Homeಲೇಖನಆಚಾರ್ಯರು ಮತ್ತೆ ಹುಟ್ಟಿ ಬರಬೇಕು

ಆಚಾರ್ಯರು ಮತ್ತೆ ಹುಟ್ಟಿ ಬರಬೇಕು

ಶ್ರೀ ಕೃಷ್ಣನ ಕೊನೆಯ ಘಳಿಗೆಗಳು ‘ ಎಂಬ ಹೆಸರಿನ ಪುಸ್ತಕವೊಂದನ್ನು ನೋಡಿದಾಗ ಈ ಜಗತ್ತನ್ನೇ ನಡೆಸುವ ಆ ಪರಮಾತ್ಮ ಶ್ರೀ ಕೃಷ್ಣ ನಿಗೂ ಕೊನೆಯ ಘಳಿಗೆಯೆಂಬುದು ಇದೆಯಾ ಎಂಬ ಕುತೂಹಲದೊಂದಿಗೆ ಓದಲು ಆರಂಭಿಸಿದಾಗ ಮಹಾಭಾರತ ನಂತರದ ಕಾಲಘಟ್ಟಕ್ಕೆ ನಮಗರಿವಿಲ್ಲದಂತೆಯೇ ನಮ್ಮನ್ನು ಕರೆದೊಯ್ದ ಗ್ರಂಥವದು.

ಖಂಡಿತವಾಗಿ ಇಂಥದೊಂದು ಗ್ರಂಥ ಬರೆಯುವ ಸಾಮರ್ಥ್ಯವಿರುವುದು ಒಬ್ಬರಿಗೆ ಮಾತ್ರ. ವೃತ್ತಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದರೂ ಭಾರತೀಯ ಪೌರಾಣಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳ ಸಾರವನ್ನು ರಕ್ತಗತವಾಗಿಸಿಕೊಂಡವರಂತೆ ಪುರಾಣದ ಯಾವುದೇ ಘಟನೆಗಳನ್ನು, ಪುರಾಣದ ಯಾವುದೇ ದೇವಾನುದೇವತೆ, ಅತಿಮಾನುಷ ಶಕ್ತಿಗಳನ್ನು ನಿರ್ದಿಷ್ಟ ಗುಣಗಳೊಂದಿಗೆ ವರ್ಣನೆ ಮಾಡುವ ಶಕ್ತಿ ಇರುವುದು ನನ್ನ ಪ್ರಕಾರ ಪ್ರೊ. ಕೆ ಎಸ್ ನಾರಾಯಣಾಚಾರ್ಯ ಅವರೊಬ್ಬರಿಗೇ. ಶ್ರೀ ಕೃಷ್ಣನ ಕೊನೆಯ ಘಳಿಗೆಗಳು ಕೃತಿ ಓದುತ್ತಿದ್ದರೆ, ಮಹಾಪುರುಷ ಶ್ರೀ ಕೃಷ್ಣನ ಮಾನಸಿಕ ತೊಳಲಾಟ, ಆತನ ಪೂರ್ವಾಪರದ ಸವರ್ಣ ಚಿತ್ರಣ, ಗಾಂಧಾರಿಯ ಶಾಪಕ್ಕೆ ಒಳಗಾದಾಗ ಮಾನಸಿಕವಾಗಿ ಆಘಾತಗೊಂಡರೂ ಅದು ಪೂರ್ವ ನಿರ್ಧರಿತವೆಂಬಂತೆ ಹುಸಿ ನಗೆಯಲ್ಲೇ ಅದೃಷ್ಟವನ್ನು ಸ್ವೀಕರಿಸುವ ಕೃಷ್ಣನನ್ನು ಓದುಗರ ಮುಂದಿಡುವ ನಾರಾಯಣಾಚಾರ್ಯರು ಓದುಗರನ್ನೇ ದ್ವಾಪರಯುಗಕ್ಕೆ ಕರೆದೊಯ್ಯುತ್ತಾರೆ.

