spot_img
spot_img

ತೇರಾ ಬಾರಾ ತ್ರ್ಯಾಹತ್ತರ್ ! (ನಾಲ್ಕನೆಯ ಮತ್ತು ಕೊನೆಯ ಭಾಗ)

Must Read

- Advertisement -

ಉದ್ರಿಕ್ತ ಜನಜಂಗುಳಿ ಪೋಲೀಸ್ ಪೇದೆಯ ಬೆನ್ನು ಬೀಳುತ್ತಾರೆ. ಆತ ಓಡೋಡಿ ರಬಕವಿಯ ಪೋಲೀಸ್ ಔಟ್ ಪೋಸ್ಟ್ ನಲ್ಲಿ ಒಳಗೆ ಹೋಗುತ್ತಾನೆ.

ನೂರಾರು ಸಂಖ್ಯೆಯಲ್ಲಿ ಉದ್ರಿಕ್ತ ಜನರು ಪೋಲೀಸ್ ಪೇದೆಯನ್ನು ಹೊರಗೆ ಕಳಿಸುವಂತೆ ಒತ್ತಾಯಿಸುತ್ತಾರೆ.

ಗೇಟಿನಲ್ಲಿ ಪಿ.ಎಸ್.ಐ. ಸೋಮೈಯ ಎಂಬವರು ನಿಂತಿರುತ್ತಾರೆ. ಅವರ ಸೊಂಟದಲ್ಲಿದ್ದ ಪಿಸ್ತೂಲನ್ನು ಓವ೯ ಯುವಕನೊಬ್ಬ ಕಿತ್ತು ಕೊಳ್ಳುತ್ತಾನೆ. ಪುಣ್ಯಕ್ಕೆ ಅದರಲ್ಲಿ ಗುಂಡುಗಳು ಇದ್ದಿರಲಿಲ್ಲ. ಆ ಪಿಸ್ತೂಲನ್ನು ಕಸಿದ ನಂತರ ಆತ ಅಲ್ಲಿಂದ ಓಡಿ ಹೋಗುತ್ತಾನೆ.

- Advertisement -

ಗುಂಡು ಹಾರಿಸಿದ ಪೇದೆಯನ್ನು ಹೊರಗೆ ಕಳಿಸುವಂತೆ ಚೀರತೊಡಗುತ್ತಾರೆ.

ಕೊನೆಗೆ ಗುಂಡು ಹಾರಿಸಿದ ಪೋಲೀಸನು ತಾನಾಗಿಯೇ ಹೊರಗೆ ಬರುತ್ತಾನೆ. ಅವನು ಹೊರ ಬಂದ ಕೂಡಲೇ ಒಬ್ಬ ಅವನನ್ನು ಅವಾಚ್ಯ ಬೈಗುಳನ್ನು ಬೈಯುತ್ತಾ ಆತನ ಕಾಲಿಗೆ ಟಾಂಗ್ ಹಾಕಿ ಕೆಳಕ್ಕೆ ಬೀಳಿಸುತ್ತಾನೆ. ಅಷ್ಟರಲ್ಲಿ ಇನ್ನೊಬ್ಬ ಒಂದು ದೊಡ್ಡ ಕಲ್ಲಿನ ಶಾಬಾದಿ ಫರಸಿ ಎತ್ತಿ ಪೋಲೀಸ್ ಪೇದೆಯ ಎದೆಯ ಮೇಲೆ ಹಾಕುತ್ತಾನೆ.

ಪೋಲೀಸ್ ಪೇದೆಯ ಆಕ್ರಂದನ ಯಾರೂ ಕೇಳುವುದಿಲ್ಲ. ಯಾರೋ ಒಬ್ಬ ಬಾಟಲಿಯಲ್ಲಿ ತುಂಬಿ ತಂದಿದ್ದ ಘಾಸಲೇಟ್ ಎಣ್ಣೆ ಆತನ ಮೇಲೆ ಸುರುವುತ್ತಾನೆ.

