ಕಥೆಗಳು ಸೃಜನಶೀಲ ಮನಸ್ಸಿನ ಪ್ರತಿಬಿಂಬಗಳು.ಬದುಕಿನ ಪ್ರಾತಿನಿಧಿತ್ವವೇ ಸಾಹಿತ್ಯ -ಡಾ. ಶಶಿಕಾಂತ ಪಟ್ಟಣ ಅಭಿಮತ

Must Read

ಇದೇ ಶುಕ್ರವಾರ ದಿ. 24 ರಂದು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ‘ಯಶೋದಾ ಬಾಯಿ ಕಾಗತಿ ದತ್ತಿನಿಧಿ’ ಹಾಗೂ ರಾಜನಂದಾ ಘಾರ್ಗಿ ಅವರ ‘ಅವಾಂತರ ‘ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚುತ್ತಿದೆ. ಒಬ್ಬರಿಂದ ಒಬ್ಬರು ಪ್ರೇರಣೆಗೊಂಡು ಸಾಹಿತ್ಯಕ್ಷೇತ್ರ ಬೆಳೆಯುತ್ತಿದೆ ಎಂದರು.

‘ಅವಾಂತರ’ ಕೃತಿ ಲೋಕಾರ್ಪಣೆ ಮಾಡಿದ ಪುಣೆಯ ಬಸವ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಮಾತನಾಡಿ, ಕಥೆಗಳು ಸೃಜನಶೀಲ ಮನಸ್ಸಿನ ಪ್ರತಿಬಿಂಬಗಳು. ಬದುಕಿನ ಪ್ರಾತಿನಿಧಿತ್ವ ಸಾಹಿತ್ಯ. ಎಲ್ಲಿಯವರೆಗೆ ಸಾಹಿತಿಗಳು ಇರುತ್ತಾರೋ ಇತಿಹಾಸಗಳು ನಿರ್ಮಾಣ ಆಗುತ್ತಾ ಹೋಗುತ್ತವೆ.

ಕನ್ನಡದ ಕಥೆಗಳ ಕಥಾವಸ್ತು, ಪಾತ್ರನಿರ್ವಹಣೆ, ಸಾರ,ಸತ್ವ, ಸಂವೇದನೆ ಪಾಶ್ಚಾತ್ಯ ಕಥೆಗಳನ್ನು ಮೀರಿಸುವಂತಿವೆ. ಭಾಷೆ ಸಾಹಿತ್ಯದ ಅಧ್ಯಯನ ಇದೀಗ ಮೊಬೈಲ್ ಯುಗದಲ್ಲಿ ಸೊರಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ಕೃತಿ ಪರಿಚಯಿಸಿದ ಸಾಹಿತಿ ಡಾ. ನಿರ್ಮಲಾ ಬಟ್ಟಲ ಮಾತನಾಡಿ ಕತೆ ಹೆಣೆಯುವುದು ಕಷ್ಟದ ಕೆಲಸ. ಕಷ್ಟಗಳ ಮೇರೆಗಳನ್ನು ಮೀರಿ ಇಂದು ಕಥೆಗಾರ್ತಿಯರು ಬೆಳೆಯುತ್ತಿದ್ದಾರೆ.

