Homeಸುದ್ದಿಗಳುಮಣ್ಣಿನ ಫಲವತ್ತತೆ ಸರ್ವಕಾಲಿಕವಾಗಿ ಉಳಿಯಬೇಕು- ಬಾಳಪ್ಪ ಬೆಳಕೂಡ

ಮಣ್ಣಿನ ಫಲವತ್ತತೆ ಸರ್ವಕಾಲಿಕವಾಗಿ ಉಳಿಯಬೇಕು- ಬಾಳಪ್ಪ ಬೆಳಕೂಡ

ಮೂಡಲಗಿ: ‘ಕೃಷಿಗೆ ಮೂಲವಾಗಿರುವ ಮಣ್ಣಿನ ಫಲವತ್ತತೆಯನ್ನು ರೈತರು ಸಾರ್ವಕಾಲಿಕವಾಗಿ ಉಳಿಸಿಕೊಂಡು ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಪಡೆದುಕೊಳ್ಳಬೇಕು’ ಎಂದು ಪ್ರದೇಶ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಾಳಪ್ಪ ಬಿ. ಬೆಳಕೂಡ ಹೇಳಿದರು.

ತಾಲ್ಲೂಕಿನ ರಾಜಾಪೂರ ಗ್ರಾಮದಲ್ಲಿ ಪ್ರದೇಶ ಕೃಷಿಕ ಸಮಾಜ ಗೋಕಾಕ ತಾಲ್ಲೂಕು ಘಟಕದಿಂದ ಆಯೋಜಿಸಿದ ರೈತ ದಿನಾಚರಣೆ ಹಾಗೂ ಮಣ್ಣು ಆರೋಗ್ಯ ಕುರಿತು ಚಿಂತನ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಭೂಮಿ ವಿಷಕಾರಿಯಾಗದಂತೆ ನೋಡಿಕೊಳ್ಳುವುದು ರೈತರ ಧರ್ಮವಾಗಬೇಕು ಎಂದರು.

ರೈತರು ದನಕರುಗಳನ್ನು ಸಾಕುವುದು ಮತ್ತು ಹೈನುಗಾರಿಕೆ ಮಾಡುವ ಮೂಲಕ ಸಾವಯವ ಕೃಷಿಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.

ತುಕ್ಕಾನಟ್ಟಿಯ ಬರ್ಡ್ಸ್ ಕೆವಿಕೆಯ ಐಸಿಎಆರ್ ಕೃಷಿ ವಿಜ್ಞಾನಿ ಡಾ. ಮಾರುತಿ ಮಳವಾಡೆ ಮಾತನಾಡಿ, ರೈತರು ಮಣ್ಣಿನಲ್ಲಿರುವ ಪೋಷಕಾಂಶಗಳ ಅನುಗುಣವಾಗಿ ಬೆಳೆಗಳನ್ನು ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು ಎಂದರು.

ಭೂಮಿಯ ಮಣ್ಣು, ಹವಾಗುಣ ಮತ್ತು ನೀರು ಇವುಗಳ ಅನುಸರಿಸಿ ಕೃಷಿ ಮಾಡಬೇಕು. ಸವಳು, ಜವಳು ಭೂಮಿ ಬಗ್ಗೆ ಅರಿಯಬೇಕು. ರೈತರು ತಮ್ಮ ಭೂಮಿಯ ಬಗ್ಗೆ ಅರಿತು ಬೆಳೆಗಳನ್ನು ಬೆಳೆದರೆ ಉತ್ತಮ ಫಸಲು ದೊರೆಯುತ್ತದೆ ಎಂದರು.

ಕೃಷಿ ವಿಜ್ಞಾನಿ ಡಾ. ಧನಂಜಯ ಚೌಗಲಾ ಮಾತನಾಡಿ, ಆಧುನಿಕ ಕೃಷಿ ಪದ್ದತಿಗಳಲ್ಲಿ ಇರುವ ನ್ಯೂನತೆಗಳನ್ನು ರೈತರು ಅರಿಯಬೇಕು. ಮಣ್ಣಿನ ಫಲವತ್ತತೆ ವೃದ್ಧಿಗಾಗಿ ಹೈನುಗಾರಿಕೆಯನ್ನು ಅನುಸರಿಬೇಕು ಎಂದು ಸಲಹೆ ನೀಡಿದರು.

ಕೃಷಿ ಸಹಾಯಕ ನಿರ್ದೇಶಕ ಎಂ.ಎಂ. ನದಾಫ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಜನಮಟ್ಟಿ, ಪ್ರಗತಿಪರ ರೈತ ರಾಜು ಬೈರುಗೋಳ ಮಾತನಾಡಿದರು.

ಅರಭಾವಿ ಕೃಷಿ ಅಧಿಕಾರಿ ಎಸ್.ಜಿ. ಗಮಾನಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಿದ್ರಾಯ ಮರಸಿದ್ದಪ್ಪಗೋಳ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಗೂರಪ್ಪ ಹಿಟ್ಟಣಗಿ, ವಿಠ್ಠಲ ಪಾಟೀಲ, ಗ್ರಾಮ ಪಂಚಾಯ್ತಿ ಸದಸ್ಯ ಬೈರು ಯಕ್ಕುಂಡಿ, ಪ್ರದೇಶ ಕೃಷಿಕ ಸಮಾಜದ ಗೋಕಾಕ ತಾಲ್ಲೂಕ ಅಧ್ಯಕ್ಷ ಅಶೋಕ ಗದಾಡಿ ಉಪಸ್ಥಿತರಿದ್ದರು.

ರಾಮಚಂದ್ರ ಗುಂಡಾಪಗೋಳ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group