- Advertisement -

ಭಗ್ ಅಂತ ಬೆಂಕಿ ಹತ್ತಿ ಹೊತ್ತಿಕೊಂಡು ಧಗಧಗನೆ ಉರಿಯತೊಡಗುತ್ತದೆ. ಹೀಗೆ ಉದ್ರಿಕ್ತ ಜನರು ಪೋಲೀಸ್ ಪೇದೆಯನ್ನು ಸಜೀವ ದಹಿಸುತ್ತಾರೆ. ಕೊನೆಗೆ ಆತನ ದೇಹವೆಲ್ಲ ಸುಟ್ಟು ಕೆಳಗೆ ಎರಡು ಕಾಲು ಉಳಿದಿರುತ್ತವೆ. ಔಟ್ ಪೋಸ್ಟ್ ನಲ್ಲಿ ಇದ್ದ ಬೇರೆ ಮೂರು ಜನ ಪೋಲೀಸ್ ಸಿಬ್ಬಂದಿ ಅಲ್ಲಿಂದ ಓಡಿ ಹೋಗುತ್ತಾರೆ.

ಉದ್ರಿಕ್ತ ಜನಜಂಗುಳಿಯ ರೋಷಕ್ಕೆ ಮಾಂಡವಕರ ಫ್ಯಾಕ್ಟರಿಯಲ್ಲಿ ಶಂಕರರಾವ್ ಮಾಂಡವಕರ ಹೃದಯಾಘಾತದಿಂದ ಅಸು ನೀಗಿದಾಗ ಅಲ್ಲಿಂದ ಉಳಿದ ಕಿಡಗೇಡಿಗಳು ಪಲಾಯನಗೈದರು. ಇತ್ತ ಪೊಲೀಸ್ ಔಟ್ ಪೋಸ್ಟ್ ಹೊರಗೆ ಪೋಲಿಸ್ ಕಾನ್ಸಟೇಬಲ್ ಅಸುನೀಗಿದ ನಂತರ ಅಲ್ಲಿಂದಲೂ ಜನರು ಖಾಲಿಯಾದರು. ಉದ್ರಿಕ್ತ ಜನರ ರೋಷಕ್ಕೆ ಹೆದರಿ ಅಲ್ಲಿಂದ ಓಡಿ ಹೋಗಿದ್ದ ಉಳಿದ ಮೂರು ಜನ ಪೋಲಿಸರು ವಾಪಸ್‌ ಬಂದರು.

ತೇರದಾಳ ಪೊಲೀಸ ಠಾಣೆಯ ಪಿ.ಎಸ್. ಐ. ಸೋಮೈಯ ಅಲ್ಲಿಯೇ ಇದ್ದರು. ಅವರ ಸೊಂಟದಲ್ಲಿದ್ದ ಪಿಸ್ತೂಲನ್ನು ಅಪಹರಿಸಿದವನನ್ನು ರಾವಳ ಓಣಿಯಲ್ಲಿಯ ಹದಿನೇಳು ವರ್ಷದ ಯುವಕನ ಕಡೆಯಿಂದ ಜಪ್ತಿ ಮಾಡಿದ್ದರು.

ವಿಜಾಪುರದಿಂದ ಎರಡು ಕಾಯ್ದಿಟ್ಟ ಪೊಲೀಸ್ ಪಡೆಗಳ ತುಕಡಿಗಳು ಬಂದವು. ಅವರೆಲ್ಲ ಬಂದ ಕೂಡಲೇ ರಸ್ತೆಯಲ್ಲಿ ಯಾರು ಕಾಣಿಸುತ್ತಾರೆಯೋ ಅವರನ್ನೆಲ್ಲಾ ಹಿಡಿದು ಒಯ್ಯ ತೊಡಗಿದರು.

ಕೆಲವರ ಮನೆಗಳ ಬಾಗಿಲನ್ನು ತೆಗೆಯಿಸಿ ಅಲ್ಲಿ ಸಿಕ್ಕವರನ್ನು ಕರೆದುಕೊಂಡು ಹೋದರು.

