುಂಬಾ ಕುಡಿದು ಹೂತೋಟದಲ್ಲಿ ಸಂತಸದಿಂದ ನಲಿದು ಹಾರಾಡುತ್ತಿದ್ದಾಳೆ.

ಗೆಳೆಯರೇ, ಮೊದಲು ನನ್ನ ಅಪ್ಪಾ, ಅಮ್ಮಾ ಇಬ್ಬರೂ ಕೂಡಿ ಹೊಲದ ಕಡೆಗೆ ಹಾರಿ ಜೋಳದ ಕಾಳನ್ನು ಮೇಯಿದು ಸಂತೋಷದಿಂದ ಗೂಡಿಗೆ ಬಂದು ನನಗೆ ಆಹಾರ ತಂದು ಕೊಡುತ್ತಿದ್ದರು.

ಆದರೆ ಈಗ ನನ್ನಿಂದ ಎಲ್ಲಿಯವರೆಗೂ ಹಾರಲು ಸಾಧ್ಯ? ಈ ಕಲುಷಿತ ಗಾಳಿಯಿಂದ ನನ್ನ ಉಸಿರುಗಟ್ಟಿದಂತಾಗಿದೆ. ನನಗೆ ಬದುಕಲು ಶುದ್ಧ ಗಾಳಿ, ಬೆಳಕು ಬೇಕು, ಜನರು ಸಾಕಷ್ಟು ಮರಗಳನ್ನು ನೆಡಬೇಕು ಆಗಲೇ ಪಕ್ಷಿಗಳನ್ನು ಉಳಿಸ ಬಹುದು. ಆಗ ಮಾತ್ರ ನಾನು ಗೂಡು ಕಟ್ಟಲು, ರೆಕ್ಕೆ ಬಿಚ್ಚಿ ಬಾನಂಗಳಕ್ಕೆ ಹಾರಲು, ನನ್ನ ಮಕ್ಕಳನ್ನು ಉಳಿಸಲು ಸಾಧ್ಯ.” ಎಂದು ಬೇಸರದಿಂದ ಹೇಳಿತು.

ಆಗ ಮರದ ಮೇಲಿದ್ದ ಗಿಳಿರಾಯ “ಗೆಳೆಯರೇ, ಮನುಷ್ಯರು ಪ್ರತಿಯೊಂದು ಮನೆಗೆ ಒಂದು ಗಿಡ ಬೆಳೆಸಿದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ. ತಮ್ಮ ಸ್ವಾರ್ಥಕ್ಕಾಗಿ ಪ್ರಕೃತಿ ಜೊತೆ ಆಟವಾಡಿದ್ದರು ಈಗ ಅವರು ಕೂಡ ಅನುಭವಿಸುತ್ತಿದ್ದಾರೆ.” ಎಂದು ಹೇಳಿತು.

ಇದನ್ನು ಕೇಳಿದ ಪಾರಿವಾಳ ” ಬನ್ನಿ ಗೆಳೆಯರೇ ಪರಿಸರ ಬೆಳೆಸುವ ನೀತಿಯ ಮಾರ್ಗವನ್ನು ಜಗದ ಜನತೆಗೆ ನಾವು ಸಾರೋಣ. ಉಣ್ಣಲು ಅನ್ನ ಹೇಗೆ ಅವಶ್ಯಕ, ಅದೇ ತರಹ ಉಸಿರಾಡಲು ಮರ ಬೇಕು ಎಂದು ಜನರಿಗೆ ತಿಳಿಸೋಣ.” ಹೀಗೆ ಪಕ್ಷಿಗಳು ಗೆಳೆಯರೊಡನೆ ತಮ್ಮ ಮನಸ್ಸಿನಲ್ಲಿದ್ದ ದುಃಖವನ್ನು ಹಂಚಿಕೊಂಡವು.

ನೀತಿ: ಮರ ಬೆಳಿಸಿ, ಜೀವ ಉಳಿಸಿ

ಕು. ನಿಧಿ.ಬಿ ನಾಯ್ಕ್

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!