ಸಿಂದಗಿ: ಜುಲೈ 19 ಹಾಗೂ 22 ರಂದು ನಡೆಯುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ -19 ರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವಂತೆ ಕ್ರಮ ವಹಿಸಲು ಪರೀಕ್ಷೆಯ ಅಧೀಕ್ಷಕರು ಶಾಲಾ ಮುಖ್ಯಗುರುಗಳಿಗೆ ಸೂಚಿಸಬೇಕು ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ ಅವರು ಹೇಳಿದರು.
ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಜುಲೈ 19 ಹಾಗೂ 22 ರಂದು ನಡೆಯುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಪೂರ್ವ ಸಿದ್ದತೆಯ ಮುಖ್ಯ ಅಧೀಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ನಡೆಯುವ ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ವಾಹನ ಸೌಲಭ್ಯ ಪಡೆಯಬಹುದು ಪರೀಕ್ಷೆಯ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ ವಾಯ್ ದೇವಣಗಾಂವ ಮಾತನಾಡಿ, ಸಿಂದಗಿ ನಗರದ 7 ಪರೀಕ್ಷಾ ಕೇಂದ್ರಗಳಿದ್ದು ಅಧೀಕ್ಷಕರು ಪರೀಕ್ಷಾ ಕೇಂದ್ರಗಳನ್ನು ಪೂರ್ವ ತಯಾರಿ ಹಾಗೂ ಎಸ್ಓಪಿ ಪ್ರಕಾರ ಸಿದ್ದತೆ ನಡೆಸಲು ಸಂಪೂರ್ಣ ಮಾಡಿಕೊಳ್ಳಬೇಕು ಅಲ್ಲದೆ ಪೂರ್ವಭಾವಿ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿ ಎಂದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ, ಆರೋಗ್ಯಾಧಿಕಾರಿ ಡಾ. ಎಂ.ಬಿ.ಚೌಡಕಿ ವೇದಿಕೆ ಮೇಲಿದ್ದರು.
ಶಿಕ್ಷಣ ಸಂಯೋಜಕರಾದ ಆನಂದ ಮಾಡಗಿ, ಎಚ್.ಎಂ.ಬಡೇಘರ ನಿರೂಪಿಸಿದರು. ಸುಧೀರ ಕಮತಗಿ ಸ್ವಾಗತಿಸಿದರು. ಸಂಗು ಮಲ್ಲೇದ ವಂದಿಸಿದರು.