ಸುಮಾರು 167 ಜನರನ್ನು ಸಾಮೂಹಿಕವಾಗಿ ಗಲಭೆಯಲ್ಲಿ ಭಾಗವಹಿಸಿ ಪೊಲೀಸ್ ಪೇದೆಯ ಸಾವಿಗೆ ಕಾರಣವಾದ ಕೇಸನ್ನು ದಾಖಲಿಸಿದರು. ಗಲಭೆಯಲ್ಲಿ ನೊಂದವರಿಗೆ ಸಾಂತ್ವನ ಹೇಳಲು ಕೆಲ ದಿನಗಳ ನಂತರ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಹಾಗೂ ಮಾಜಿ ಸಚಿವರಾಗಿದ್ದ ರಾಮಕೃಷ್ಣ ಹೆಗಡೆಯವರು, ಮಾಂಡವಕರರ ಮನೆಗೆ ಭೆಟ್ಟಿ ಕೊಟ್ಟರು. ( ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಇತ್ತು. )

ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆ ಅವರಿಗೆ ಆಗ ಎಲ್ಲರೂ ಲವ – ಕುಶ ಜೋಡಿ ಎಂದು ಕರೆಯುತ್ತಿದ್ದರು.

ಪಾಟೀಲ್ ಮತ್ತು ಹೆಗಡೆ ಅವರ ಜೊತೆಗೆ ರಬಕವಿಯ ಹಿರಿಯರಾದ ಸಂಗಪ್ಪ ಸಣಕಲ್, ವಾ. ಗೋ. ಕುಲಕರ್ಣಿ, ನಾಗಪ್ಪಣ್ಣ ದುರಡಿ , ಅಣ್ಣಪ್ಪ ಗುಣಕಿ, ಸಿದ್ದಪ್ಪ ರಾವಳ ಹೀಗೆ ಬಹಳಷ್ಟು ಜನ ಹಿರಿಯರು ಭಾಗವಹಿಸಿದ್ದರು.

ವೀರೇಂದ್ರ ಪಾಟೀಲರು ಶಂಕರರಾವ್ ಮಾಂಡವಕರರ ಹಿರಿಯ ಸಹೋದರರಾಗಿದ್ದ ದತ್ತೋಬಾ ಮಾಂಡವಕರರ ಕೈಗಳನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡು , ಹೆದರಬೇಡಿ ಸರ್ಕಾರದಿಂದ ನಿಮಗೆ ಆಗಿರುವ ಹಾನಿಯನ್ನು ತುಂಬಿಕೊಡಲು ಆಗ್ರಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಆದರೆ ಅಂಥ ದುರ್ಧರ ಪ್ರಸಂಗದಲ್ಲಿಯೂ ದತ್ತೋಬಾ ಮಾಂಡವಕರರು ಸರ್ಕಾರದ ಸಹಾಯವನ್ನು ನಯವಾಗಿ ತಿರಸ್ಕರಿಸಿದರು.

ಮುಂದೆ ಮೂರು ವರ್ಷಗಳ ಕಾಲ ಕೇಸು ನಡೆದು ಎಲ್ಲ ಆರೋಪಿಗಳು ನಿರ್ದೋಷ ಮುಕ್ತರಾದರು. ಇಲ್ಲಿ ಒಂದು ವಿಚಾರ ಎಂದರೆ, ಮರಾಠಿ ಭಾಷೆಯನ್ನು ಮನೆಯಲ್ಲಿ ಮಾತನಾಡುತ್ತಾರೆಂಬ ಕಾರಣಕ್ಕೆ ಮಾಂಡವಕರರ ಮೇಲೆ ಹಲ್ಲೆ ಆಗಿದೆ ಎಂದು ನಿಷ್ಕರ್ಶಕ್ಕೆ ಬಂದರೆ, ಮರಾಠಿ ಭಾಷೆಯನ್ನು ಮನೆಯಲ್ಲಿ ಮಾತನಾಡುವ ಇನ್ನೂ ಅನೇಕ ಮನೆತನಗಳು ರಬಕವಿಯಲ್ಲಿ ಇದ್ದವು. ಅವರಾರ ಮೇಲೂ ದಾಳಿಯಾಗಲಿಲ್ಲ !