ಗಾಂಧಾರಿಯ ಶಾಪದಂತೆ ಯಾದವ ವಂಶದವರು ಕಲಹದಲ್ಲಿ ತೊಡಗುವುವದನ್ನು ರೋಮಾಂಚಕಾರಿಯಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಪ್ರೊ. ನಾರಾಯಣಾಚಾರ್ಯರು ದಾಯಾದಿ ಕಲಹದ ದುಷ್ಪರಿಣಾಮಗಳನ್ನು ನಮ್ಮ ಮುಂದಿಡುತ್ತಾರೆ. ಯಾದವರ ಕಲಹ, ಸ್ವ ನಾಶ ಹಾಗೂ ಶ್ರೀ ಕೃಷ್ಣನ ಕೊನೆಯ ಘಳಿಗೆಗಳ ಕಾಲಕ್ಕೆ ಮಧ್ಯಮ ಪಾಂಡವ ಅರ್ಜುನ ಪಡುವ ಸಂಕಟ, ಯಾದವ ಹೆಣ್ಣು ಮಕ್ಕಳ ರಕ್ಷಣೆಗೆ ಆತ ಪಡುವ ಪಡಿಪಾಟಲು ಎಲ್ಲವನ್ನು ಒಂದು ಚಿತ್ರದಂತೆ ಕಣ್ಣ ಮುಂದೆ ತಂದಿಡುವ ನಾರಾಯಣಾಚಾರ್ಯರ ಬರಹವನ್ನು ಓದುವುದೇ ಚಂದ.

ರಾಮಾಯಣ, ಮಹಾಭಾರತಗಳಲ್ಲಿ ಪಾತ್ರಗಳೆಲ್ಲದರ ಮಾನಸಿಕ ತುಮುಲಗಳನ್ನೊಳಗೊಂಡ ಪಾತ್ರ ಪ್ರಪಂಚ, ‘ ಆ ಹದಿನೆಂಟು ದಿನಗಳು ‘ ಎಂಬ ಮಹಾಭಾರತ ಯುದ್ಧವನ್ನು ವರ್ಣಿಸುವ ಕಾದಂಬರಿ, ‘ ಚಾಣಕ್ಯ’ನ ತಂತ್ರಗಳು …ಇಂಥವೇ ಹಲವು ಕಾದಂಬರಿಗಳಿಗೆ ಸಾಟಿಯೇ ಇಲ್ಲವೆನ್ನಬಹುದು. ರಾಮಾಯಣ ಮಹಾಭಾರತ ಕಾಲದ ಸಾವಿರಾರು ಹೆಸರುಗಳನ್ನು ಸ್ವಲ್ಪವೂ ಗೊಂದಲವಿಲ್ಲದೆ ಉಲ್ಲೇಖಿಸುವ ಅವರ ಸ್ಮರಣ ಶಕ್ತಿಗೂ ಅವರೇ ಸಾಟಿ.

ಸಂಪೂರ್ಣ ಸನಾತನಿಯಾಗಿ, ಭಾರತೀಯ ಸಂಸ್ಕೃತಿಯ ಹರಿಕಾರರಾಗಿದ್ದ ಪ್ರೊ. ಕೆ ಎಸ್ ನಾರಾಯಣಾಚಾರ್ಯರು ನಮ್ಮನ್ನಗಲಿದ್ದು ಸಾಂಸ್ಕೃತಿಕ ಲೋಕಕ್ಕಾದ ಆಘಾತ, ತುಂಬಲಾರದ ಹಾನಿ. ನಮ್ಮ ಸನಾತನ ಲೋಕಕ್ಕೂ, ಸಾರಸ್ವತ ಲೋಕಕ್ಕೂ ಇಂಥವರು ಸಿಗುವುದು ದುರ್ಲಭ. ಆಚಾರ್ಯರು ಮತ್ತೆ ಹುಟ್ಟಿ ಬರಬೇಕು.


ಉಮೇಶ ಬೆಳಕೂಡ, ಮೂಡಲಗಿ

RELATED ARTICLES

Most Popular

close
error: Content is protected !!
Join WhatsApp Group