ಬನವಾಸಿ: ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಲಸಿಕೆ ಪೂರೈಕೆಯಾಗದೇ ಬನವಾಸಿ ಭಾಗದ ಜನತೆ ಲಸಿಕೆಯಿಂದ ವಂಚಿತರಾಗಿದ್ದಾರೆ. ಕೂಡಲೇ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಲಸಿಕೆ ಪೂರೈಕೆ ಮಾಡಬೇಕು ಎಂದು ಶಿರಸಿ ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಆಗ್ರಹಿಸಿದ್ದಾರೆ.
ಅವರು ಗುರುವಾರ ಪತ್ರಿಕೆಯೊಂದಿಗೆ ಮಾತನಾಡಿ, ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭದಲ್ಲಿ ಲಸಿಕೆ ಸ್ವಲ್ಪ ಪ್ರಮಾಣದಲ್ಲಿ ಬಂದಿತ್ತಾದರೂ, ಆ ಸಂದರ್ಭದಲ್ಲಿ ಲಸಿಕೆ ಬಗ್ಗೆ ಅಷ್ಟೊಂದು ಪ್ರಚಾರವಿಲ್ಲದೇ ಜನ ಅದರತ್ತ ಹೋಗಲು ಸಾಧ್ಯವಾಗಿಲ್ಲ. ಆ ಸಂದರ್ಭದಲ್ಲಿ ಕೆಲವೇ ಕೆಲವು ಜನ ಮಾತ್ರ ಮೊದಲ ಲಸಿಕೆ ಪಡೆದಿದ್ದಾರೆ.
ಮೊದಲ ಲಸಿಕೆ ಪಡೆದು ಈಗಾಗಲೇ ಎರಡು ತಿಂಗಳು ಕಳೆದಿದ್ದು ಅವರಿಗೆ ಎರಡನೇ ಲಸಿಕೆ ಸಿಗಲೇ ಇಲ್ಲ. ಅದರಲ್ಲೂ ಬನವಾಸಿ ಭಾಗದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬನವಾಸಿ, ಗುಡ್ನಾಪುರ, ಭಾಶಿ ಸೇರಿದಂತೆ 18000 ಮಿಕ್ಕಿದ ಜನಸಂಖ್ಯೆ ಇದೆ.
ಇಷ್ಟಾದರೂ ಕೂಡ ಈ ಭಾಗದಲ್ಲಿ ಆರೋಗ್ಯ ಇಲಾಖೆ ಲಕ್ಷ್ಯ ವಹಿಸಿದೇ ಇರುವುದು ದುರದೃಷ್ಟಕರ ಕೂಡಲೇ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆ ಪೂರೈಸಿ, ಜನರಿಗೆ ಮಾಹಿತಿ ನೀಡಲು ಆಗ್ರಹಿಸಿದ್ದಾರೆ.