ಘಾರ್ಗಿ ಯವರು ತಮ್ಮ ಸುತ್ತಲಿನ ಆಗುಹೋಗುಗಳು, ಕೌಟುಂಬಿಕ, ಸಾಮಾಜಿಕ, ಹೆಣ್ಣು ಭ್ರೂಣಹತ್ಯೆ, ವ್ಯಕ್ತಿಪರಿಚಯ, ಆತ್ಮನಿವೇದನೆ, ಜೀವನದ ಸಾರ್ಥಕತೆ ಎಂದರೇನು? ಎಂಬುದರ ಕುರಿತು ಮನಮುಟ್ಟುವಂತೆ ಕಥೆಗಳನ್ನು ಹೆಣೆದಿದ್ದಾರೆ. ಹೆಣ್ಣಿನ ಮನದ ಭಾವವನ್ನು ತೋರುವ ಮತ್ತು ಸಾಮಾಜಿಕ ಜಾಗೃತಿಯ ಮತ್ತು ಹಸಿವು ಯಾರನ್ನು ಹೇಗೆ ಕಾಡುತ್ತದೆ ಎಂದು ವಿವರಿಸುವ ಕತೆಗಳು ಕಥಾಸಂಕಲನದಲ್ಲಿ ಓದುಗರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತವೆ ಎಂದು ಕೃತಿಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಜಿ. ರಾಮಯ್ಯ ಅವರು ಮಾತನಾಡಿ ಸಾಹಿತ್ಯ ಎನ್ನುವುದು ಒಂದು ತಪಸ್ಸು. ಈ ತಪಸ್ಸು ಓದುಗರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ತಾವು ಬರೆಯುತ್ತಿರುವ ಕೃತಿಗಳನ್ನು ಸರಕಾರದ ಸೌಲಭ್ಯಗಳನ್ನು ಪಡೆದು ಸುಲಭವಾಗಿ ಓದುಗರಿಗೆ ತಲುಪುವಂತೆ ಮಾಡಬೇಕು ಎಂದು ಸರ್ಕಾರದ ಸೌಲಭ್ಯಗಳನ್ನು ವಿವರಿಸಿದರು. ಕಾರ್ಯಕ್ರಮದ ದತ್ತಿ ದಾನಿಗಳು ಮತ್ತು ಸಾಹಿತಿ ರಾಜನಂದಾ ಘಾರ್ಗಿ ಅವರು ಮಾತನಾಡಿ ತಮ್ಮ ಅಜ್ಜಿ ಯಶೋದಬಾಯಿ ಕಾಗತಿಯವರನ್ನು ನೆನೆದು ಹಿರಿಯರ ಧೃಡತೆ ಸ್ವಾಭಿಮಾನಗಳ ಪ್ರಭಾವದಿಂದಲೇ ಒಳ್ಳೆಯ ಮೌಲ್ಯಗಳು ಬಂದಿವೆ.

ಹಿರಿಯ ಜೀವಿಗಳ ಆಶೀರ್ವಾದವೇ ನಾನು ಬೆಳೆಯಲು ಕಾರಣವಾಗಿದೆ ಎಂದು ನೆನೆದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ರತ್ನಪ್ರಭಾ ಬೆಲ್ಲದ, ಅಕ್ಕಮಹಾದೇವಿ ತೆಗ್ಗಿ, ಅಕ್ಕಮಹಾದೇವಿ ಹುಲಗಬಾಳಿ, ದೀಪಿಕಾ ಚಾಟೆ, ಜ್ಯೋತಿ ಬದಾಮಿ, ಜಯಶೀಲಾ ಬ್ಯಾಕೋಡ,ಪ್ರೇಮಾ ತಹಸಿಲ್ದಾರ, ಲಲಿತಾ ಪರ್ವತ ರಾವ, ಪಾರ್ವತಿ ಪಿಟಗಿ, ಸುಧಾ ಪಾಟೀಲ, ಲಲಿತಾ ಕ್ಯಾಸನ್ನವರ, ದಾನಮ್ಮ ಜಳಕಿ, ಶೈಲಜಾ ಬಿಂಗೆ, ಶ್ವೇತಾ ನರಗುಂದ, , ಹಿರಿಯ ಸಾಹಿತಿ ಪತ್ರಕರ್ತರಾದ ಎಲ್.ಎಸ್. ಶಾಸ್ತ್ರಿ, ರವಿಕಿರಣ ಭಿಕಾಜಿ, ನಾರಾಯಣ ಘಾರ್ಗಿ,ಸಿ.ಕೆ. ಜೋರಾಪುರ, ಎಂ.ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಸಾಹಿತ್ಯಾಸಕ್ತರು ಮತ್ತು ಲೇಖಕಿಯರ ಸಂಘದ ಸದಸ್ಯೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಾಹಿತಿ ಆಶಾ ಯಮಕನಮರಡಿ ಪ್ರಾರ್ಥಿಸಿದರು. ಹಮೀದಾ ಬೇಗಂ ದೇಸಾಯಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಇಂದಿರಾ ಮೋಟೆಬೆನ್ನೂರು ವಂದಿಸಿದರು. ಮತ್ತು ಸುನಂದಾ ಎಮ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group