ಹಾಗಾದರೆ ಮಾಂಡವಕರರೆ ಏಕೆ ಟಾರ್ಗೆಟ್ ಆದರು ಎಂದು ತಲೆ ಕೆರೆಸಿಕೊಂಡಾಗ, ಆ ದಾಳಿಯ ಹಿಂದೆ ಮರಾಠಿ – ಕನ್ನಡ ಭಾಷಾ ಪ್ರೇಮಕ್ಕಿಂತಲೂ ವ್ಯಾಪಾರದ ಈರ್ಷೆ ಆ ದಾಳಿಯ ಹಿಂದೆ ಇತ್ತೆಂಬ ಅಂಶ ಸ್ಪಷ್ಟವಾಗಿ ಕಾಣುತ್ತದೆ.

ಏಕೆಂದರೆ ಅಂದಿನ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯದ ಬಹುತೇಕ ನಗರಗಳಲ್ಲಿ ಮಾಂಡವಕರರ ಪತ್ತಲುಗಳಿಗೆ ಬಹಳಷ್ಟು ಬೇಡಿಕೆ ಇತ್ತು. ಅಲ್ಲಿಯ ಬಟ್ಟೆ ಅಂಗಡಿಗಳ ಎದುರಿಗೆ ಮರಾಠಿ ಭಾಷೆಯಲ್ಲಿ ” ಇಥೆ ಮಾಂಡವಕರಾಂಚೆ ಪಾತಳೆ ಮಿಳತಾತ ” ಅಂದರೆ ಕನ್ನಡದಲ್ಲಿ ” ಇಲ್ಲಿ ಮಾಂಡವಕರರ ಪತ್ತಲು ಸಿಗುತ್ತವೆ ” ಎಂಬ ಆಶಯದ ಬೋರ್ಡನ್ನು ಇಟ್ಟಿರುತ್ತಿದ್ದರಂತೆ !

ಹೀಗಾಗಿ ಇಡೀ ಮಹಾರಾಷ್ಟ್ರ ದ ತುಂಬಾ ಅವರ ವ್ಯಾಪಾರ ವಹಿವಾಟು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿತ್ತು. ಕಾರಣ ಅವರ ಆಸ್ತಿ ಪಾಸ್ತಿಗೆ ಹಾನಿ ಮಾಡಿದರೆ ಅವರನ್ನು ಬಗ್ಗು ಬಡೆಯಬಹುದು ಎಂಬ ದುಷ್ಟ ವಿಚಾರ ಗಲಭೆಕೋರರಲ್ಲಿ ಇದ್ದಿರಬಹುದು ಎಂದು ಹೇಳಲಾಯಿತು.

ಹೀಗೆ ” ತೇರಾ ಬಾರಾ ತ್ರ್ಯಾಹತ್ತರ್ ” ಗಲಭೆ ದೊಡ್ಡ ದುರಂತದಲ್ಲಿ ಕೊನೆಗೊಂಡಿತು.

ಅದೇ ದಿವಸ ಅಥಣಿ ಯಲ್ಲಿಯೂ ಕೂಡ ಹಲಗೆಕರ್ ಎಂಬ ಎಕ್ಸೈಜ್ ಗುತ್ತಿಗೆದಾರ ಬಂಧುಗಳನ್ನು ಕೂಡ ಸಜೀವವಾಗಿ ದಹಿಸಲಾಯಿತು.

ಸಮೀರವಾಡಿಯ ಸೋಮೈಯ ಸಕ್ಕರೆ ಕಾರ್ಖಾನೆಯಲ್ಲಿ ಕೂಡ ದಂಗೆಯಾಯಿತು !


– ನೀಲಕಂಠ ದಾತಾರ

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group