ಸಿಂದಗಿ: ಕಾವ್ಯ, ಪ್ರಬಂಧ, ಕಥೆ, ವಿಮರ್ಶೆ, ಸಂಶೋಧನೆ, ಆತ್ಮಕಥನ ಸೇರಿದಂತೆ ಅನೇಕ ಸಾಹಿತ್ಯದ ಪ್ರಕಾರಗಳಲ್ಲಿ ವಿನೂತನ ಸಾಹಿತ್ಯವನ್ನು ರಚನೆ ಮಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದವರಲ್ಲಿ ಡಾ.ಸಿದ್ದಲಿಂಗಯ್ಯನವರು ಪ್ರಮುಖರು ಅವರ ಸಾವು ನಿಜಕ್ಕೂ ಕನ್ನಡ ನಾಡಿಗೆ, ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಸಾಹಿತಿ ಎಮ್.ವ್ಹಿ.ಗಣಾಚಾರಿ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡ ಕವಿ ಡಾ.ಸಿದ್ದಲಿಂಗಯ್ಯನವರ ನಿಧನದ ಹಿನ್ನಲೆಯಲ್ಲಿ ಆಯೋಜಿಸಿರುವ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕರ್ನಾಟಕದ ದಲಿತ ಚಳವಳಿಗೆ ಹೊಸ ಸಂಚಲವನ್ನು ನೀಡಿದ ಅಪರೂಪದ ಸಾಹಿತಿ ಸದಾಕಾಲ ಸಮಾಜಿಕ ಸಮಾನತೆಯ ಹೋರಾಟದಲ್ಲಿ ತೊಡಗಿಸಿಕೊಂಡವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ಸಾಹಿತಿ ಡಾ.ಸಿದ್ದಲಿಂಗಯ್ಯನವರು ಅತ್ಯಂತ ಸರಳ ಸ್ವಭಾವದವರು. ದಲಿತರ ಧ್ವನಿಯಾಗಿ, ಹತ್ತಾರು ಸಾಹಿತ್ಯಿಕ ಕೃತಿಗಳನ್ನು ಈ ನಾಡಿಗೆ ಪರಿಚಯಿಸಿದವರು. ಅವರು ರಚಿಸಿದ ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ ಬರೀ ಚಲನಚಿತ್ರ ಗೀತೆಯಾಗಿ ಉಳಿಯದೆ ಜಾನಪದದಂತೆ ಕನ್ನಡ ನಾಡಿನ ಪ್ರತಿಯೊಬ್ಬರ ಮನ ತಲುಪಿದ್ದು ಇತಿಹಾಸ. ಅವರ ಸೃಜನಶೀಲವಾದ ಬರವಣಿಗೆ, ಬದುಕು ಮತ್ತು ಹೋರಾಟ ಯುವ ಕವಿಗಳಿಗೆ ಹೊಸ ಆಶಾದಾಯಕವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಕ್ಕಳ ಸಾಹಿತಿ ರಾ.ಶಿ.ವಾಡೇದ, ನಿವೃತ್ತ ಉಪನ್ಯಾಸಕ ಪಿ.ಎಂ.ಮಡಿವಾಳರ, ಅಶೋಕ ಬಿರಾದಾರ ಮಾತನಾಡಿದರು.
ನುಡಿನಮನ ಕಾರ್ಯಕ್ರಮದಲ್ಲಿ ಕಸಾಪದ ಬಸವರಾಜ ಅಗಸರ, ಪ್ರದೀಪ ಕತ್ತಿ, ಸಾಯಬಣ್ಣ ದೇವರಮನಿ, ಜನಸ್ಪಂದನ ಟ್ರಸ್ಟನ ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ, ಜನಸ್ಪಂದನ ಟ್ರಸ್ಟ್ ತಾಲೂಕಾಧ್ಯಕ್ಷ ನವೀನ ಶೆಳ್ಳಗಿ, ಡಾ. ಪ್ರಕಾಶ ರಾಗರಂಜನಿ, ರಾಚು ಕೊಪ್ಪಾ ಸೇರಿದಂತೆ ಅನೇಕರು ಇದ್ದರು.