ಹೊಸದಿಲ್ಲಿ – ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ ಸಿಕ್ಕಿದ್ದು ಸಚಿವಗಿರಿ ನೀಡುವಲ್ಲಿ ಮೋದಿ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ.
ಒಕ್ಕಲಿಗ, ಕರಾವಳಿ ಹಾಗೂ ಮಹಿಳಾ ಕೋಟಾದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಸಚಿವ ಸ್ಥಾನ ಸಿಕ್ಕಿದೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕದ ನಾಯಕಿ ಎಂಬ ಹೆಸರಿನೊಂದಿಗೆ ಹಾಗೂ ಈಗಾಗಲೇ ಸಚಿವೆಯಾಗಿ ಶೋಭಾ ಅವರು ಅನುಭವ ಹೊಂದಿದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆಯೆನ್ನಲಾಗಿದೆ.
ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ಬೀದರ ಸಂಸದ ಲಿಂಗಾಯತ ಪ್ರಮುಖ ನಾಯಕ ಭಗವಂತ ಖೂಬಾ ಅವರಿಗೂ ಸಚಿವ ಸ್ಥಾನ ಸಿಕ್ಕಿದ್ದು ಖೂಬಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ತಾವು ಯಾವುದೇ ಖಾತೆ ನಿರೀಕ್ಷಿಸಿಲ್ಲ ಎಂದು ಹೇಳಿದ್ದಾರೆ.
ಇನ್ನು ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿಯವರಿಗೆ ದಲಿತ ಕೋಟಾದಲ್ಲಿ ಸಚಿವ ಸ್ಥಾನ ಸಿಕ್ಕಿದ್ದು ನಾರಾಯಣ ಸ್ವಾಮಿ ಭಾವುಕರಾಗಿದ್ದಾರೆ. ತಮಗೆ ಅನಿರೀಕ್ಷಿತವಾಗಿ ಸಚಿವ ಸ್ಥಾನ ದೊರಕಿದ್ದು ಕೆಳಮಟ್ಟದವರನ್ನು ಮೋದಿ ಯಾವ ರೀತಿ ಗೌರವಿಸುತ್ತಾರೆಯೆಂಬುದು ಇದರಿಂದ ತಿಳಿಯುತ್ತದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ ೨೮ ಸಚಿವ ಸ್ಥಾನಗಳನ್ನು ತುಂಬಲಾಗಿದ್ದು ೧೪ ಜನ ಯುವ ಸಚಿವರಿದ್ದಾರೆ.