ಮೂಡಲಗಿ: ‘ವಿಶ್ವವು ಭಾರತದತ್ತ ನೋಡುವಂತೆ ಸ್ವಾಮಿ ವಿವೇಕಾನಂದರು ಸಾರಿದ ಸಮನ್ವಯತೆಯ ತತ್ವ, ಸಿದ್ದಾಂತಗಳು ಅತ್ಯಂತ ಪ್ರಭಾವವನ್ನು ಬೀರಿವೆ’ ಎಂದು ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಚರಿಸಿ, ಸ್ವಾಮಿ ವಿವೇಕಾನಂದರ 159ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಜಗತ್ತು ಕಂಡ ಅಪ್ರತಿಮ ಯುಗಪುರುಷ ಎಂದು ಬಣ್ಣಿಸಿದರು.
ಯುವಕರು ದೌರ್ಬಲ್ಯ, ನಿರುತ್ಸಾಹ ಮತ್ತು ನಿರ್ಲಕ್ಷತೆ, ಜಿಗುಪ್ಸೆಗಳನ್ನು ದೂರವಿಟ್ಟು ಗುರಿ ಮುಟ್ಟುವವರೆಗೆ ಮುನ್ನಗ್ಗಬೇಕು ಎನ್ನುವ ಅವರ ಶಕ್ತಿಶಾಲಿಯಾದ ಮಾತುಗಳು ಶಾಶ್ವತ ಮೌಲ್ಯಗಳಾಗಿವೆ ಎಂದರು.
ಸ್ವಾಮಿ ವಿವೇಕಾನಂದರು ಯುವಕರ ಮೇಲೆ ಅಪಾರವಾದ ಭರವಸೆಯನ್ನು ಇಟ್ಟಿದ್ದರು. ಯುವಕರು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅನುಸರಿಸಿ ದೇಶಾಭಿಮಾನದೊಂದಿಗೆ ಸುಸಂಸ್ಕೃತ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಮುಖ್ಯ ಅತಿಥಿ ಲಯನ್ಸ್ ಪರಿವಾರ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ, ಸ್ವಾಮಿ ವಿವೇಕಾನಂದ ಕುರಿತಾದ ಪುಸ್ತಕಗಳನ್ನು ಓದುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಕೆ. ಕಂಕಣವಾಡಿ ಮಾತನಾಡಿ, ಲಯನ್ಸ್ ಕ್ಲಬ್ವು ಸಮಾಜ ಸೇವಾ ಕಾರ್ಯಗಳೊಂದಿಗೆ ರಾಷ್ಟ್ರೀಯ ವ್ಯಕ್ತಿಗಳ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಲತಾ ತಳವಾರ, ಅಕ್ಷತಾ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು.
ಡಾ. ಸಚಿನ ತಮ್ಮಣ್ಣವರ, ಮಹಾಂತೇಶ ಹೊಸೂರ, ಸಂಗಮೇಶ ಕೌಜಲಗಿ, ನಾಗರಾಜ ಎನ್.ವಿ, ರಿಯಾಜ ಜಿಯಾಜ ಇದ್ದರು.
ಬಿ.ಕೆ. ಬಡಗಣ್ಣವರ ನಿರೂಪಿಸಿದರು, ಎಲ್.ಬಿ. ಮನ್ನಾಪುರ ವಂದಿಸಿದರು.