ಸಿಂದಗಿ: ಕವಿಗಳಿಗೆ ವಸಂತ ಋತು ಪರ್ವಕಾಲವಿದ್ದಂತೆ ಪ್ರಕೃತಿ ಹೊಸ ಚಿಗುರಿನೊಂದಿಗೆ ವಧುವಿನಂತೆ ಕಂಗೊಳಿಸುವ ಕಾಲ. ಯುವ ಮನಸ್ಸುಗಳಲ್ಲಿಯೂ ನವನವೀನ ಭಾವನೆಗಳು ಚಿಗುರೊಡೆದು ಕವಿತೆ ರಚಿಸಲು ಪ್ರೇರೇಪಿಸುತ್ತದೆ ಎಂದು ಸಿದ್ಧೇಶ್ವರ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಗಿರಿಜಾ ಮಾಲಿಪಾಟೀಲ ಹೇಳಿದರು.
ಪಟ್ಟಣದ ಎಬಿಸಿಡಿ ನೃತ್ಯ ತರಬೇತಿ ಕೇಂದ್ರದಲ್ಲಿ ಮಂದಾರ ಪ್ರತಿಷ್ಠಾನ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ವಸಂತ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕವಿಗಳಿಗೆ ಸೂಕ್ಷ್ಮಸಂವೇದಿ ಮನಸ್ಸಿರಬೇಕು ಭಾಷೆಯ ಬಳಕೆ ಸಾಹಿತ್ಯದಲ್ಲಿ ಸಂಕೇತದಿಂದ ಸರಳತೆಗೆ ಸಾಗಬೇಕು ಅಂದಾಗ ಮಾತ್ರ ಜನಮನ ತಲುಪುವ ಕಾವ್ಯ ಹೊರಬರಲು ಸಾಧ್ಯ. ಕವಿಗಳು ಜ್ವಲಂತ ಘಟನಾವಳಿಗಳನ್ನೆ ಆಧರಿಸಿ ಬರೆಯುವ ಗದ್ಯ ಪದ್ಯಗಳು ಸಮಾಜದ ಓರೆ ಕೋರೆಗಳನ್ನು ತಿದ್ದುವ ಕಾರ್ಯ ಮಾಡುತ್ತವೆ. ಯುವಜನತೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗಿರುವದರಿಂದ ಮೊಬೈಲ್ ನಂತಹ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಮಿತವಾಗಿ ಬಳಸಿಕೊಳ್ಳಬೇಕು ಮೊದಲು ಪಾಲಕರು ಸಂಸ್ಕಾರವಂತರಾದರೆ ಯುವ ಪೀಳಿಗೆ ಸಂಸ್ಕಾರವಂತರಾಗಲು ಸಾಧ್ಯ ಹಾಗೆಯೇ ಮಹಿಳೆಯನ್ನು ಎರಡನೆ ದರ್ಜೆಯ ಪ್ರಜೆಯಂತೆ ಕಾಣುವುದನ್ನು ನಿಲ್ಲಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಹಾಗೂ ಎಲೆಮರೆಯ ಸಾಹಿತಿಗಳ ಸಾಹಿತ್ಯವನ್ನು ಲೋಕಾರ್ಪಣೆ ಮಾಡುವ ಕಾರ್ಯ ಮುಂಬರುವ ದಿನಗಳಲ್ಲಿ ತಾಲೂಕ ಸಾಹಿತ್ಯ ಪರಿಷತ್ತು ಸಾಹಿತ್ಯದ ಸರ್ವಪ್ರಕಾರಗಳನ್ನು ಉಳಿಸಿ ಬೆಳೆಸುವ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತದೆ. ಅದಕ್ಕೆ ಕನ್ನಡದ ಮನಸ್ಸುಗಳು ಸಹಕಾರವಿರಬೇಕೆಂದರು.
ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ಕಬೂಲ ಕೊಕಟನೂರ ಮಾತನಾಡಿ, ವಸಂತ ಋತು ಋತುಗಳ ರಾಜ. ಎಲ್ಲೆಲ್ಲೂ ನವ ಚೈತನ್ಯ ತುಂಬಿ ನಿಂತ ಸಸ್ಯರಾಶಿ ಕವಿಗಳಿಗೆ ಆನಂದ ನೀಡುತ್ತದೆ ಆದ್ದರಿಂದ ವಸಂತ ಹೆಚ್ಚು ಪ್ರಿಯವಾದ ಋತು ಆ ನಿಟ್ಟಿನಲ್ಲಿ ಈ ವಸಂತ ಕವಿಗೋಷ್ಠಿ ಹೆಚ್ಚು ಪ್ರಸ್ತುತವೆನಿಸುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಭೀಮಾಶಂಕರ ಮಠದ ದತ್ತ ಯೋಗಿಶ ಮಹಾರಾಜರು, ಮೂರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ಸಿದ್ಧಪ್ಪ ಕಾರಿಮುಂಗಿ, ಸಿದ್ಧಲಿಂಗ ಚೌಧರಿ, ಆನಂದ ಶಾಬಾದಿ ವೇದಿಕೆ ಮೇಲಿದ್ದರು.
ಕವಿಗೋಷ್ಠಿಯಲ್ಲಿ ರಾಚು ಕೊಪ್ಪ, ಕೆ.ಜಿ ಹತ್ತಳ್ಳಿ, ಎಸ್.ವಿ.ಕುಲಕರ್ಣಿ, ಎಮ್. ಎಚ್.ದರಿ, ಸಾಯಬಣ್ಣ ಮಾದರ, ಮುತ್ತು ಕುಂಟೊಜಿ, ಸಿದ್ಧಲಿಂಗ ಚೌಧರಿ, ಮಾಹಾಂತೇಶ ನೂಲನ್ನವರ, ಶಿವಕುಮಾರ ಶಿವಸಿಂಪ್ಪಿಗೇರ, ಸೋಮಶೇಖರ, ಧಶರಥ ದೊಡಮನಿ, ಸಿದ್ರಾಮಯ್ಯ ಆಸಂಗಿಹಾಳ ಸೇರಿದಂತೆ 20ಕ್ಕು ಹೆಚ್ಚು ಕವಿಗಳು ಕವನ ವಾಚಿಸಿದರು.
ಬಸವರಾಜ ಅಗಸರ ನಿರೂಪಿಸಿದರು, ಪವನ ಕುಲಕರ್ಣಿ ಸ್ವಾಗತಿಸಿದರು, ಆನಂದ ಶಾಬಾದಿ ವಂದಿಸಿದರು. ಎಸ್.ಎಮ್.ಮಸಳಿ, ಪ್ರದೀಪ ಕತ್ತಿ, ಡಾ|| ಪ್ರಕಾಶ, ಜ್ಞಾನೇಶ, ಪಿ.ಎಮ್. ಮಡಿವಾಳರ, ಸಾಯಬಣ್ಣ ದೇವರಮನಿ, ವೀಣಾ ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.