ಮೂಡಲಗಿ: ಕಲ್ಯಾಣರಾವ ಮುಚಳಂಬಿಯವರು ದಿಟ್ಟ ಪತ್ರಕರ್ತರಾಗಿದ್ದರು ಮತ್ತು ಹೋರಾಟವನ್ನೆ ತಮ್ಮ ಉಸಿರಾಗಿಸಿಕೊಂಡಿದ್ದರು ಅವರ ಅಗಲಿಕೆಯಿಂದ ಪತ್ರಿಕಾರಂಗಕ್ಕೆ ಹಾಗೂ ರೈತ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಗುರುವಾರದಂದು ಪ್ರೆಸ್ಕ್ಲಬ್ ಕಾರ್ಯಾಲಯದಲ್ಲಿ ಬುಧವಾರ ನಿಧನರಾದ ಕಲ್ಯಾಣರಾವ ಮುಚಳಂಬಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ. ಕಲಬುರ್ಗಿ ಜಿಲ್ಲೆಯವರಾದ ಮುಚಳಂಬಿ ಅವರು 40 ವರ್ಷಗಳ ಹಿಂದೆ ಬೆಳಗಾವಿಗೆ ಬಂದು ಹಸಿರು ಕ್ರಾಂತಿ ಪತ್ರಿಕೆ ಪ್ರಾರಂಭಿಸಿ ರೈತ ಚಳವಳಿಯಲ್ಲಿ ಪಾಲ್ಗೊಂಡು ರೈತಪರ,ಕನ್ನಡಪರ ಹಾಗೂ ಗಡಿ ಹೋರಾಟದಲ್ಲಿ ಸಕ್ರಿಯರಾಗಿ ಅಪಾರ ಸೇವೆ ಸಲ್ಲಿಸಿ ರೈತ ನಾಯಕರೆನಿಸಿಕೊಂಡಿದ್ದರು.ಹೋರಾಟದ ಸಮಯದಲ್ಲಿ ಸೆರೆಮನೆ ವಾಸ ಕೂಡಾ ಅನುಭವಿಸಿದ್ದರು. ಪತ್ರಿಕಾರಂಗ ಅಷ್ಟೆ ಅಲ್ಲದೆ ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದ ಅವರಿಗೆ ಹಲವಾರು ಪ್ರಶಸ್ತಿಗಳೂ ಲಭಿಸಿವೆ. ರೈತ ಹೋರಾಟದ ಅಂಗವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಮಯದಲ್ಲಿ ನಿಧನರಾಗಿದ್ದು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ,ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಎಸ್ ಎಮ್ ಚಂದ್ರಶೇಖರ, ರಾಜಶೇಖರ ಮಗದುಮ್, ಶಿವಾನಂದ ಹಿರೇಮಠ, ಅಕ್ಬರ ಪೀರಜಾದೆ, ಸುಧಾಕರ ಉಂದ್ರಿ ಸೇರಿದಂತೆ ಇನ್ನಿತರರು ಇದ್ದರು.
ಪೋಟೋ :ಪ್ರೆಸ್ಕ್ಲಬ್ ಕಾರ್ಯಾಲಯದಲ್ಲಿ ಕಲ್ಯಾಣರಾವ ಮುಚಳಂಬಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿದರು.