ಸಿಂದಗಿ– ಸಿಂದಗಿ ಮತ ಕ್ಷೇತ್ರ ಅಭಿವೃದ್ದಿಯಾಗಿದ್ದೇ ಜೆಡಿಎಸ್ ಸರ್ಕಾರದಲ್ಲಿ ವಿನಃ ಬೇರಾವ ಸರ್ಕಾರದಲ್ಲಿ ಅಲ್ಲ ಈ ಬಾರಿಯೂ ಸಿಂದಗಿಯ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಸಿಂದಗಿ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಾಜೀಯಾ ಶಕೀಲ ಅಂಗಡಿ ಹೇಳಿದರು.
ಅವರು ಪಟ್ಟಣದ ಅವರ ನಿವಾಸದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಹಿಳೆಯರು ರಾಜಕೀಯವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಸಿಂದಗಿ ರಾಜಕೀಯ ಇತಿಹಾಸದಲ್ಲಿಯೆ ಮಹಿಳೆಯರಿಗೆ ಅವಕಾಶ ನೀಡಿದ್ದಾರೆ. ಜೆಡಿಎಸ್ ಅಭಿಮಾನಿಗಳು ಮತ್ತು ಕಾರ್ಯಕರ್ತರು ಈ ಬಾರಿ ಸಿಂದಗಿ ಮತ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಧ್ವಜವನ್ನು ಹಾರಿಸಲು ಸಿದ್ದರಾಗೋಣ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿ ಎಂದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಬಿ.ಜಿ.ಪಾಟೀಲ ಹಲಸಂಗಿ ಮಾತನಾಡಿ, ಸಿಂದಗಿ ಉಪ ಚುಣಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ಗಾಗಿ ಸುಮಾರು 8 ಜನ ಆಕಾಂಕ್ಷಿಗಳು ಇದ್ದರು ಅವರ ಒಮ್ಮತದ ಮೇರೆಗೆ ಮಹಿಳಾ ಅಭ್ಯರ್ಥಿಯ ಹೆಸರನ್ನು ರಾಜ್ಯ ನಾಯಕರು ಅಂತಿಮಗೊಳಿಸಿದ್ದಾರೆ. ಜೆಡಿಎಸ್ ಸರ್ಕಾರದಲ್ಲಿ ಸಿಂದಗಿ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆ, ಗುತ್ತಿಬಸವಣ್ಣ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳು ರಚಿತವಾದ ಪರಿಣಾಮ ಈ ಭಾಗ ಹಸಿರಿನಿಂದ ಕಂಗೊಳಿಸುತ್ತಿದೆ ಇದರಿಂದ ಅನೇಕ ಉದ್ಯೋಗಾವಕಾಶಗಳು ರೂಪಿತಗೊಂಡಿವೆ. ಸಿಂದಗಿ ಮತ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ ಬೇರೂರಲು ದಿ.ಆಯ್.ಬಿ.ಅಂಗಡಿ ಅವರ ಶ್ರಮವೂ ಕೂಡಾ ಇದೆ. ಆ ಹಿನ್ನೆಲೆಯಲ್ಲಿ ಆಯ್.ಬಿ.ಅಂಗಡಿ ಅವರ ಕುಟುಂಬ ರಾಜಕೀಯ ಮನೆತನದಿಂದಲೂ ಮತ್ತು ಸಾಮಾಜಿಕ ,ಶೈಕ್ಷಣಿಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ ಆ ಮನೆತನದ ಸೊಸೆ ನಾಜೀಯಾ ಅಂಗಡಿ ಅವರಿಗೆ ಟಿಕೇಟ್ ನೀಡಿದ್ದು ನಮಗೆಲ್ಲ ಸಂತಸ ತಂದಿದೆ. ಜೆಡಿಎಸ್ ದಿಂದ ಅಧಿಕಾರವನ್ನು ಪಡೆದುಕೊಂಡು ಪಕ್ಷಾಂತರವಾದವರಿಗೆ ಈ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ದಾರೆ. ಮುಂಬರುವ 2023 ರ ವಿಧಾನಸಭಾ ಚುಣಾವಣೆಯಲ್ಲಿ ಮತ್ತೇ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅರವಿಂದ ಹಂಗರಗಿ, ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಪ್ರಕಾಶ ಹಿರೇಕುರುಬರ, ಸಿದ್ದನಗೌಡ ಪಾಟೀಲ ಮಾತನಾಡಿ, ಜೆಡಿಎಸ್ ಎಂದರೆ ಅಭಿವೃದ್ದಿ ಪರವಾದ ಪಕ್ಷವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನೇಕ ಸಮಸ್ಯೆಗಳ ಮಧ್ಯದಲ್ಲಿದ್ದರೂ ಸುಮಾರು 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಇತಿಹಾಸ. ಮಹಿಳೆಯರಿಗೆ ಶೇ33 ರಷ್ಟು ಚುನಾವಣೆಯಲ್ಲಿ ಸ್ಥಾನಮಾನ ನೀಡಲು ಸಮ್ಮತಿಸಿದ್ದಾರೆ ಇದು ಮುಂಬರುವ ಸಾರ್ವತ್ರಿಕ ಚುನಾವಣೆಗೂ ಅನ್ವಯವಾಗಲಿದೆ. ಸಿಂದಗಿ ಶಾಸಕ ದಿ.ಎಂ.ಸಿ.ಮನಗೂಳಿ ಅವರ ಸಾಧನೆಯನ್ನು ಮತ್ತು ಅವರ ಅಭಿವೃದ್ದಿ ಪರವಾಗಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯ ಪ್ರಚಾರವನ್ನು ಕೈಗೊಳ್ಳಲಿದ್ದೇವೆ. ಉಪ ಚುನಾವಣೆಗೆ ಸಂಭಂಧಿಸಿದಂತೆ ಜೆಡಿಎಸ್ ಪಕ್ಷದಿಂದ ಅ.7 ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದು ಆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಬಂಡೇಪ್ಪ ಕಾಂಶಪೂರೆ ಸೇರಿದಂತೆ ಅನೇಕ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಮ್.ಎನ್.ಪಾಟೀಲ, ಶಿವಾನಂದ ಕೋಟಾರಗಸ್ತಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸ್ನೇಹಲತಾ ಶೆಟ್ಟಿ, ರೇಣುಕಾ ಮಡಿವಾಳ, ಬಸವನಗೌಡ ಮೂಡಗಿ, ಕೌಸರ ಶೇಖ, ಜುಲ್ಪಿಕರ ಅಂಗಡಿ ಸೇರಿದಂತೆ ಅನೇಕರು ಇದ್ದರು.