ಹಿಜಾಬ್ ಧರಿಸಿಯೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ; ಕೋರ್ಟ್ ಆದೇಶಕ್ಕೆ ಕಿಮ್ಮತ್ತಿಲ್ಲ
ಬೀದರ: ಮಾನ್ಯ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡುವುದಿಲ್ಲ ಎಂಬುದಾಗಿ ಬೀದರ ಜಿಲ್ಲಾಧಿಕಾರಿ ಹೇಳಿದ್ದರೂ ಅದನ್ನು ಉಲ್ಲಂಘಿಸಿ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಪರೀಕ್ಷೆ ಬರೆದಿದ್ದು ಕಂಡುಬಂದಿದೆ.
ಬೀದರನ ಓಲ್ಡ್ ಸಿಟಿಯ ಸಿದ್ದಿ ತಾಲೀಮ್ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಈ ಪ್ರಕರಣ ನಡೆದಿದ್ದು ಈ ಮೊದಲು ಪರೀಕ್ಷಾ ಕೇಂದ್ರಕ್ಕೆ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳು ಬರುತ್ತಾರೆ ಹಿಜಾಬನ್ನು ಪರೀಕ್ಷಾ ಕೇಂದ್ರದ ಹೊರಗಡೆಯೇ ತೆಗೆಯುತ್ತಾರೆ ಎಂಬುದಾಗಿ ಪ್ರಾಂಶುಪಾಲರು ಹೇಳಿದ್ದರು ಆದರೆ ಅದು ಸುಳ್ಳಾಗಿದೆ.
ಖುದ್ದು ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘನ್ನವರ ಅವರೇ ಅಲ್ಲಿ ಬೀಡು ಬಿಟ್ಟಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ. ಅಲ್ಲದೆ ನಿನ್ನೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಕೂಡ ಮಾತನಾಡಿ, ಪರೀಕ್ಷೆಯಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ ನ್ಯಾಯಾಲಯದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವುದು ಎಂದಿದ್ದರು.
ಲಾಠಿ ರುಚಿ ತೋರಿಸಿದ ಪೊಲೀಸರು:
ಇತ್ತ ಬೀದರನ ಓಲ್ಡ್ ಸಿಟಿಯ ಚಿತ್ತೇಖಾನ್ ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಪರೀಕ್ಷಾ ಕೇಂದ್ರದತ್ತ ಹೊರಟಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಬೇಕಾಯಿತು.
ಸೂಕ್ಷ್ಮ ಪ್ರದೇಶಗಳಲ್ಲಿ ಡಿವೈಎಸ್ಪಿ ಸತೀಶ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ ಕೈಗೊಂಡಿದೆ. ಪರೀಕ್ಷಾ ಕೇಂದ್ರದಿಂದ ೨೦೦ ಮೀಟರ್ ಸುತ್ತಳತೆಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿದೆ.
೨೮ ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ:
ನಿನ್ನೆ ಪರೀಕ್ಷೆಯ ಬಗ್ಗೆ ಎಲ್ಲಾ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯವರು, ಪರೀಕ್ಷೆಯ ಹಿನ್ನೆಲೆಯಲ್ಲಿ ಎಸ್ಪಿ, ಜಿಪಂ ಸಿಎಸ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರತಿ ಪರೀಕ್ಷಾ ಕೇಂದ್ರದ ಸುತ್ತಲೂ ಸೆ.೧೪೪ ಜಾರಿ ಮಾಡಿರುವುದಾಗಿ ಹೇಳಿದರು.
ಈ ಸಲ ಜಿಲ್ಲೆಯಲ್ಲಿ ೨೯೭೭೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಅದರಲ್ಲಿ ೧೫೭೮೮ ಬಾಲಕರು, ೧೩೯೯೦ ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ ಒಟ್ಟು ೧೨೪ ಕೇಂದ್ರಗಳಿವೆ, ೧೪೮೮ ಪರೀಕ್ಷಾ ಕೊಠಡಿಗಳು ಹಾಗೂ ೧೬೩೬ ಮೇಲ್ವಿಚಾರಕರು ಪರೀಕ್ಷೆಯಲ್ಲಿ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